ಬೆಂಗಳೂರಿನಲ್ಲಿ ಶೀಘ್ರ ಬೈಕ್ ಟ್ಯಾಕ್ಸಿ ಸೇವೆ: ಬಿ. ದಯಾನಂದ್
ಬೆಂಗಳೂರು, ಜನವರಿ 10: ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡುವ ಸಂಬಂಧ ಚರ್ಚೆ ನಡೆದಿದ್ದು, ಶೀಘ್ರದಲ್ಲೇ ಅನುಮತಿ ನೀಡಲಾಗುವುದು ಎಂದು ಸಾರಿಗೆ ಇಲಾಖೆ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ನಗರದಲ್ಲಿ ಬೈಕ ಟ್ಯಾಕ್ಸಿಗೆ ಅನುಮತಿ ನೀಡುವ ಸಂಬಂಧ ಬಿಎಂಟಿಸಿ, ಬಿಎಂಆರ್ ಸಿಎಲ್ ಹಾಗೂ ನಗರ ಸಂಚಾರ ಪೊಲೀಸರೊಂದಿಗೆ ಚರ್ಚಿಸಲಾಗಿದೆ. ಈಗಾಗಲೇ ಕೇರಳ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳು ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿವೆ. ಬೆಂಗಳೂರಿನಲ್ಲೂ ಬೇಡಿಕೆ ಬಂದಿದ್ದು ಶೀಘ್ರದಲ್ಲೇ ಅನುಮತಿ ನೀಡಲಾಗುವುದು. ಈ ನಡುವೆ ಸಾರಿಗೆ ಇಲಾಖೆ ಅಧಿಕಾರಿಗಳು ನೆರೆಯ ರಾಜ್ಯಗಳಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಅಂತೆಯೇ ಇ-ರಿಕ್ಷಾಗಳ ಸಂಚಾರಕ್ಕೂ ಅನುಮತಿ ನೀಡುವ ಸಂಬಂಧ ಚರ್ಚಿಸಲಾಗುತ್ತಿದೆ. ಪರಿಸರ ಸ್ನೇಹಿಯಾಗಿರುವ ಇ-ರಿಕ್ಷಾ ಸೇವೆಗೆ ಅವಕಾಶ ಕೋರಿ ಹಲವು ಕಂಪನಿಗಳು ಪ್ರಸ್ತಾವನೆ ಸಲ್ಲಿಸಿವೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ, ಬಿಎಂಆರ್ ಸಿಎಲ್ ಹಾಗೂ ಸಂಚಾರ ಪೊಲೀಸರೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

150 ಹೊಗೆ ತಪಾಸಣಾ ಕೇಂದ್ರಗಳಿಗೆ ದಂಡ: ವಾಹನಗಳಲ್ಲಿ ಕರ್ಕಶ ಶಬ್ದ ಮಾಡುವ ಹಾರನ್ ಅಳವಡಿಕೊಂಡಿರುವವರು ಹಾಗೂ ಶಬ್ದ ಮಾಲಿನ್ಯ ಮಾಡುವ ವಾಹನಗಳ ವಿರುದ್ಧ ನಿಯಮದನ್ವಯ ಪ್ರಕರಣ ದಾಖಲಿಸಿ, ವಾಹನಗಳ ಆರ್ ಸಿಯನ್ನು ಅಮಾನತು ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಂತೆಯೇ ನಿಯಮ ಉಲ್ಲಂಘಿಸಿರುವ ಹೊಗೆ ತಪಾಸಣಾ ಕೇಂದ್ರಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.












Click it and Unblock the Notifications