ವಿಧಾನಸೌಧ ಪ್ರವೇಶ ಈಗ ಮತ್ತಷ್ಟು ಸುಲಭ!
ಬೆಂಗಳೂರು, ಜನವರಿ 2 : ಶಕ್ತಿ ಕೇಂದ್ರದ ವಿಧಾನ ಸೌಧದ ಪ್ರವೇಶ ಸಾರ್ವಜನಿಕರಿಗೆ ಇನ್ನಷ್ಟು ಸುಗಮವಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕೆ.ರತ್ನ ಪ್ರಭಾ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ವಿಧಾನದ ಸೌಧದ ಲಿಫ್ಟ್ ಗಳಲ್ಲಿ 'ಹಚ್ಚೇವು ಕನ್ನಡದ ದೀಪ' ಕಂಪು
ಈವರೆಗೆ ಸಾರ್ವಜನಿಕರಿಗೆ ಮಧ್ಯಾಹ್ನ 3.30ರ ನಂತರ ನೀಡಲಾಗುತ್ತಿದ್ದ ಪ್ರವೇಶವನ್ನು ಇನ್ನುಮುಂದೆ ಮಧ್ಯಾಹ್ನ 2.45 ರಿಂದಲೇ ಪ್ರವೇಶ ನೀಡಲು ರತ್ನಪ್ರಭಾ ನಿರ್ಧರಿಸಿದ್ದಾರೆ. ಈ ಕುರಿತು ಪ್ರಕರಣೆ ನೀಡಿರುವ ಅವರು ಸಾರ್ವಜನಿಕರು ಇನ್ನುಮುಂದೆ ವಿಧಾನ ಸೌಧ ಪ್ರವೇಶಿಸಬೇಕಾದರೆ ಪಾಸ್ ಗಳ ವಿತರಣೆಗೆ ಮಧ್ಯಾಹ್ನದವರೆಗೆ ಕಾಯಬೇಕಿಲ್ಲ. ಬೆಳಗ್ಗೆಯೇ ಪ್ರವೇಶದ ಪಾಸ್ ನ್ನು ಸಂಗ್ರಹಿಸಿಟ್ಟುಕೊಂಡು ಮಧ್ಯಾಹ್ನ ನಂತರ ತಮಗೆ ಬೇಕಾದ ಅಧಿಕಾರಿ ಅಥವಾ ಜನಪ್ರತಿನಿಧಿಗಳನ್ನು ಬೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನ ಸೌಧ ಮತ್ತು ವಿಕಾಸ ಸೌಧ ಕಟ್ಟಡಗಳಲ್ಲಿನ ವಿವಿಧ ಕಚೇರಿಗಳಿಗೆ ಭೇಟಿ ನೀಡುವ ಸಂದರ್ಶಕರಿಗೆ ಇದೀಗ ಮಧ್ಯಾಹ್ನ 2.30 ರ ನಂತರ ಪಾಸುಗಳನ್ನು ನೀಡಲಾಗುತ್ತಿದ್ದು, ಇದರಿಂದ ಜನಸಾಮಾನ್ಯರಿಗೆ ತೊಂದರೆಯುಂಟಾಗುತ್ತಿದೆ.
ಪಾಸುಗಳನ್ನು ಪಡೆಯಲು ಸಾರ್ವಜನಿಕರು ಹಲವಾರು ಗಂಟೆಗಳ ಕಾಲ ಬಿಸಿಲು ಮತ್ತು ಮಳೆಯ ಸಂದರ್ಭದಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಸಂದರ್ಶಕರ ಭೇಟಿಯ ಮಾರ್ಗಸೂಚಿಗಳನ್ನು ಬದಲಾಯಿಸಲಾಗಿದೆ. ಈ ಹಿಂದೆ ನಿಗದಿಪಡಿಸಲಾಗಿದ್ದ ಸಮಯವನ್ನು3.30 ರಿಂದ 5 ಗಂಟೆ ವಿಸ್ತರಿಸಿ, 2.45 ರಿಂದ 5.30 ಕ್ಕೆ ಬದಲಾಯಿಸಲಾಗಿದೆ. ಅಷ್ಟೇ ಅಲ್ಲದೆ ಬೆಳಗ್ಗೆಯಿಂದಲೇ ಪಾಸುಗಳನ್ನು ವಿತರಿಸಲಾಗುತ್ತದೆ.
ಸದ್ಯ ಗೇಟ್ ಸಂಖ್ಯೆ 1 ಹಾಗೂ 3 ರಲ್ಲಿ ಮಾತ್ರ ಪಾಸುಗಳನ್ನು ವಿತರಿಸಲಾಗುತ್ತಿದ್ದು, ವಿಧಾನ ಸೌಧ, ವಿಕಾಸ ಸೌಧ ಕ್ಷೇತ್ರದ ವಿಸ್ತೀರ್ಣ ಹೆಚ್ಚಿರುವುದರಿಂದ ವಿಕಲಚೇತನರು ಹಾಗೂ ವೃದ್ಧರು ಹೆಚ್ಚು ದೂರ ನಡೆಯಬೇಕಾಗಿರುವುದರಿಂದ ಗೇಟ್ 2 ಮತ್ತು 4 ರಲ್ಲಿಯೂ ಪ್ರವೇಶ ಪಡೆಯಲು ಅನುಕೂಲತೆ ಕಲ್ಪಿಸಲಾಗುತ್ತಿದೆ.