DK Shivakumar: ಕನ್ನಡ ಸಿನಿಮಾ ನಟ, ನಟಿಯರಿಗೆ ಎಚ್ಚರಿಕೆ ಕೊಟ್ಟ ಡಿಸಿಎಂ ಡಿ.ಕೆ ಶಿವಕುಮಾರ್!
ಶನಿವಾರದಿಂದ ಬೆಂಗಳೂರು ಚಲನಚಿತ್ರೋತ್ಸವಕ್ಕೆ ಚಾಲನೆ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ರಾಜಕೀಯ ಗಣ್ಯರು, ಸಿನಿಮಾ ಕಲಾವಿದರು, ತಂತ್ರಜ್ಞರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕನ್ನಡ ಸಿನಿಮಾರಂಗದ ನಟ, ನಟಿಯರ ಮೇಲೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.
ಭಾಷಣದ ವೇಳೆ, ಸಿನಿಮಾ ನಟ, ನಟಿಯರಿಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟರು. ನಿಮ್ಮ ಚಲನ ವಲನ, ವರ್ತನೆ ಎಲ್ಲವೂ ನನಗೆ ಅರ್ಥವಾಗುತ್ತದೆ. ನಾನು ಎಲ್ಲವನ್ನೂ ಗಮನಿಸುತ್ತಿರುತ್ತೇನೆ. ನಮ್ಮ ಸಿನಿಮಾ ರಂಗದ ನಟ, ನಟಿಯರ ಮೇಲೆ ನನಗೆ ಕೋಪ ಇದೆ ಎಂದು ನೇರವಾಗಿಯೇ ಹೇಳಿದರು.

ನಾಡು, ನುಡಿಯ ಬಗ್ಗೆ ಕಾಳಜಿ ಇಲ್ಲವಾ?
ಚಲನಚಿತ್ರ ವಾಣಿಜ್ಯ ಮಂಡಳಿ, ನಟ, ನಟಿಯರ ಮೇಲೆ ನನಗೆ ತುಂಬಾ ಕೋಪ ಬಂದಿದೆ. ಕೋವಿಡ್ ಮುಗಿದ ಬಳಿಕ 'ನಮ್ಮ ಜಲ ನಮ್ಮ ಹಕ್ಕು' ಹೆಸರಿನಲ್ಲಿ ಹೋರಾಟ ಮಾಡಿದ್ದೆವು. ರಾಜ್ಯದ ಜನತೆಗೆ ನೀರು ಕೊಡಬೇಕು ಎನ್ನುವ ಒಳ್ಳೆಯ ಉದ್ದೇಶದಿಂದ ನಾವು, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪಾದಯಾತ್ರೆ ನಡೆಸಿದ್ದವು. ಆಗ ಯಾವೊಬ್ಬ ನಟರೂ ಕೂಡ ನಮಗೆ ಬೆಂಬಲ ಕೊಡಲಿಲ್ಲ, ಸಾಧು ಕೋಕಿಲಾ, ದುನಿಯಾ ವಿಜಯ್ ಮಾತ್ರ ನಮಗೆ ಬೆಂಬಲ ಕೊಟ್ಟರು ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.
ನಾವು ಅಧಿಕಾರಕ್ಕೆ ಬಂದ ಕೂಡಲೇ ಸಾಧು ಕೋಕಿಲ ಅವರಿಗೆ ಏನಾದರೂ ಮಾಡಬೇಕು, ಗೌರವ ಕೊಡಬೇಕು ಎಂದು ಅಕಾಡೆಮಿ ಅಧ್ಯಕ್ಷ ಸ್ಥಾನ ಕೊಟ್ಟೆವು. ನಾವು ಕಷ್ಟದಲ್ಲಿದ್ದಾಗ ಜೊತೆಗೆ ಇದ್ದವರನ್ನು ಗುರುತಿಸಬೇಕು ಎಂದು ಸಾಧು ಕೋಕಿಲ ಅವರಿಗೆ ಗೌರವಯುತ ಸ್ಥಾನ ಕೊಟ್ಟೆವು. ಕೆಲವು ನಟರು ನನ್ನನ್ನು ಬಳಸಿಕೊಳ್ಳುತ್ತಾರೆ, ಆಮೇಲೆ ಕಡೆಗಣಿಸುತ್ತಾರೆ. ಇದೆಲ್ಲಾ ನನ್ನ ಗಮನಕ್ಕೆ ಬಂದಿಲ್ಲ ಎಂದುಕೊಳ್ಳಬೇಡಿ, ಯಾರು ಏನು ಎನ್ನುವ ಬಗ್ಗೆ ಚನ್ನಾಗಿ ಗೊತ್ತಿದೆ ಎಂದು ಹೇಳಿದ್ದಾರೆ.
ಈಗ ನಡೆಯುತ್ತಿರುವ ಕಾರ್ಯಕ್ರಮವನ್ನೇ ನೋಡಿ, ಹತ್ತು-ಹದಿನೈದು ಜನರನ್ನು ಬಿಟ್ಟು ಇನ್ಯಾರು ಬಂದಿಲ್ಲ. ಇದೇನು ನನ್ನ ಅಥವಾ ಸಿದ್ದರಾಮಯ್ಯ ಅವರ ಮನೆ ಕಾರ್ಯಕ್ರಮವಾ? ಚಿತ್ರರಂಗದ ಕಾರ್ಯಕ್ರಮ ತಾನೇ ಅವರ ಕಾರ್ಯಕ್ರಮಕ್ಕೆ ಅವರೇ ಬಂದಿಲ್ಲ ಎಂದರೆ ಇನ್ಯಾರು ಬರುತ್ತಾರೆ. ಜನರನ್ನು ಸೇರಿಸುವುದು ನಮಗೇನು ದೊಡ್ಡದಲ್ಲ, ಅವರೇ ಬರದೇ ಇದ್ದರೆ ಕಾರ್ಯಕ್ರಮ ಯಾಕೆ ಮಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ಚಿತ್ರರಂಗವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದ್ದರ ಬಗ್ಗೆ ಗೌರವ ಇದೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಕೂಡ ನಿಮ್ಮ ಮೇಲಿದೆ. ಇನ್ನು ಮುಂದೆಯಾದರೂ ಸರಿಯಾಗಿ ನಡೆದುಕೊಳ್ಳಿ ಎಂದು ಹೇಳಿದರು.












Click it and Unblock the Notifications