ರಾಜಕೀಯದಲ್ಲಿ ಆಸಕ್ತಿಯಿದ್ದರೆ ಈ ಶಿಬಿರದಲ್ಲಿ ಪಾಲ್ಗೊಳ್ಳಿ
ಬೆಂಗಳೂರು, ಮಾ. 28 : ರಾಜಕೀಯ ಅಂದರೆ ಏನು? ಎಂಬ ಪ್ರಶ್ನೆ ಕೇಳಿದರೆ ಕಕ್ಕಾಬಿಕ್ಕಿಯಾಗುವ ಇಂದಿನ ಯುವಪೀಳಿಗೆಗೆ ರಾಜಕೀಯ ವ್ಯವಸ್ಥೆಯ ಆಳಅಗಲಗಳನ್ನು, ಅರಿತುಕೊಳ್ಳಬೇಕಾದ ಪಟ್ಟುಗಳನ್ನು ತಿಳಿಯಪಡಿಸುವ ಉದ್ದೇಶದಿಂದ ಐಐಎಂ-ಬೆಂಗಳೂರು ಪ್ರೊಫೆಸರ್ ರಾಜೀವ್ ಗೌಡ ಅವರು ಮೂರು ವಾರಗಳ (ಮಾ.29ರಿಂದ ಏ.18) ಕಾರ್ಯಾಗಾರ ಹಮ್ಮಿಕೊಂಡಿದ್ದಾರೆ.
ಈ ವರ್ಕ್ಶಾಪ್ನಲ್ಲಿ, ಲೋಕಸಭೆ ಚುನಾವಣೆಯಲ್ಲಿ ರಾಜಕಾರಣಿಗಳ ಪ್ರಚಾರ ಹೇಗೆ ನಡೆಯುತ್ತದೆ, ಮತದಾನ (ಕರ್ನಾಟಕದಲ್ಲಿ ಏ.17) ಮತ್ತು ಎಣಿಕೆ ಪ್ರಕ್ರಿಯೆ (ಮೇ 16) ಯಾವ ರೀತಿ ಸಾಗುತ್ತದೆ, ಚುನಾವಣೋತ್ತರ ಸಮೀಕ್ಷೆ ಅಂದ್ರೇನು, ಮಾಧ್ಯಮಗಳು ಇಂಥ ಚುನಾವಣೆಗಳನ್ನು ಹೇಗೆ ಪ್ರಸಾರ ಮಾಡುತ್ತವೆ ಮುಂತಾದ ವಿಷಯಗಳ ಕುರಿತು, ರಾಜಕೀಯ ಆಗುಹೋಗುಗಳನ್ನು ಅರಿತ ತಜ್ಞರು ವಿಷದವಾಗಿ ತಿಳಿಯಪಡಿಸಲಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಕಾಂಗ್ರೆಸ್ ಧುರೀಣ ಪ್ರೊ. ರಾಜೀವ್ ಗೌಡ, ಜೈನ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸಂದೀಪ್ ಶಾಸ್ತ್ರೀ, ಬ್ರಾಂಡ್ ಗುರು ಹರೀಶ್ ಬಿಜೂರ್, ತಕ್ಷಶಿಲಾ ಥಿಂಕ್ ಟ್ಯಾಂಕ್ ಸಂಸ್ಥಾಪಕ ನಿತಿನ್ ಜೈನ್, ಲೋಕಸತ್ತಾ ಪಕ್ಷದ ನಾಯಕ ಡಾ. ಅಶ್ವಿನ್ ಮಹೇಶ್ ಮುಂತಾದವರು ಕಾರ್ಯಾಗಾರದಲ್ಲಿ ಭಾಗವಹಿಸುತ್ತಿರುವವರ ಮೇಲೆ ಜ್ಞಾನಧಾರೆ ಎರೆಯಲಿದ್ದಾರೆ. ಇದರಲ್ಲಿ ಯುವಕರು ಮಾತ್ರವಲ್ಲ ಯಾರು ಬೇಕಾದರೂ ಭಾಗವಹಿಸಬಹುದು.
