ಚುನಾವಣಾ ಅಕ್ರಮದ ಮಾಹಿತಿ ನೀಡಿದರೆ ರೂ.1 ಲಕ್ಷ: ರವಿಕೃಷ್ಣಾ ರೆಡ್ಡಿ
ಬೆಂಗಳೂರು, ಜೂನ್ 01: ಜಯನಗರ ಚುನಾವಣೆ ಸಲುವಾಗಿ ಕಾಂಗ್ರೆಸ್ ಅಕ್ರಮ ಮಾಡುತ್ತಿದ್ದು, ಅದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ಜಯನಗರ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಎರಡು ದಿನಗಳ ಹಿಂದೆ ಕಾಂಗ್ರೆಸ್ನವರು ವೋಟಿಗಾಗಿ ಸೀರೆಗಳನ್ನು ಹಂಚುತ್ತಿದ್ದಾಗ ನಾವು ಹೋಗಿ ಅದನ್ನು ತಡೆಯಲು ಪ್ರಯತ್ನಿಸಿದ ಸಂದರ್ಭದಲ್ಲಿ ನಮ್ಮ ಮೇಲೆ ಕಾಂಗ್ರೆಸ್ ನ ಗೂಂಡಾಗಳು ರಾತ್ರಿ 12 ಗಂಟೆಯ ಸಮಯದಲ್ಲಿ ಹಲ್ಲೆ ಮಾಡಿ ಮೊಬೈಲನ್ನು ಸಹ ಕಿತ್ತುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.

ಈಗಾಗಲೇ ಮತದಾರರಿಗೆ ಹತ್ತಾರು ಸಾವಿರ ಸೀರೆಗಳನ್ನು ಹಂಚಲಾಗಿದೆ ಈ ಬಗ್ಗೆ ದೂರು ನೀಡಿದರೂ ಉಪಯೋಗವಾಗಿಲ್ಲ. ಈ ಒಟ್ಟಾರೆ ಘಟನೆಯಲ್ಲಿ ಚುನಾವಣಾ ಆಯೋಗ ಮತ್ತು ಪೊಲೀಸರು ಅಕ್ರಮಗಳನ್ನು ತಡೆಯುವಲ್ಲಿ ದಾರುಣವಾಗಿ ವಿಫಲರಾಗಿದ್ದಾರೆ ಎಂದು ಅವರು ದೂರಿದ್ದಾರೆ.
ಚುನಾವಣಾ ಆಯೋಗದ ವರ್ತನೆಯಿಂದ ಬೇಸತ್ತಿರುವ ರವಿಕೃಷ್ಣಾ ರೆಡ್ಡಿ ಅವರು ಜನರ ಸಹಾಯದಿಂದ ಅಕ್ರಮ ತಡೆಗಟ್ಟುವ ಪ್ರಯತ್ನಕ್ಕೆ ಕೈ ಹಾಕಿದ್ದು, ಕ್ಷೇತ್ರದಲ್ಲಿ "ಮುಕ್ತ ಮತ್ತು ನ್ಯಾಯಸಮ್ಮತ" ಚುನಾವಣೆಯನ್ನು ಬಯಸುವ ಜನತೆ ಇಂತಹ ದುಷ್ಕೃತ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ನಮಗೆ ತಲುಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಯಾವುದೇ ಪಕ್ಷ ಅಥವಾ ಅಭ್ಯರ್ಥಿ, ಅಥವ ಅವರ ಪರವಾಗಿರುವವರು ಮತದಾರರಿಗೆ ಹಣ ಹೆಂಡ ಕುಕ್ಕರ್ ನಿಕ್ಕರ್ ಸೀರೆ ಮುಂತಾದ ವಸ್ತುಗಳನ್ನು ಹಂಚುತ್ತಿರುವುದನ್ನು ವಿಡಿಯೋ ಮಾಡಿ ಕೊಟ್ಟರೆ, ಅವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಕೊಡಲಾಗುವುದು ಎಂದು ಸಹ ರವಿಕೃಷ್ಣಾ ರೆಡ್ಡಿ ಅವರು ಘೋಷಿಸಿದ್ದಾರೆ.
ಯಾವುದೇ ಪಕ್ಷ, ಅಭ್ಯರ್ಥಿ, ಅಭ್ಯರ್ಥಿಯ ಬೆಂಬಲಿಗರು ಚುನಾವಣಾ ಅಕ್ರಮದಲ್ಲಿ ತೊಡಗಿರುವ ವಿಡಿಯೋ ಸಿಕ್ಕ ತಕ್ಷಣ 7975625575 ಸಂಖ್ಯೆಗೆ ಕರೆ ಮಾಡಿ ಮಾಹಿತಿ ತಿಳಿಸಿದರೆ, ವಿಡಿಯೋ ಕಳಿಸಿದರೆ ಬಹುಮಾನದ ಹಣ ನಿಮ್ಮದಾಗಲಿದೆ.
ಜಯನಗರ ಚುನಾವಣೆಯ ಬಿಜೆಪಿ ಅಭ್ಯರ್ಥಿ ವಿಜಯಕುಮಾರ್ ಅವರು ಸಾವನ್ನಪ್ಪಿದ ಕಾರಣ ಚುನಾವಣೆಯನ್ನು ರದ್ದು ಮಾಡಲಾಗಿತ್ತು. ಈಗ ಜೂನ್ 11 ಕ್ಕೆ ಮತದಾನ ನಡೆಯಲಿದೆ.












Click it and Unblock the Notifications