PSI ನೇಮಕಾತಿ ಅಕ್ರಮದಲ್ಲಿ ಗೃಹ ಸಚಿವರ ನೇರ ಪಾತ್ರವಿದೆ: ದಿನೇಶ್ ಗುಂಡೂರಾವ್
ಬೆಂಗಳೂರು, ಏಪ್ರಿಲ್ 30: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇರ ಪಾತ್ರವಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ಗೃಹ ಸಚಿವ ಆರಗ ಜ್ಞಾನೇಂದ್ರ 545 ಪಿಎಸ್ಐ ನೇಮಕಾತಿಯಲ್ಲಿ ಅಕ್ರಮವೇ ನಡೆದಿಲ್ಲ ಎಂದಿದ್ದರು. ಈಗ ಸರ್ಕಾರ ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಪಡಿಸಿ ಮರು ಪರೀಕ್ಷೆಗೆ ಮುಂದಾಗಿದೆ. ಸರ್ಕಾರ ಮರು ಪರೀಕ್ಷೆಗೆ ಮುಂದಾಗಿರುವುದು ಡ್ಯಾಮೇಜ್ ಕಂಟ್ರೋಲರ್ ತಂತ್ರವಷ್ಟೆ. ಆದರೆ ಗೃಹ ಸಚಿವರ ಪಾತ್ರವಿಲ್ಲದೇ ಪಿಎಸ್ಐ ಅಕ್ರಮ ನೇಮಕಾತಿ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಗೃಹ ಸಚಿವರ ನೇರ ಪಾತ್ರವಿದೆ. ಪ್ರಕರಣದ ಕಿಂಗ್ಪಿನ್ ಬಂಧಿತೆ ದಿವ್ಯಾ ಹಾಗರಗಿ ಮನೆಗೆ ಜ್ಞಾನೇಂದ್ರರವರು ಡೀಲಿಂಗ್ ಮಾಡಲು ಹೋಗಿದ್ದು ಸತ್ಯವಲ್ಲವೆ? ಪ್ರಕರಣದ ಬಗ್ಗೆ ಮಾಹಿತಿ ಕೊಡುವವರಿಗೆ ನೋಟಿಸ್ ಕೊಡುವ ಸಿಐಡಿ, ಸಚಿವ ಜ್ಞಾನೇಂದ್ರರ ವಿಚಾರಣೆಯನ್ನು ಇನ್ನೂ ಯಾಕೆ ನಡೆಸಿಲ್ಲ? ಸಿಐಡಿ ಯಾರನ್ನು ರಕ್ಷಿಸುತ್ತಿದೆ ಎಂದು ದಿನೇಶ್ ಗುಂಡೂರಾವ್ ಕಟುವಾಗಿ ಪ್ರಶ್ನಿಸಿದ್ದಾರೆ.

ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಾಥ್ ನೀಡಿರುವ ಆರೋಪದಡಿ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿಯನ್ನು ಶುಕ್ರವಾರ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಸದ್ಯ 11 ದಿನಗಳ ಕಾಲ ದಿವ್ಯಾ ಹಾಗರಗಿಯನ್ನು ನ್ಯಾಯಾಲಯ ಸಿಐಡಿ ಕಸ್ಟಡಿಗೆ ನೀಡಿದೆ.
ಪ್ರಧಾನಿ ಕಚೇರಿಗೆ ಬಿಜೆಪಿ ಯುವ ನಾಯಕನ ದೂರು
ರಾಜ್ಯ ಸರ್ಕಾರ ಪಿಎಸ್ಐ ನೇಮಕಾತಿಯನ್ನೇ ರದ್ದುಗೊಳಿಸಿ ಆದೇಶ ನೀಡಿದೆ. ಮರು ಪರೀಕ್ಷೆಗೂ ದಿನಾಂಕ ನಿಗದಿ ಪಡಿಸಲಿದೆ. ಆದರೆ ಇತ್ತ ಬಿಜೆಪಿಯ ಯುವ ಮುಖಂಡನೊಬ್ಬ ಪ್ರಧಾನಿ ಕಚೇರಿಗೆ ದೂರು ನೀಡಿದ್ದಾನೆ. ಪಿಎಸ್ಐ ಅಕ್ರಮ ನೇಮಕಾತಿ ವಿರುದ್ಧ ಸಿಡಿದೆದ್ದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಪ್ತ, ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ರಾಘವ ಅನ್ನಿಗೇರಿ ಪ್ರಧಾನಿ ಕಚೇರಿಗೆ ದೂರು ನೀಡಿದ್ದಾನೆ. ಇ-ಮೇಲ್ ಮೂಲಕ ದೂರು ಸಲ್ಲಿಕೆ ಮಾಡಿದ್ದು, ದೂರು ರಜಿಸ್ಟರ್ ಆಗಿರುವ ಬಗ್ಗೆ ಪ್ರಧಾನಿ ಕಚೇರಿಯಿಂದ ಸಂದೇಶ ಕೂಡ ಬಂದಿದೆ.

ಸಿಐಡಿ ಬೇಡ, ಸಿಬಿಐ ಮೂಲಕ ತನಿಖೆ ನಡೆಯಲಿ
ರಾಘವ ಅನ್ನಿಗೇರಿ ತಮ್ಮದೆ ಬಿಜೆಪಿ ಸರ್ಕಾರದ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಸರ್ಕಾರ ಸಿಐಡಿಗೆ ಪ್ರಕರಣ ಹಸ್ತಾಂತರಿಸಿ, ತನಿಖೆ ಕೂಡ ಚಾಲ್ತಿಯಲ್ಲಿದೆ. ಆದರೆ ಸಿಐಡಿಯಿಂದ ತನಿಖೆ ಬೇಡ, ಸಿಬಿಐ ಮೂಲಕವೇ ತನಿಖೆ ನಡೆಯಬೇಕು ಎಂದು ರಾಘವ ಅನ್ನೀಗೇರಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಪಿಡಬ್ಲೂಡಿ, ನೀರಾವರಿ ಇಲಾಖೆಗಳ ಭ್ರಷ್ಟಾಚಾರದ ತನಿಖೆಗೂ ಆಗ್ರಹ
ರಾಘವ ಅನ್ನಿಗೇರಿ ಪ್ರಧಾನಿ ಕಚೇರಿಗೆ ನೀಡಿದ ದೂರಿನಲ್ಲಿ ಕೇವಲ ಪಿಎಸ್ಐ ಅಕ್ರಮ ನೇಮಕಾತಿ ಬಗ್ಗೆ ಸಿಬಿಐ ತನಿಖೆಯ ಬಗ್ಗೆ ಮಾತ್ರ ಉಲ್ಲೇಖಿಸದೇ, ರಾಜ್ಯದಲ್ಲಿ ನಡೆದ ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆಯೂ ತನಿಖೆ ನಡೆಯಬೇಕು. ಹಿಂದೆ ನಡೆದ ಎಸ್ಡಿಎ, ಎಫ್ಡಿಎ ನೇಮಕಾತಿಯಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಹಣ ಪಡೆದು ನೇಮಕಾತಿ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಹಿಂದಿನ ನೇಮಕಾತಿಯ ಎಲ್ಲ ದಾಖಲಾತಿಗಳನ್ನು ಪ್ರಧಾನಿಗಳು ಸಂಗ್ರಹಿಸಿಕೊಂಡು ತನಿಖೆಗೆ ಆದೇಶಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿರುವುದು ಬಿಜೆಪಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.












Click it and Unblock the Notifications