ನಿನ್ನೆ ಭಾರತ್ ಜೋಡೋ, ಇಂದು ಗೃಹ ಸಚಿವರ ಭೇಟಿ: ರಾಜಕೀಯದತ್ತ ನಿರ್ಮಾಪಕ ಉಮಾಪತಿ
ಬೆಂಗಳೂರು, ಅಕ್ಟೋಬರ್ 12: ಸಿನಿಮಾ ನಿರ್ಮಾಪಕ ಉಮಾಪತಿ ಇತ್ತೀಚಿಗೆ ರಾಜಕೀಯ ದತ್ತ ಒಲವು ತೋರಿದ್ದಾರೆ. ಈ ಹಿಂದೆ ಒಕ್ಕಲಿಗ ಸಮುದಾಯದ ಚುನಾವಣೆಗೆ ಸ್ಪರ್ಧಿಸಿದ್ದ ನಿರ್ಮಾಪಕ ಉಮಾಪತಿ, ಭರ್ಜರಿ ಗೆಲವು ಸಾಧಿಸಿದ್ದರು. ಈ ಗೆಲುವಿನ ಬೆನ್ನಲ್ಲೇ ಉಮಾಪತಿ ಕರ್ನಾಟಕ ರಾಜಕೀಯ ದತ್ತ ಒಲವು ತೋರಿದ್ದಾರೆ.
ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಪಾಯಾತ್ರೆಯಲ್ಲಿ ಭಾಗವಹಿಸಿದ್ದ ನಿರ್ಮಾಪಕ ಉಮಾಪತಿ, ನಿನ್ನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹರ್ತಿಕೋಟೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೊಂದಿಗೆ ಗುರುತಿಸಿಕೊಂಡಿದ್ದರು. ಆದರೆ ಇಂದು ಉಮಾಪತಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷದ ನಾಯಕರ ಜೊತೆ ಗುರುತಿಸಿಕೊಳ್ಳುತ್ತಿರುವ ಉಮಾಪತಿ ಅವರ ರಾಜಕೀಯ ನಡೆ ತೀವ್ರ ಕುತೂಹಲ ಹುಟ್ಟುಹಾಕಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾದ ಬಗ್ಗೆ ಹಾಗೂ ತಮ್ಮ ರಾಜಕೀಯ ನಡೆಯ ಬಗ್ಗೆ ಮಾತನಾಡಿರುವ ಉಮಾಪತಿ, ತಾವು ಯಾವ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧಿಸುತ್ತೇನೆ ಎನ್ನುವುದರ ಬಗ್ಗೆ ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಿದ್ದಾರೆ.

ನನಗೆ ಲೀಡರ್ ಆಗುವ ಸಾಮರ್ಥ್ಯ ಇದೆ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಾಪಕ ಉಮಾಪತಿ, " ರಾಜಕೀಯ ಅಂದರೆ ದೊಡ್ಡ ಸಮುದ್ರ ಇದ್ದಂತೆ. ನಾವಿನ್ನೂ ಚಿಕ್ಕ ಚಿಕ್ಕ ಮೀನುಗಳು. ಹೀಗಾಗಿ ಮುಂದೆ ನೋಡೋಣ. ಸದ್ಯ ಸಮುದಾಯ ಸಂಘದ ಚುನಾವಣೆಯಲ್ಲಿ ಗೆದ್ದಿದ್ದೇವೆ. ಇದಾದ ಮೇಲೆ ನನಗೆ ಒಂದು ಭರವಸೆ ಬಂದಿದೆ. ನನ್ನಲ್ಲಿ ಒಂದು ಕ್ಷೇತ್ರವನ್ನು ನಾಯಕನಾಗುವ ಆಗುವ ಸಾಮರ್ಥ್ಯ ಇದೆ ಅಂತಾ ಗೊತ್ತಾಗಿದೆ. ದೊಡ್ಡ ದೊಡ್ಡವರು ಹಾಗೂ ಜನರು ಆಶೀರ್ವಾದ ಮಾಡಿದರೆ ಮುಂದೆ ನೋಡೋಣ" ಎಂದರು.

ಯಾವ ಪಕ್ಷ ಸೇರುತ್ತಾರೆ ನಿರ್ಮಾಪಕ ಉಮಾಪತಿ..?
ಯಾವ ಕ್ಷೇತ್ರದಲ್ಲಿ ಸ್ಫರ್ಧಿಸಬೇಕು ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಉಮಾಪತಿ, "ನನ್ನ ಹುಟ್ಟೂರು ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಬರುತ್ತದೆ. ಹೀಗಾಗಿ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ನಿಲ್ಲಬೇಕು ಎಂದುಕೊಂಡಿದ್ದೇವೆ. ಯಾಕೆಂದರೆ ಅಲ್ಲಿ ನಮ್ಮ ಒಕ್ಕಲಿಗ ಸಮುದಾಯ 1 ಲಕ್ಷದ 10 ಸಾವಿರ ಜನ ಮತದಾರರಿದ್ದಾರೆ. ಹೀಗಾಗಿ ನಮಗೂ ಮೋಸ ಆಗಬಾರದು ಜೊತೆಗೆ ನಾವು ಅವಕಾಶ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಅಲ್ಲಿಗೆ ಪ್ರಯತ್ನ ಪಡುತ್ತಿದ್ದೇನೆ. ಯಾವ ಪಕ್ಷದಲ್ಲಿ ಅವಕಾಶ ಸಿಗುತ್ತದೆ ನೋಡೋಣ" ಎಂದು ಹೇಳಿದರು.

