ಬುರ್ಖಾ ಧರಿಸಿ ಬಂದವರು ಮುಸ್ಲಿಂ ಮಹಿಳೆಯಲ್ಲ!
ಬೆಂಗಳೂರು, ಅಕ್ಟೋಬರ್. 14: ಸದಾ ತಮ್ಮ ವಿಭಿನ್ನ ಪ್ರತಿಭಟನೆಗಳ ಮೂಲಕವೇ ಗಮನ ಸೆಳೆಯುವ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಬುರ್ಖಾ ಧರಿಸಿ ಕೈಯಲ್ಲಿ ಖಡ್ಗ ಹಿಡಿದು ಪ್ರತಿಭಟನೆ ನಡೆಸಿದರು. ಈ ಬಾರಿ ಅವರು ಹೆಚ್ಚಾಗುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಬುರ್ಖಾ ಧರಿಸಿಕೊಂಡು ಬೆಂಗಳೂರಿನ ಪುರಭವನದ ಎದುರು ಹಾಜರಾದರು.
ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಲು ಅಕ್ಟೋಬರ್ 13 ರಂದು ಪುರಭವನದಿಂದ ಕೆಂಪೇಗೌಡ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿದರು. ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಆತಂಕದ ವಿಷಯ. ಬೆಂಗಳೂರು ಅತ್ಯಾಚಾರ ನಗರವಾಗಿ ಬದಲಾಗುತ್ತಿದೆ ಎಂದು ಹೇಳಿದರು.[ಕಳಸಾ ಬಂಡೂರಿಗಾಗಿ ಬೆಂಗಳೂರು ಸ್ಥಬ್ಧ: ಚಿತ್ರಗಳಲ್ಲಿ]
ಮಹಿಳೆಯರಿಗೆ ರಕ್ಷಣೆಯಿಲ್ಲ. ಇದೀಗ ಪುರುಷರಿಗೂ ರಕ್ಷಣೆ ಇಲ್ಲದ ಸ್ಥಿತಿ ಉಂಟಾಗಿದೆ. ಸರಗಳ್ಳತನ ತಡೆಯಲು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ದೂರಿದರು. ಮಹಿಳೆಯರು ಮತ್ತು ತಮ್ಮ ಬೆಂಬಲಿಗೊಂದಿಗೆ ಘೋಷಣೆ ಕೂಗುತ್ತ ಕೆಂಪೇಗೌಡ ಬಸ್ ನಿಲ್ದಾಣದವರೆಗೆ ತೆರಳಿದರು. ವಾಟಾಳ್ ಅವರ ಪ್ರತಿಭಟನೆಯನ್ನು ಒಂದು ಸುತ್ತು ಹಾಕಿಕೊಂಡು ಬರೋಣ....
ಹೆಣ್ಣು ಮಕ್ಕಳ ಸ್ಥಾನದಲ್ಲಿ ನಿಂತು ಯೋಚಿಸಿ
ಆಡಳಿತ ನಡೆಸುವವರಿಗೆ ನಿಜ ನೋವು ಗೊತ್ತಾಗಬೇಕು ಎಂದರೆ ಅವರು ಹೆಣ್ಣು ಮಕ್ಕಳ ಸ್ಥಾನದಲ್ಲಿ ನಿಂತು ಯೋಚನೆ ಮಾಡಬೇಕು. ರಾಜ್ಯ ಮತ್ತು ದೇಶದಲ್ಲಿ ದೌರ್ಜನ್ಯ ತಡೆಗೆ ಇರುವ ಕಾನೂನುಗಳನ್ನು ಇನ್ನಷ್ಟು ಬಿಗಿ ಮಾಡಬೇಕು ಎಂದು ನಾಗರಾಜ್ ಒತ್ತಾಯ ಮಾಡಿದರು.
ಅಪರಾಧಿಗಳನ್ನು ಮೊದಲು ಹಿಡಿಯಿರಿ
ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಅತ್ಯಂತ ಖಂಡನೀಯ. ಅತ್ಯಾಚಾರ ಆರೋಪಿಗಳು ಕಠಿಣ ಶಿಕ್ಷೆ ವಿಧಿಸಬೇಕು. ನೀಡುವ ಶಿಕ್ಷೆ ಇತರೆ ಆರೋಪಿಗಳಿಗೆ ಭಯ ಹುಟ್ಟಿಸುವಂತಿರಬೇಕು ಎಂದು ನಾಗರಾಜ್ ಆಗ್ರ೪ಹಿಸಿದರು.ಆಗಲೇ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕೈಯಲ್ಲಿ ಖಡ್ಗ
ಅತ್ಯಾಚಾರ ಸರಗಳ್ಳತನ ಬೆಂಗಳೂರಿನ ಪ್ರತಿದಿನದ ಸುದ್ದಿಯಾಗಿದೆ. ಮಹಿಳೆಯರು ಮುಕ್ತವಾಗಿ ಸಂಚರಿಸಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಜನರ ಬೆಳಗ್ಗೆ ಸರಗಳ್ಳತನ ನಡೆದರೆ, ಸಂಜೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಉದ್ಯೋಗಸ್ಥ ಮಹಿಳೆಯರು ಭಯ-ಭೀತಿಯಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ರಕ್ಷಣೆ ಇಲ್ಲ
ಸರಗಳ್ಳತನ ತಡೆಯಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆ ನೀಡುತ್ತಿರುವ ಭದ್ರತೆಯನ್ನು ವಿಸ್ತಾರ ಮಾಡಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ನಿರ್ದಾಕ್ಷಣ್ಯ ವಿಚಾರಣೆ ಮಾಡಬೇಕು ಎಂದು ಆಗ್ರಹಿಸಿದರು.