ಈ ರಾಜಕೀಯ ತರಬೇತಿ ಶಿಬಿರದಲ್ಲಿ ಭಾಗವಹಿಸುವವರು ತಾವು ಕಲಿತ ಸಂಗತಿಗಳನ್ನು, ಅನುಭವಗಳನ್ನು, ಅನಿಸಿಕೆಗಳನ್ನು, ಇದಕ್ಕಾಗಿ ಸೃಷ್ಟಿಸಲಾಗುವ ಬ್ಲಾಗ್ ನಲ್ಲಿ ಬರೆಯಬಹುದಾಗಿದೆ. ಶಿಬಿರಾರ್ಥಿಗಳು ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ, ಮಾಧ್ಯಮದವರೊಡನೆ ಮತ್ತು ರಾಜಕೀಯ ಪಂಡಿತರೊಡನೆ ಚರ್ಚೆ ನಡೆಸಲಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು ಅವರಿಂದ ಸಲಹೆಗಳನ್ನು ಕೂಡ ಪಡೆಯಲಾಗುತ್ತದೆ.
ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಂದನ್ ನಿಲೇಕಣಿ, ಬೆಂಗಳೂರು ಉತ್ತರದಲ್ಲಿ ಸ್ಪರ್ಧೆಗಿಳಿದಿರುವ ಸಿ ನಾರಾಯಣ ಸ್ವಾಮಿ ಮುಂತಾದವರ ರಾಜಕೀಯ ಕಲ್ಪನೆ, ದೃಷ್ಟಿಕೋನ, ಆಶಯಗಳ ಬಗ್ಗೆ, ಬಿಪ್ಯಾಕ್ನ ಚುನಾವಣಾ ಜಾಗೃತಿ ಅಭಿಯಾನ, ಚುನಾವಣಾ ಪ್ರಣಾಳಿಕೆಗಳ ವಿಶ್ಲೇಷಣೆ ಕುರಿತು ವಿವರ ನೀಡಲಾಗುವುದು.
ವಿವಿಧ ಕ್ಷೇತ್ರಗಳಲ್ಲಿನ ಮತದಾರರನ್ನು ಸಂಘಟಿಸಿ, ಒಂದೇ ವೇದಿಕೆಯ ಮೇಲೆ ಕಾಂಗ್ರೆಸ್ ಪಕ್ಷದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳೊಂದಿಗೆ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಬಗ್ಗೆ ಸಂವಾದ ನಡೆಸುವ ಅಪರೂಪದ ಅವಕಾಶವನ್ನು ಕೂಡ ರಾಜೀವ್ ಗೌಡ ಅವರು ಶಿಬಿರಾರ್ಥಿಗಳಿಗೆ ದೊರಕಿಸಿಕೊಡಲಿದ್ದಾರೆ.
ಜೊತೆಗೆ, ಚುನಾವಣಾ ಪ್ರಚಾರಗಳ ವಿಡಿಯೋ ಚಿತ್ರೀಕರಣ ಮಾಡುವುದಲ್ಲದೆ, ಚುನಾವಣಾ ಸುದ್ದಿ ಸಂಗ್ರಹಿಸಿ, ವಿವಿಧ ವಿಷಯಗಳ ಬಗ್ಗೆ ಬರೆದ ಲೇಖನಗಳನ್ನು ಸಾಮಾಜಿಕ ತಾಣಗಳಲ್ಲಿ ಅವುಗಳನ್ನು ಫೋಟೋಗಳ ಸಮೇತ ಪ್ರಕಟಿಸಲು ಉತ್ತೇಜನ ನೀಡಲಾಗುವುದು. ಯುವಜನರು ರಾಜಕೀಯ ಸೇರಲು ಮತ್ತು ಕಡ್ಡಾಯವಾಗಿ ಮತಹಾಕಲು ಕೂಡ ಉತ್ತೇಜಿಸಲಾಗುವುದು ಎಂದು ರಾಜೀವ್ ಗೌಡ ಅವರು ಹೇಳುತ್ತಾರೆ.
ಸಂಪರ್ಕ
ಈಮೇಲ್
:
[email protected]
ಮೊಬೈಲ್
:
91-9620011631
ವೆಬ್
ತಾಣ
:
http://www.facebook.com/ProfRajeevGowda
ಸ್ಥಳ
:
ಸ್ಟುಡಿಯೋ
ಚಾಪೆ,
50/1,
2ನೇ
ಮಹಡಿ,
ಎಸ್ಬಿಐ
ಕಟ್ಟಡ,
ಭೀಮಾಸ್
ರೆಸ್ಟೋರೆಂಟ್
ಎದುರಿಗೆ,
ಚರ್ಚ್
ಸ್ಟ್ರೀಟ್,
ಬೆಂಗಳೂರು.
ಟ್ವಿಟ್ಟರ್
:
https://twitter.com/rajeevgowda