ಗೃಹ ಸಚಿವ-ನಿರ್ಮಾಪಕರ ನಡುವೆ ನಡೆದ ಚರ್ಚೆ ಏನು..?
ಗೃಹ ಸಚಿವ ಆಗರ ಜ್ಞಾನೇಂದ್ರ ಅವರನ್ನು ಭೇಟಿಯಾದ ಬಗ್ಗೆ ಮಾತನಾಡಿದ ಅವರು, "ಕಳೆದ ಮೂರು ತಿಂಗಳ ಹಿಂದೆ ಸಾಹೇಬರ ಸಮ್ಮುಖದಲ್ಲಿ ಒಂದು ಸಭೆ ನಡೆಯಿತು. ತೀರ್ಥಹಳ್ಳಿ ಒಕ್ಕಲಿಗ ಸಮುದಾಯದಿಂದ ದೊಡ್ಡ ಪ್ರಮಾಣದ ಸಮುದಾಯ ಭವನ ಕಟ್ಟುತ್ತಿದ್ದಾರೆ. ನಾವು ಸಮುದಾಯದ ಚುನಾವಣೆಯಲ್ಲಿ ಗೆದ್ದು ಕಿಮ್ಸ್ ಆಸ್ಪತ್ರೆಯ ಚೇರ್ಮನ್ ಆಗಿದ್ದೇವೆ. ಹೀಗಾಗಿ ಈ ಬಗ್ಗೆ ಗಮನ ಹರಿಸುವುದು ನನ್ನ ಆದ್ಯ ಕರ್ತವ್ಯವಾಗಿರುತ್ತದೆ. ಸಮುದಾಯದ ಬಗ್ಗೆ ಸಾಹೇಬರು ಒಂದು ಜವಾಬ್ದಾರಿ ಕೊಟ್ಟಿದ್ದರು ಅದರ ಬಗ್ಗೆ ತಿಳಿಸೋಣ ಎಂದು ಬಂದಿದ್ದೆ" ಎಂದರು.

ಬಹಳ ದೊಡ್ಡಮಟ್ಟದಲ್ಲಿ ಫಿಲ್ಮ್ ಸಿಟಿ ರಚನೆ
ಇನ್ನು ರಾಜಕೀಯದ ಜೊತೆಗೆ ತಮ್ಮ ಚಿತ್ರರಂಗದ ಕೆಲಸಗಳ ಬಗ್ಗೆ ಮಾತನಾಡಿದ ಉಮಾಪತಿ, "ನನಗೆ ಒಂದು ಹೆಸರು ಕೊಟ್ಟಿದೆ ಎಂದು ಅಂದರೆ ಅದು ಸಿನಿಮಾ, ಸಿನಿಮಾ ಬಗ್ಗೆ ನಮಗೆ ಬಹಳ ಪ್ರೀತಿನೂ ಇರುತ್ತದೆ. ಜವಾಬ್ದಾರಿನೂ ಇರುತ್ತದೆ. ದೊಡ್ಡ ಮಟ್ಟದಲ್ಲಿ ಫಿಲ್ಮ್ ಸಿಟಿಯಾಗುತ್ತಿದೆ. ಒಂದು ಎರಡು ತಿಂಗಳ ಹಿಂದೆ, ಸರ್ಕಾರದಿಂದ ನಮಗೆ ಅನುಮತಿ ಸಿಕ್ಕಿದೆ. ಇನ್ನು ಎರಡು ಮೂರು ತಿಂಗಳಿನಲ್ಲಿ ಫಿಲ್ಮ್ ಸಿಟಿ ಕೆಲಸಗಳು ಆರಂಭವಾಗಲಿದೆ. ಸಿನಿಮಾ ನಮಗೆ ಇಷ್ಟರ ಮಟ್ಟಿಗೆ ಹೆಸರು ಕೊಟ್ಟಿದೆ ಎಂದ ಮೇಲೆ ನಮ್ಮ ಬ್ಯಾನರ್ನಲ್ಲಿ ದುಡಿದ ಎಲ್ಲರ ಮೇಲೂ ನನಗೆ ಪ್ರೀತಿ ಇದೆ" ಎಂದರು.












Click it and Unblock the Notifications