ಬೆಂಗಳೂರು:14 ಕಳ್ಳರ ಬಂಧನ, 2.5 ಕೆಜಿ ಚಿನ್ನ ಜಪ್ತಿ
ಬೆಂಗಳೂರು, ಮೇ.8: ಉತ್ತರ ವಿಭಾಗದ ಪೊಲೀಸರ ಮಹತ್ವದ ಕಾರ್ಯಾಚರಣೆಯಲ್ಲಿ 14 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ಒಂದು ಕೋಟಿ ನಾಲ್ಕು ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, 36 ದ್ವಿಚಕ್ರವಾಹನಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಗಂಗಮ್ಮಗುಡಿ ಪೊಲೀಸರ ಕಾರ್ಯಾಚರಣೆ: ಗಂಗಮ್ಮಗುಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಜಾನ್ ಮೆಲ್ವಿನ್, ಆನಂದ ಎಂಬ ಕುಖ್ಯಾತ ಮನೆಗಳ್ಳರನ್ನು ಬಂಧಿಸಿ ಅವರಿಂದ ಸುಮಾರು 65 ಲಕ್ಷ ಬೆಲೆ ಬಾಳುವ ಒಂದು ಕೆ.ಜಿಗೂ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು ಒಂದೂವರೆ ಕೆ.ಜಿ. ಬೆಳ್ಳಿವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೀಗ ಹಾಕಿರುವ ಮನೆಗಳನ್ನು ಗುರುತಿಸಿ, ಮನೆಯ ಹಿಂಬಾಗಿಲನ್ನು ಒಡೆದು ಕಳ್ಳತನ ಮಾಡುತ್ತಿದ್ದ ಇವರ ಚಲನವಲಗಳು ಸಿ.ಸಿ. ಟಿವಿಯಲ್ಲಿ ಸೆರೆಯಾಗಿತ್ತು. ಏಳು ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ ಈ ಕಳ್ಳರ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.
ಆರೋಪಿಗಳ ಬಂಧನದಿಂದಾಗಿ ಗಂಗಮ್ಮಗುಡಿ, ಕೆಂಗೇರಿ, ಕೊಡಿಗೆಹಳ್ಳಿ, ಹೆಬ್ಬಾಳ ಹಾಗೂ ಯಶವಂತಪುರ ಪೊಲೀಸ್ ಠಾಣೆಗಳ ಒಟ್ಟು 10 ಮನೆಕಳವು ಪ್ರಕರಣವನ್ನು ಪೊಲೀಸರು ಬೇಧಿಸಿದಂತಾಗಿದೆ.[ಬೆಂಗಳೂರು: ಟೆಕ್ಕಿ ಕಾರನ್ನು ಕದ್ದ ಕಳ್ಳ ಸಿಕ್ಕಿ ಬಿದ್ದ]
ಸಂಜಯನಗರ ಪೊಲೀಸರ ಕಾರ್ಯಾಚರಣೆ: ಸಂಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ದೊಡ್ಡಬಳ್ಳಾಪುರ ಮೂಲದ ಸತೀಶಕುಮಾರ್, ಶ್ರೀನಿವಾಸ ಎಂಬವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಒಟ್ಟು9.80 ಲಕ್ಷ ಬೆಲೆ ಬಾಳುವ 250 ಗ್ರಾಂ ತೂಕದ ಚಿನ್ನಾಭರಣ, 2 ಬೈಕ್, 2 ಟಿ.ವಿ, ಒಂದು ಲ್ಯಾಪ್ಟ್ಯಾಪ್, 2 ಕ್ಯಾಮೆರಾ, 2 ಮೊಬೈಲ್ ಪೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ದ ಈ ಹಿಂದೆ ಕಬ್ಬನ್ಪಾರ್ಕ್, ಸಂಜಯನಗರ, ಯಶವಂತಪುರ, ಯಲಹಂಕ, ಮಲ್ಲೇಶ್ವರಂ, ವರ್ತೂರು ಮತ್ತು ಅಮೃತೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು
ಮಲ್ಲೇಶ್ವರಂ ಪೊಲೀಸರ ಕಾರ್ಯಾಚರಣೆ: ಪಾರ್ಕ್ಗಳ ಹತ್ತಿರ ಹಾಗೂ ಜನಸಂದಣಿ ಕಡಿಮೆ ಇರುವ ಸ್ಥಳಗಳಲ್ಲಿ ಹೊಂಚು ಹಾಕಿ ಒಂಟಿಯಾಗಿ ಓಡಾಡುವ ಸಾರ್ವಜನಿಕರಿಂದ ಬಲವಂತವಾಗಿ ಚಿನ್ನಾಭರಣಗಳನ್ನು ಕಿತ್ತುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ಯಶವಂತಪುರದ ಸಂಜಯ್ ಎಂದು ಗುರುತಿಸಲಾಗಿದ್ದು ಇವನ ಬಳಿಯಿಂದ ಐದು ಲಕ್ಷ ರೂ. ಬೆಲೆ ಬಾಳುವ 100 ಗ್ರಾಂ ಚಿನ್ನ ಹಾಗೂ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇತನ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ಹಾಗೂ ಯಶವಂತಪುರ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು ದಾಖಲಾಗಿದ್ದವು.
ಶ್ರೀರಾಂಪುರ ಪೊಲೀಸರ ಕಾರ್ಯಾಚರಣೆ: ಶ್ರೀರಾಂಪುರ ಪೊಲೀಸರು ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಈತನ ವಶದಿಂದ ಸುಮಾರು 8 ಲಕ್ಷ ರೂಪಾಯಿ ಬೆಲೆ ಬಾಳುವ 13 ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ.[ಸಿಸಿಟಿವಿ ಇಲ್ಲದ ಮಳಿಗೆ, ಕೆಜಿ ಚಿನ್ನ ಮಾಯ]
ಆರ್.ಟಿ.ನಗರ ಪೊಲೀಸರ ಕಾರ್ಯಾಚರಣೆ: ಬಿ.ಎಂ.ಟಿ.ಸಿ ಬಸ್ ಸ್ಟಾಂಡ್ಗಳಲ್ಲಿ ಮಹಿಳೆಯರ ಪರ್ಸ್ಗಳನ್ನು ಹಾಗೂ ನಕಲೀ ಕೀ ಬಳಸಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಂಜುನಾಥ, ವಿನಯ್ ಕುಮಾರ್, ತಾಸೀರ್, ಸೂರ್ಯ ಎಂದು ಗುರುತಿಸಲಾಗಿದ್ದು, ಇವರಿಂದ 4 ಲಕ್ಷ ರೂಪಾಯಿ ಬೆಲೆ ಬಾಳುವ 50 ಗ್ರಾಂ ತೂಕದ ಚಿನ್ನಾಭರಣ ಹಾಗೂ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ವಿದ್ಯಾರಣ್ಯಪುರ, ಹೆಬ್ಬಾಳ, ರಾಜಾಜಿನಗರ ಪೋಲಿಸರ ಕಾರ್ಯಾಚರಣೆ: ವಿದ್ಯಾರಣ್ಯಪುರ, ಹೆಬ್ಬಾಳ ಮತ್ತು ರಾಜಾಜಿನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಶ್ಯಾಮ್ ಸುಂದರ್ ಕುಮಾರ್, ಮುರುಳಿ, ರಾಜಮ್ಮ ಎಂದು ಗುರುತಿಸಲಾಗಿದ್ದು, ಬಂಧಿತರಿಂದ ಆರು ಲಕ್ಷ ರೂ.ಬೆಲೆ ಬಾಳುವ 207 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.