ಮಂಗಳೂರು ಗೋಲಿಬಾರ್ ಗೆ ಆದೇಶಿಸಿದ್ದು ಯಡಿಯೂರಪ್ಪ: ಸಿದ್ದರಾಮಯ್ಯ
ಬೆಂಗಳೂರು, ಡಿಸೆಂಬರ್ 25: ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಸಮಯ ನಡೆದ ಗೋಲಿಬಾರ್ ಗೆ ಆದೇಶ ನೀಡಿದ್ದು ಯಡಿಯೂರಪ್ಪ ಎಂಬುದು ಖಾತ್ರಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಫೇಸ್ಬುಕ್ ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಸಿದ್ದರಾಮಯ್ಯ, ಮಂಗಳೂರು ಗೋಲಿಬಾರ್ ನಲ್ಲಿ ಮೃತರಾದವರಿಗೆ ನೀಡಿದ್ದ ಪರಿಹಾರ ಹಿಂಪಡೆದಿರುವ ಯಡಿಯೂರಪ್ಪ ನಿರ್ಧಾರವನ್ನು ಕಟುಮಾತಿನಲ್ಲಿ ಖಂಡಿಸಿದ್ದಾರೆ.
'ಚುನಾಯಿತ ಸರ್ಕಾರವೊಂದು ಇಷ್ಟು ಅಮಾನವೀಯ, ಕ್ರೂರಿ, ಕೋಮುವಾದಿ ಆಗಬಾರದು' ಎಂದಿರುವ ಸಿದ್ದರಾಮಯ್ಯ, ಗಲಭೆಯಲ್ಲಿ ಸತ್ತವರಿಗೆ ಪರಿಹಾರ ಇಲ್ಲ ಎನ್ನುವ ಮೂಲಕ ಸಿಎಂ ಯಡಿಯೂರಪ್ಪ ತನಿಖೆಯ ಮೊದಲೇ ತೀರ್ಪು ನೀಡಿದ್ದಾರೆ ಎಂದಿದ್ದಾರೆ.

'ಮಂಗಳೂರು ಗಲಭೆಗೆ ಗುಂಡೇಟಿನಿಂದ ಸತ್ತವರೇ ಕಾರಣ ಎಂದು ತೀರ್ಪು ನೀಡಿರುವ ಮುಖ್ಯಮಂತ್ರಿಗಳೇ, ಸಿಐಡಿ ತನಿಖೆಯ ನಾಟಕ ಯಾಕೆ? ಅದನ್ನು ನಿಲ್ಲಿಸಿಬಿಡಿ. ಈಗ ಖಾತ್ರಿಯಾಗಿದೆ, ಹೆಣ ಬೀಳಿಸಲು ಪೊಲೀಸರಿಗೆ ಆದೇಶ ನೀಡಿದವರು ನೀವೇ ಎಂದು' ಎಂದು ಸಿದ್ದರಾಮಯ್ಯ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ 'ಮಂಗಳೂರು ಗೋಲಿಬಾರ್ ಗೆ ಸರ್ಕಾರ ಆದೇಶ ನೀಡಿರಲಿಲ್ಲ' ಎಂದು ಯಡಿಯೂರಪ್ಪ ಹೇಳಿದ್ದರು. ಮಂಗಳೂರು ಗೋಲಿಬಾರ್ ನಲ್ಲಿ ಸತ್ತಿದ್ದ ಇಬ್ಬರ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರವನ್ನೂ ಘೋಷಿಸಿದ್ದರು.
ಆದರೆ ಇಂದು ಮಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, 'ಮಂಗಳೂರು ಗೋಲಿಬಾರ್ ನಲ್ಲಿ ಮೃತರಾದವರಿಗೆ ನೀಡಿದ್ದ ಪರಿಹಾರ ರದ್ದು ಮಾಡಲಾಗಿದೆ, ಅವರು ಅಪರಾಧಿಗಳಲ್ಲ ಎಂಬುದು ಸಾಬೀತಾದರೆ ಮಾತ್ರವೇ ಪರಿಹಾರ ನೀಡಲಾಗುವುದು' ಎಂದು ಹೇಳಿದ್ದಾರೆ.












Click it and Unblock the Notifications