ನೀಲಮ್ಮನ ಚೀಟಿ ವ್ಯವಹಾರದಲ್ಲಿ ಓನ್ಲಿ ಇನ್ ಕಮಿಂಗ್, ನೋ ಔಟ್ ಗೋಯಿಂಗ್
ಬೆಂಗಳೂರಿನ ಹೊಸಕೆರೆಹಳ್ಳಿಯ, ದತ್ತಾತ್ರೇಯ ನಗರದ ನಾಲ್ಕನೇ ಮುಖ್ಯರಸ್ತೆಯಲ್ಲಿನ ಆ 15X40ರ ಸೈಟಿನ ಎರಡಂತಸ್ತಿನ ಮನೆಯಲ್ಲಿ ಅಂಥದ್ದೊಂದು ಚೀಟಿ ವ್ಯವಹಾರ ನಡೆಯುತ್ತದೆ ಎಂಬ ಸಂಗತಿ ಸುತ್ತಮುತ್ತಲಿನ ಹಲವರಿಗೆ ಗೊತ್ತೇ ಇರಲಿಲ್ಲ. ನಾಲ್ಕು- ಮೂರನೇ ಮುಖ್ಯರಸ್ತೆಯ ಹಲವು ಮನೆಗಳ ಹೆಂಗಸರೇ ಈ ನೀಲಾವತಿಯ ಟಾರ್ಗೆಟ್.
ಅದೇನು ಈ ನೀಲಮ್ಮನೇ ಹುಡುಕಿಕೊಂಡು ಹೋಗಿ ಚಿನ್ನವನ್ನು ಮುಟ್ಟುತ್ತಿದ್ದಳೋ ಅಥವಾ ಆ ಚಿನ್ನವೇ ನೀಲಮ್ಮನನ್ನು ಹುಡುಕಿಕೊಂಡು ಬರುತ್ತಿತ್ತೋ ಭರ್ಜರಿಯಾಗಿಯೇ ಹಣ ಬರುವುದಕ್ಕೆ ಆರಂಭಿಸಿತ್ತು. ಇತ್ತೀಚಿನ ದಿನಗಳಲ್ಲಿ ಚೀಟಿ, ಷೇರಿನ ವ್ಯವಹಾರದಲ್ಲಿ ಮನೆಯೊಳಗೆ ಹಣ ಹೋಗಿದೆ ಎಂಬುದಕ್ಕೆ ಜನರ ಕೂಗಾಟ ಕಿರುಚಾಟ ಈಗ ಸಾಕ್ಷಿಯಾಗಿ ಸಿಗುತ್ತದೆಯೋ ಹೊರತು ಈಕೆಯ ಮನೆಯಿಂದ ಹಣ ಹೊರಗೆ ಹೋದ ಉದಾಹರಣೆ ಸಿಗಲ್ಲ.
ಗೃಹಿಣಿಯರೇ ಟಾರ್ಗೆಟ್:
ಈ ನೀಲಮ್ಮನ ಹತ್ತಿರ ಚೀಟಿ ಹಾಕಿರುವವರಲ್ಲಿ ಮನೆಯಲ್ಲಿದ್ದ ಗೃಹಿಣಿಯರು, ಅವರಿವರ ಮನೆಗೆ ಕೆಲಸಕ್ಕೆ ಹೋಗುವ ಹೆಂಗಸರೇ ಹೆಚ್ಚು. ಈಕೆಯ ವ್ಯವಹಾರ ಹೇಗೆಂದರೆ, ಒಂದು ಲಕ್ಷ ರುಪಾಯಿಯ ಚೀಟಿ ಹಾಕಿದರೆ ಕೊನೆಯ ತನಕ ತೆಗೆಯೋ ಹಾಗಿಲ್ಲ. ಕೊನೆಯಲ್ಲಿ ಈ ಯಮ್ಮ ಅವರಿಗೆ ಕೊಡುವ ಹಾಗಿಲ್ಲ.
