ಯಡಿಯೂರಪ್ಪ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ರೇಣುಕಾಚಾರ್ಯ
ಬೆಂಗಳೂರು, ಸೆ. 23: ಬಿಡಿಎ ವಸತಿ ಸಮುಚ್ಚಯ ನಿರ್ಮಾಣ ಟೆಂಡರ್ ಗುತ್ತಿಗೆಯಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಕುಟುಂಬಸ್ಥರ ಮೇಲೆ ಲಂಚ ಪಡೆದ ಗಂಭೀರ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ. ಇಡೀ ಪ್ರಕರಣವನ್ನು ಸುಪ್ರೀಂಕೋರ್ಟ್ ಹಾಲಿ ನ್ಯಾಯಾಧೀಶರು ಅಥವಾ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ. ಜೊತೆಗೆ ಪ್ರಕರಣದ ತನಿಖೆ ಮುಗಿಯುವವರೆಗೂ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ನಾಯಕರ ಆರೋಪದ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೆ ಇಲ್ಲ ಎಂದಿದ್ದಾರೆ. ಸಿಎಂ ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಆಡಿಯೋ ತುಣುಕನ್ನು ಸಾಕ್ಷಿ ಎಂದು ಪರಿಗಣಿಸಲು ಸಾದ್ಯವಿಲ್ಲ ಎಂದು ಘನ ನ್ಯಾಯಾಲಯವೇ ತೀರ್ಪು ಕೊಟ್ಟಿದೆ. ಕಳೆದ 20 ದಿನಗಳಿಂದ ಆ ಆಡಿಯೋ ಹರಿದಾಡುತ್ತಿದೆ.

ಆ 20 ದಿನಗಳ ಕಾಲ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎಲ್ಲಿ ಹೋಗಿದ್ದರು? ಆ ಆಡಿಯೋವನ್ನು ರಾಜಕೀಯ ಅಸ್ತ್ರವಾಗಿ ಪ್ರಯೋಗಿಸಲಾಗುತ್ತಿದೆ. ಇದು ರಾಜಕೀಯ ದುರುದ್ದೇಶ ಪ್ರೇರಿತ ಆರೋಪ ಮಾತ್ರ. ಕಾಂಗ್ರೆಸ್ನವರು ಸಧನದಲ್ಲಿ ಪ್ರಸ್ತಾಪ ಮಾಡಿದರೆ ನಾವು ಉತ್ತರ ಕೊಡಲು ಸಿದ್ದರಿದ್ದೇವೆ. ನ್ಯಾಯಾಲಯದಿಂದ ಇಂಜೆಂಕ್ಷನ್ ಪಡೆದಿದ್ದಾರೆ. ನ್ಯಾಯಾಲಯ ಸುಮ್ಮನೆ ಈ ರೀತಿ ಆದೇಶ ನೀಡುತ್ತದೆಯೇ? ಎಲ್ಲವನ್ನೂ ಗಮನಿಸದೆ ಸುಮ್ಮನೆ ಆದೇಶ ನೀಡುತ್ತದೆಯಾ?
Recommended Video
ಯಾವ ತನಿಖೆಯನ್ನೂ ನಡೆಸುವ ಅಗತ್ಯ ಇಲ್ಲ ನಾವು ಸಧನದಲ್ಲಿ ಉತ್ತರ ನೀಡಲು ಸಿದ್ದರಾಗಿದ್ದೇವೆ ಎಂದು ರೇಣುಕಾಚಾರ್ಯ ಹೇಳಿಕೆ ಕೊಟ್ಟಿದ್ದಾರೆ.












Click it and Unblock the Notifications