Video: ಬೆಂಗಳೂರಿನ ಜಲಾವೃತಗೊಂಡ ರಸ್ತೆಯಲ್ಲಿ ಟ್ಯೂಬ್ ಮೇಲಿನ ಪ್ರಯಾಣ!
ಬೆಂಗಳೂರು, ಸೆಪ್ಟೆಂಬರ್ 06: ಬೆಂಗಳೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆರಾಯ ಅವಾಂತರಗಳನ್ನು ಸೃಷ್ಟಿಸುತ್ತಿದ್ದಾನೆ. ರಾಜ್ಯ ರಾಜಧಾನಿ ರಸ್ತೆಗಳು ನದಿಗಳಂತೆ ಹರಿಯುತ್ತಿದ್ದರೆ ಇದರ ಮಧ್ಯೆ ಕಾಂಗ್ರೆಸ್ ನಾಯಕರ ಪ್ರತಿಭಟನೆಯು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಸಿಲಿಕಾನ್ ಸಿಟಿಯಲ್ಲಿ ಜಲಾವೃತಗೊಂಡ ರಸ್ತೆಯಲ್ಲಿ ಗಾಳಿ ತುಂಬಿದ ರಬ್ಬರ್ ಟ್ಯೂಬ್ ಮೇಲೆ ಸಂಚರಿಸುವ ಮೂಲಕ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಪ್ರತಿಭಟನೆ ನಡೆಸಿದರು.
ಬೆಂಗಳೂರಿನಲ್ಲಿ ಮಳೆಯಿಂದ ಜಲಾವೃತ ರಸ್ತೆಯ ಮೇಲೆ ಗಾಳಿ ತುಂಬಿದ ರಬ್ಬರ್ ಟ್ಯೂಬ್ ಬಳಸಿ ಪ್ರತಿಭಟಿಸಿದ ಮೊಹಮ್ಮದ್ ನಲಪಾಡ್, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತೊಲಗಲಿ ತೊಲಗಲಿ, ಬಿಜೆಪಿ ತೊಲಗಲಿ: ಪ್ಲಾಸ್ಟಿಕ್ ಟ್ಯೂಬ್ ಮೇಲೆ ಕುಳಿತು ಜಲಾವೃತಗೊಂಡ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಮೊಹಮ್ಮದ್ ನಲಪಾಡ್ಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಸಾಥ್ ನೀಡಿದರು. ಕೈಯಲ್ಲಿ ಪೋಸ್ಟರ್ ಹಿಡಿದು ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ತೊಲಗಲಿ ತೊಲಗಲಿ, ಬಿಜೆಪಿ ತೊಲಗಲಿ ಎಂದು ಘೋಷಣೆ ಹಾಕಿದರು.
ಬೆಂಗಳೂರಿನಲ್ಲಿ ದಾಖಲೆಯ ಮಳೆ: ಸಿಲಿಕಾನ್ ಸಿಟಿಯಲ್ಲಿ ಇದುವರೆಗೂ ದಾಖಲೆ ಪ್ರಮಾಣದ ಮಳೆಯಾಗಿದೆ. ಕಳೆದ 51 ವರ್ಷಗಳಲ್ಲೇ ಅತಿಹೆಚ್ಚು ಮಳೆಯನ್ನು ಬೆಂಗಳೂರು ಮಂದಿ ಈ ಬಾರಿ ನೋಡಿದ್ದಾರೆ. ಮಳೆಯ ಅವಾಂತರಕ್ಕೆ ಅಕ್ರಮವಾಗಿ ಮಾಡಿಕೊಂಡಿರುವ ಒತ್ತುವರಿ ಹಾಗೂ ಅವೈಜ್ಞಾನಿಕ ಕಾಮಗಾರಿಗಳೇ ಕಾರಣ ಎಂದು ದೂಷಿಸಲಾಗುತ್ತಿದೆ. ಇದರ ಮಧ್ಯೆ ಬೆಂಗಳೂರಿನಲ್ಲಿ ಮಳೆ ಅಬ್ಬರ ಮುಂದುವರಿಯುತ್ತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರವೂ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ ಐದು ದಿನಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು ಮತ್ತು ಮಿಂಚು ಸಹಿತ ಪ್ರತ್ಯೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಮಂಗಳವಾರ ಮಳೆ ಮುಂದುವರಿಯಬಹುದು ಎಂದು ಐಎಂಡಿ ತಿಳಿಸಿದೆ.
#WATCH | Mohammed Haris Nalapad, President, Karnataka Pradesh Youth Congress Committee floats using an inflated rubber tube on a waterlogged road in #Bengaluru to protest against the state govt demanding a solution to severe waterlogging witnessed in the city pic.twitter.com/IF8DdmNa55
— ANI (@ANI) September 6, 2022