ಆ ಒಂದು ಲಕ್ಷ ರುಪಾಯಿಗೆ ಮೂರು ಪರ್ಸೆಂಟ್ ಬಡ್ಡಿಯ ಹಾಗೆ ಕೊಡುವುದಾಗಿ ಈಕೆ ಹೇಳಿ, ಸುಮ್ಮನಾಗಿಸುತ್ತಿದ್ದಳು. ಸರಿ, ಮುಂದೆ ಮತ್ತದೇ ಒಂದು ಲಕ್ಷದ ಚೀಟಿ. ಆಗ ಪ್ರತಿ ತಿಂಗಳು ಬಡ್ಡಿಯ ಮೂರು ಸಾವಿರ ರುಪಾಯಿ ಆ ನೀಲಮ್ಮನ ಬಳಿಯೇ ಇರುತ್ತಿತ್ತು. ಅದಕ್ಕೆ ಒಂದು ಸಾವಿರ ರುಪಾಯಿಯನ್ನು ಚೀಟಿ ಕಟ್ಟುವವರು ಪಾವತಿಸಿದರೆ ಅದು ಆ ತಿಂಗಳ ಚೀಟಿ ಕಂತು.

ಹೀಗೆ ಹಳೆ ಚೀಟಿಯ ಒಂದು ಲಕ್ಷ ಮತ್ತು ಹೊಸ ಚೀಟಿ ಸಹ ಕೊನೆಯ ಕಂತಿನ ತನಕ ವಾಪಸ್ ಇಲ್ಲ. ಈ ಸಲ ಅದು ಮುಗಿದ ಮೇಲೆ ಎರಡು ಲಕ್ಷಕ್ಕೆ ಮೂರು ಪರ್ಸೆಂಟ್ ಬಡ್ಡಿ. ಚೀಟಿ ಮೊತ್ತ ಮತ್ತೂ ಹೆಚ್ಚು ಮಾಡಿ, ಬಡ್ಡಿಯನ್ನು ಕಂತಾಗಿ ಮಾಡಿರುತ್ತಿದ್ದಳು ಅನ್ನೋದು ಈಗ ಚೀಟಿ ಹಾಕಿದವರು ಹೇಳುತ್ತಿರುವ ಮಾತು.
ಚೀಟಿ ಹಾಕಿದವರಿಗೆಲ್ಲ ತಮ್ಮ ಹಣ ನೀಲಮ್ಮನ ಬಳಿ ಮರಿ ಹಾಕುತ್ತಿದೆ ಅನ್ನಿಸಿದೆಯೇ ವಿನಾ ಅಲ್ಲಿ ಅಸಲಿಗೆ ಮೋಸ ಆಗಬಹುದು ಎಂಬ ಅಂದಾಜೇ ಸಿಕ್ಕಿಲ್ಲ. ಅದೇನು ನೀಲಮ್ಮನ ಮಾತಿಗೇ ಪಿಗ್ಗಿ ಬಿದ್ದರೋ ಅಥವಾ ಮೂರು ಪರ್ಸೆಂಟ್ ಬಡ್ಡಿಗೇ ಇಂಥ ಸ್ಥಿತಿ ತಂದುಕೊಂಡರೋ ಸದ್ಯಕ್ಕೆ ಹೇಳುವುದು ಕಷ್ಟ ಆಗಿದೆ.
ಒಬ್ಬೊಬ್ಬರದ್ದು ಒಂದು ಕಥೆ:
ಆದರೆ, ಹೆಸರು ಹೇಳಲು ಇಚ್ಛಿಸದ- ಚೀಟಿ ಹಾಕಿದ್ದ ಮಹಿಳೆಯೊಬ್ಬರನ್ನು ಒನ್ಇಂಡಿಯಾ ಕನ್ನಡ ಮಾತನಾಡಿಸಿತು. "ಇಲ್ಲ, ಆ ಯಮ್ಮನ ಹತ್ತಿರ ದುಡ್ಡಿದೆ. ಸೈಟು, ಜಮೀನು ಅಂತ ಮಾಡಿಕೊಂಡಿದ್ದಾಳೆ. ಆದರೆ ಗಂಡ- ಹೆಂಡತಿಗೆ ಹಣ ಕೊಡುವ ಉದ್ದೇಶವೇ ಇಲ್ಲ. ಮಗಳಿಗೇನೋ ಅದ್ದೂರಿ ಮದುವೆ ಮಾಡಿದರು. ಕಾರು ತಗೊಂಡಿದ್ದಾರಂತೆ. ನಮ್ಮ ಹಣ ಏನಾಗುತ್ತೋ ಏನೋ," ಎಂದು ಅಲವತ್ತುಕೊಂಡರು.

