ಕಮಲ ಹಿಡಿದ ಕೆ.ಗೋಪಾಲಯ್ಯರಿಗೆ ಒಲಿದ 'ಮಹಾಲಕ್ಷ್ಮಿ'
ಬೆಂಗಳೂರು, ಡಿಸೆಂಬರ್.09: ರಾಜ್ಯ ವಿಧಾನಸಭಾ ಉಪ ಚುನಾವಣೆಯಲ್ಲಿ ತೀವ್ರ ಲಕ್ಷ್ಯ ಸೆಳೆದಿರುವ ಕ್ಷೇತ್ರಗಳ ಪೈಕಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕೂಡಾ ಒಂದು. ದೊಡ್ಡಗೌಡರ ವಿರುದ್ಧ ಮುನಿಸಿಕೊಂಡು ಕಮಲ ಹಿಡಿದು ಮತದಾರನ ಎದುರು ನಿಂತ ಕೆ.ಗೋಪಾಲಯ್ಯರಿಗೆ ಮಹಾಲಕ್ಷ್ಮಿ ಒಲಿದಿದ್ದಾಳೆ.
ಎರಡು ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದ ಕೆ.ಗೋಪಾಲಯ್ಯ ಇತ್ತೀಚಿಗಷ್ಟೇ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಕಮಲ ಪಾಳಯಕ್ಕೆ ಸೇರಿದ ತಮ್ಮ ಶಾಸಕರನ್ನು ಕ್ಷೇತ್ರದ ಮತದಾರರು ಮತ್ತೊಮ್ಮೆ ಒಪ್ಪಿಕೊಂಡಿದ್ದಾರೆ. ಆ ಮೂಲಕ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎಂಬ ಸಂದೇಶವನ್ನು ಸಾರಿದ್ದಾರೆ.
ಡಿಸೆಂಬರ್.05ರಂದು ನಡೆದ ಮತದಾನದ ವೇಳೆ ಶೇಕಡಾವಾರು 51.21ರಷ್ಟು ಮತದಾನ ನಡೆದಿತ್ತು. ಡಿಸೆಂಬರ್.09ರ ಸೋಮವಾರ ನಡೆದ ಮತಎಣಿಕೆ ಪ್ರಕ್ರಿಯೆಯಲ್ಲಿ ಕೆ.ಗೋಪಾಲಯ್ಯ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದರು. ಅಂತಿಮವಾಗಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜು ಹಾಗೂ ಜೆಡಿಎಸ್ ಅಭ್ಯರ್ಥಿ ಡಾ.ಗಿರೀಶ್ ನಾಕಿ ಅವರ ವಿರುದ್ಧ ಭಾರಿ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಗೆಲುವಿನ ನಗೆ ಬೀರಿದರು.

2018ರಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೆ.ಗೋಪಾಲಯ್ಯ ಗೆಲುವು ಸಾಧಿಸಿದ್ದು, ಈ ಬಾರಿ ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ. ಶಿವರಾಜು ಸ್ಪರ್ಧಿಸಿದರೆ, ಜೆಡಿಎಸ್ ನಿಂದ ಡಾ.ಗಿರೀಶ್ ನಾಕಿ ಸ್ಪರ್ಧಿಸಿದ್ದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪಡೆದ ಮತ
ಗೋಪಾಲಯ್ಯ- 86,032
ಶಿವರಾಜ್- 31,440
ಗಿರೀಶ್ ನಾಶಿ- 23,418
ಗೆಲುವಿನ ಅಂತರ - 54,592












Click it and Unblock the Notifications