ರಮೇಶ್ ಕುಮಾರ್ ಅತ್ಯಾಚಾರ ಸಂತ್ರಸ್ತೆ ಹೋಲಿಕೆಗೆ ಖಂಡನೆ
ಬೆಂಗಳೂರು, ಫೆಬ್ರವರಿ 13: ಸ್ಪೀಕರ್ ರಮೇಶ್ ಕುಮಾರ್ ಅವರು ಆಪರೇಷನ್ ಕಮಲದ ಬಗ್ಗೆ ವಿವರಿಸುತ್ತಾ ತಮ್ಮನ್ನು ಅತ್ಯಾಚಾರ ಸಂತ್ರಸ್ತರಿಗೆ ಹೋಲಿಕೆ ಮಾಡಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸಿದೆ.
ವಿಧಾನಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರು ಆಪರೇಷನ್ ಕಮಲ ಆಡಿಯೋ ಬಗ್ಗೆ ಪ್ರಸ್ತಾಪಿಸುತ್ತಾ ತಮ್ಮ ಅಸಹಾಯಕತೆಯನ್ನು ವಿವರಿಸಲು ಅತ್ಯಾಚಾರದ ಸಂತ್ರಸ್ತೆಗೆ ತಮ್ಮನ್ನು ಹೋಲಿಸಿಕೊಂಡು ಅತ್ಯಂತ ಹಗುರವಾಗಿ ಮಾತುಗಳನ್ನು ಆಡಿದ್ದಾರೆ.
ರಮೇಶ್ ಕುಮಾರ್ 'ಅತ್ಯಾಚಾರ ಸಂತ್ರಸ್ತೆ' ಹೋಲಿಕೆಗೆ ತೀವ್ರ ಖಂಡನೆ
ಈ ಸಮಯದಲ್ಲಿ ಸದನದಲ್ಲಿ ಮಾಜಿ,ಹಾಲಿ ಮುಖ್ಯಮಂತ್ರಿಗಳು, ಆಡಳಿತ ವಿರೋಧ ಪಕ್ಷಗಳ ಶಾಸಕರು, ಮಹಿಳಾ ಶಾಸಕರು ಹಾಜರಿದ್ದರು.ಅಷ್ಟೇ ಅಲ್ಲದೆ ಅತ್ಯಾಚಾರ ಸಂತ್ರಸ್ತರಿಗೆ ಅವಹೇಳನ ಮಾಡುವ, ಕನಿಷ್ಟ ಲಿಂಗ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳದ ಲಘು ಮಾತುಗಳನ್ನು ಹಾಸ್ಯವೆಂಬಂತೆ ಪರಿಗಣಿಸಿ ನಗುತ್ತಿದ್ದುದು ಅವರ ಲಿಂಗಸೂಕ್ಷ್ಮವಿಲ್ಲದ ಮನಃಸ್ಥಿತಿಯ ದ್ಯೋತಕವಾಗಿದೆ.
ಸದನದ ಸದಸ್ಯರ ಈ ನಡೆಯೂ ಖಂಡನೀಯ. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಇದನ್ನು ಬಲವಾಗಿ ಖಂಡಿಸುತ್ತದೆ.ಅತ್ಯಾಚಾರದಂತಹ ಬರ್ಭರ ಕೃತ್ಯ ವನ್ನು ಮತ್ತು ಅದಕ್ಕೆ ಒಳಗಾದ ಮಹಿಳೆಯರು ಎದುರಿಸುವ ಸಂಕಟ ಅವಮಾನದ ಕ್ಷಣಗಳನ್ನು ನಗೆಚಾಟಿಕೆ ಮಾಡಿ ಆಡಿಕೊಂಡು ನಕ್ಕ ಈ ಸದನದ ಸದಸ್ಯರು ಯಾವುದಾದರೂ ಅತ್ಯಾಚಾರದ ಸಂತ್ರಸ್ತೆಯ ಬಗ್ಗೆ ಕಾಳಜಿ,ಅಂತಃಕರಣ ತೋರಿಸಬಲ್ಲರೇ?
ಹಾಗೆಂದೇ ರಾಜ್ಯದಲ್ಲಿ ಅತ್ಯಾಚಾರ ಸಂತ್ರಸ್ತರು ನ್ಯಾಯದ ಬಾಗಿಲಲ್ಲಿ ವರ್ಷಾನುಗಟ್ಟಲೆ ಕಾದು ನಿಲ್ಲುವ ಸ್ಥಿತಿ ಇದೆ.ಈ ಕೂಡಲೇ ಸಭಾಧ್ಯಕ್ಷರು ಮತ್ತು ಸದನದ ಸದಸ್ಯರು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಮತ್ತು ಮುಂದೆಂದೂ ಹೀಗಾಗದಂತೆ ಎಚ್ಚರ ವಹಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಆಗ್ರಹಿಸುತ್ತದೆ.