"ನಾಲ್ಕೈದು ವರ್ಷದ ಹಿಂದೆ ಹೀಗಿರಲಿಲ್ಲ. ನನ್ನ ಮಗಳ ಮದುವೆಗೆ ಇಲ್ಲಿಯೇ ಚೀಟಿ ಹಾಕಿದ್ದೆ, ಹಣ ಕೊಟ್ಟಿದ್ದಳು ನೀಲಮ್ಮ. ಷೇರಿನ ಹಣ ಕೂಡ ಬಂದಿತ್ತು. ಆದರೆ ಈಗ ಎರಡು ವರ್ಷದಿಂದ ಅಥವಾ ಮಗಳ ಮದುವೆ ಮಾಡಿದ ನಂತರ ಹೀಗಾಯಿತು ಅನ್ನಿಸುತ್ತದೆ. ಎಷ್ಟೊಂದು ಜನರನ್ನು ನಾನೇ ಈ ನೀಲಮ್ಮನಿಗೆ ಪರಿಚಯಿಸಿ, ಚೀಟಿ ಹಾಕಿಸಿದ್ದೆ. ಮುಂದೇನು ಅಂತ ನೆನಸಿಕೊಂಡರೆ ಭಯವಾಗುತ್ತೆ," ಎಂದರು ಮತ್ತೊಬ್ಬ ಮಹಿಳೆ.
ಮನೆಗೆಲಸಕ್ಕೆ ಹೋಗುವ ಮಹಿಳೆಯೊಬ್ಬರು ತಮ್ಮ ಮಗನ ಕಾಲೇಜು ವಿದ್ಯಾಭ್ಯಾಸಕ್ಕೆ ಮೂರು ವರ್ಷದಿಂದ ಹಣ ಕಟ್ಟಿಕೊಂಡು ಬರುತ್ತಿದ್ದರು. ಅವನೀಗ ಎಸ್ಸೆಸ್ಸೆಲ್ಸಿ. "ಮುಂದಿನ ಜೂನ್ ಹೊತ್ತಿಗೆ ಆ ಹಣ ಬರುತ್ತೆ ಅಂದುಕೊಂಡಿದ್ದೆ ಅಣ್ಣ. ಅದರ ಸಲುವಾಗಿಯೇ ಒಂದು ಮನೆಗೆ ಕೆಲಸ ಹೆಚ್ಚಿಗೆ ಒಪ್ಪಿಕೊಂಡಿದ್ದೆ. ಹೊಟ್ಟೆ- ಬಟ್ಟೆ ಕಟ್ಟಿ ಆ ಯಮ್ಮನ ಹತ್ತಿರ ಹಾಕಿದ ದುಡ್ಡು. ಆ ದುಡ್ಡು ಏನಾಗ್ಬೋದು? ದಯವಿಟ್ಟು ನನ್ನ ಹೆಸರು ಹಾಕ್ಬೇಡಿ. ಆ ಸಿಟ್ಟಿಗೆ ಹಣ ಕೊಡದಿದ್ದರೂ ಕಷ್ಟ. ಆ ಬಗ್ಗೆ ನನ್ನ ಗಂಡಂಗೂ ಗೊತ್ತಿಲ್ಲ," ಎಂದು ಕಣ್ಣಂಚಲ್ಲಿ ನೀರು ತಂದುಕೊಂಡರು ಮತ್ತೊಬ್ಬ ಮಹಿಳೆ.
