ಖಾತೆ ಆಯ್ತು, ಇಂದು ಕೊಠಡಿಗಾಗಿ ಸಚಿವರ ಕಿತ್ತಾಟ

ಏನಾಯ್ತು ಅಂದರೆ ಕಾಡಿಬೇಡಿ ಸಚಿವ ಸ್ಥಾನ ಪಡೆದಿರುವ ಡಿಕೆ ಶಿವಕುಮಾರ್ ಮತ್ತು ಸಚಿವ ಆಂಜನೇಯ ಮಧ್ಯೆ ಸಚಿವರ ಕೊಠಡಿಗಾಗಿ ಕಿತ್ತಾಟ ನಡೆದಿದೆ. ಶಕ್ತಿಕೇಂದ್ರ ವಿಧಾನಸೌಧದಲ್ಲಿ ಸಚಿವ ಆಂಜನೇಯಗೆ 340-341ನೇ ಕೊಠಡಿ ನಿಗದಿಯಾಗಿತ್ತು. ಈ ಹಿಂದೆ ಅವರು 336ರಲ್ಲಿದ್ದರು. ಆದರೆ ನೂತನ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು 340-341ನೇ ಕೊಠಡಿಯೇ ತಮಗೂ ಬೇಕು ಎಂದು ಪಟ್ಟುಹಿಡಿದಿದ್ದರಂತೆ.
ಇದರ ಸುಳಿವರಿತ ಸಚಿವ ಆಂಜನೇಯ ಅವರು ಇಂದು ವಿಧಾನಸೌಧದಲ್ಲಿ ಏರ್ಪಡಿಸಿದ್ದ ಬುಡಕಟ್ಟು ಜನರ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ತಮ್ಮ ಕೋಪತಾಪ ಹೊರಹಾಕಿದ್ದಾರೆ. ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ರೌದ್ರಾವತಾರ ತಾಳಿ ಆಕ್ರೋಶವನ್ನು ಹೊರಹಾಕಿದ್ದಾರೆ. ಸಚಿವ ಆಂಜನೇಯ ನಡುವಳಿಕೆಯಿಂದ ಸಭೆಯಲ್ಲಿ ಪಾಲ್ಗೊಂಡಿದ್ದವರಿಗೆ ಒಂದು ಕ್ಷಣ ದಂಗುಬಡಿಸಿದ್ದಂತೂ ಸತ್ಯ.
ಈ ಸಮಾರಂಭಕ್ಕೆ ಕೇಂದ್ರ ಸಣ್ಣ ಕೈಗಾರಿಕಾ ಸಚಿವ ಕೆಎಚ್ ಮುನಿಯಪ್ಪ ಬಂದಿದ್ದರು. ಅಧಿಕಾರಿಗಳು, ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಸಭೆಯೂ ಶಾಂತವಾಗಿಯೇ ನಡೆಯುತ್ತಿತ್ತು. ಆದರೆ ಕ್ಯಾಲೆಂಡರ್ ಬಿಡುಗಡೆ ಮಾಡುವ ಸಂದರ್ಭದಲ್ಲಿ ಒಬ್ಬ ಅಧಿಕಾರಿಯ ಮುಖ ನೋಡಿದ ಕೂಡಲೇ ಸಚಿವ ಆಂಜನೇಯ ಕೆಂಡಾಮಂಡಲವಾದರು.
'ಬೀಗ ತೆಗೆಯಿರಿ, ಗೋಡೆ ಒಡೆಯಿರಿ, ಅದ್ಯಾವನು ಬರುತ್ತಾನೋ ನಾನು ನೋಡೇ ಬಿಡುತ್ತೇನೆ. ಎಷ್ಟು ದಿನ ಎಂದು ನೋವನ್ನು ನುಂಗಿಕೊಂಡು ಇರಲಿ. ಕಚೇರಿಗೆ ಜನ ಬಂದ್ರೆ ಕುಳಿತುಕೊಳ್ಳಲು ಜಾಗವಿಲ್ಲ. ತೆಗೆಯಿರಿ ಬೀಗ, ನಡೆಯಿರಿ ನಾನೇ ಬರುತ್ತೇನೆ' ಎಂದು ಸಿಕ್ಕಾಪಟ್ಟೆ ಕೂಗಾಡಿಬಿಟ್ಟರು.
ವಿಧಾನಸೌಧದಲ್ಲಿರುವ 340-341 ಅಕ್ಕಪಕ್ಕದಲ್ಲಿರುವ ಎರಡು ಕೊಠಡಿಗಳು. ಆದರೆ ಎರಡು ಕೊಠಡಿಗಳ ನಡುವೆ ಒಂದು ಗೋಡೆ ಅಡ್ಡ ಬಂದಿದೆ. ಗೋಡೆಯನ್ನು ಒಡೆದರೆ ಕೊಠಡಿ ವಿಶಾಲವಾಗುತ್ತದೆ. ಇಂತಹ ಸುವಿಶಾಲ ಕೊಠಡಿ ಎಲ್ಲಿ ತಮ್ಮ ಕೈತಪ್ಪಿ ಹೋಗುತ್ತದೋ, ನೂತನ ಸಚಿವರಾದ ಶಿವಕುಮಾರ್, ರೋಷನ್ ಬೇಗ್ ಅವರು ಆಕ್ರಮಿಸಿಕೊಂಡು ಬಿಡುತ್ತಾರೋ ಎಂಬ ಹತಾಶೆ/ ಆತಂಕ ಅವರನ್ನುಯ ಕಾಡಿದೆ.
ಜತೆಗೆ ಸಚಿವ ಶಿವಕುಮಾರ್ ಅವರೂ ಸಹ 340-341ನೇ ಕೊಠಡಿಯನ್ನೇ ಬಯಸಿದ್ದಾರೆ ಎಂಬುದು ಗೊತ್ತಾಗಿ ಸಿಎಂ ಸಿದ್ದು ಅವರ ಪರಮಾಪ್ತ ಸಚಿವ ಆಂಜನೇಯ ಅವರು ' ಗೋಡೆ ಒಡೆಯಿರಿ, ಬೀಗ ತೆಗೆಯಿರಿ. ನನ್ನ ಕಚೇರಿಯಲ್ಲಿರುವ (336ನೇ ಕೊಠಡಿ) ಎಲ್ಲ ಸಾಮಗ್ರಿ, ಕಡತಗಳನ್ನೂ ಈಗಲೇ ಹೊಸ ಕೊಠಡಿಗೆ ಸ್ಥಳಾಂತರ ಮಾಡಿ' ಎಂದು ಸ್ಥಳದಲ್ಲಿದ್ದ DAPR ಅಧಿಕಾರಿಗಳಿಗೆ ಫರ್ಮಾನು ಹೊರಡಿಸಿದರು. ಮುಂದೇನು? ಅದು ತಕ್ಷಣಕ್ಕೆ ತಿಳಿದುಬಂದಿಲ್ಲ. ಅಪ್ ಡೇಟ್ ಗಾಗಿ ಒನ್ ಇಂಡಿಯಾ ನೋಡುತ್ತಿರಿ.












Click it and Unblock the Notifications