ಕೋಟ್ಯಂತರ ರುಪಾಯಿ ಗುಳಂ ಸ್ವಾಹಾ
ಇನ್ನು ಆಕೆಯ ಮನೆಗೆ ಬರುವ ಮಹಿಳೆಯರಿಗೆ ದುಡ್ಡು ಎಣಿಸುವಂತೆ ಕೊಡುತ್ತಿದ್ದ ನೀಲಮ್ಮ, ಮನೆಯ ಡ್ರಾಯರ್ ನಲ್ಲಿದ್ದ ಹಣ ತೋರಿಸುತ್ತಿದ್ದಳಂತೆ. "ಸದಾ ಹಣ ಇರುತ್ತದೆ, ಈಕೆ ಬಳಿ ಚೀಟಿಯೋ ಷೇರೋ ಹಾಕಿದರೆ ಅದು ವಾಪಸ್ ಬರುವುದು ಕಷ್ಟವಲ್ಲ," ಎಂಬ ನಂಬಿಕೆ ಬರುತ್ತಿದ್ದುದೇ ಆಗ ಎನ್ನುತ್ತಾರೆ ಸ್ಥಳೀಯ ಮಹಿಳೆಯರು. ಇನ್ನು ಈ ನೀಲಮ್ಮನ ಚೀಟಿ ವ್ಯವಹಾರ ಶುದ್ಧ 'ಸಾಂಕ್ರಾಮಿಕ' ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಏಕೆಂದರೆ, ಅಕ್ಕಪಕ್ಕದವರು ಚೀಟಿ- ಷೇರು ಹಾಕಿದ್ದಾರೆ ಎಂಬ ಕಾರಣಕ್ಕೆ ಹಾಕಿದವರು, ತಮ್ಮ ಸಂಬಂಧಿಕರಿಂದಲೂ ಹಣ ಹಾಕಿಸಿದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ನೀಲಮ್ಮನದು ಸ್ವಂತ ಮನೆ ಅನ್ನೋದು ಎಲ್ಲರ ಲೆಕ್ಕಾಚಾರ ಆಗಿತ್ತಂತೆ. ಆದರೆ ಈಗ ಅಲ್ಲಿ ಭೋಗ್ಯಕ್ಕೆ ಇರುವವರಿಗೂ ಹಣ ಬರುವುದು ಅನುಮಾನ ಎಂಬಂತಾಗಿದೆ. ಚೀಟಿಯಲ್ಲಿ ಮೋಸವಾಯಿತು ಅನ್ನೋದು ಒಂದಲ್ಲಾ ಒಂದು ಕಡೆ ನಡೆಯುತ್ತಲೇ ಇರುತ್ತದೆ. ಇಂಥ ನೀಲಮ್ಮನಂಥವರು ಅದೆಷ್ಟು ಸಾವಿರ ಮಂದಿಯೋ? ಚೀಟಿ, ಷೇರು ಮತ್ತೊಂದು ಅಂತ ಹಣ ಕಳೆದುಕೊಂಡ ಮೇಲೆ ವಂಚಕರಿಗೆ ಏನು ಶಿಕ್ಷೆ ಆಗುತ್ತದೆ?
ಅಂದ ಹಾಗೆ ಈ ನೀಲಮ್ಮನ ಪ್ರಕರಣದಲ್ಲಿ ಕೋಟ್ಯಂತರ ರುಪಾಯಿ ಹಣ ಹಡಪ್ ಆಗಿದೆ. ದುಡ್ಡು ಕಳೆದುಕೊಂಡ ಮಹಿಳೆಯರ ಆರ್ಥಿಕ ಹಿನ್ನೆಲೆ ಮತ್ತು ಅದನ್ನು ಕೂಡಿಟ್ಟಿದ್ದ ಉದ್ದೇಶ ತಿಳಿದುಕೊಂಡರೆ ಕರುಳು ಚುರ್ ಅನಿಸುತ್ತದೆ. ಆದರೆ ಏನು ಮಾಡುವುದಕ್ಕೆ ಸಾಧ್ಯ? ನೀಲಮ್ಮನ ವ್ಯವಹಾರವೇ ಕಾನೂನು ಬಾಹಿರ. ಅಂಥ ಕಡೆ ಹಣ ಹೂಡುವುದು ತಪ್ಪು. ಇಂಥ ಸನ್ನಿವೇಶದಲ್ಲಿ ಅದೆಂಥ ಪರಿಹಾರ ನಿರೀಕ್ಷಿಸುವುದು ಸಾಧ್ಯ?
-
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು












Click it and Unblock the Notifications