'ಮದ್ಯ'ರಾತ್ರಿ ಅವಧಿ ವಿಸ್ತರಣೆಗೆ ಬಿಜೆಪಿ ಅಸಮಾಧಾನ!
ಬೆಂಗಳೂರು, ಮಾ.4 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೆ ಪಬ್, ಬಾರ್, ರೆಸ್ಟೋರೆಂಟ್ ಕಾರ್ಯನಿರ್ವಹಿಸಲು ಒಪ್ಪಿಗೆ ನೀಡಿದ ಸರ್ಕಾರದ ಕ್ರಮಕ್ಕೆ ಪ್ರತಿಪಕ್ಷ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ಬಾರ್, ರೆಸ್ಟೋರೆಂಟ್ ಮಾಲೀಕರ ಲಾಬಿಗೆ ಮಣಿದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಸೋಮವಾರ ಬೆಂಗಳೂರಿನ ಮರಾಠ ಹಾಸ್ಟೆಲ್ನಲ್ಲಿ ಬಿಜೆಪಿ ಚುನಾವಣೆ ನಿರ್ವಹಣೆ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಬೆಂಗಳೂರಿನಲ್ಲಿ ಮಧ್ಯರಾತ್ರಿ 1 ಗಂಟೆ ತನಕ ಕುಡಿಯಲು, ಮೋಜು, ಮಸ್ತಿ ಮಾಡಲು ಕಾಂಗ್ರೆಸ್ ಸರ್ಕಾರ ಅವಕಾಶ ಮಾಡಿಕೊಟ್ಟಿರುವುದು ತಪ್ಪು, ಈ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು. [ಬೆಂಗಳೂರಿನಲ್ಲಿ ಮದ್ಯರಾತ್ರಿ ಅವಧಿ ವಿಸ್ತರಣೆ]
ಕಾಂಗ್ರೆಸ್ ಸರ್ಕಾರ ಲೋಕಸಭೆ ಚುನಾವಣೆಗೆ ಹಣ ಸಂಗ್ರಹಿಸಲು ಮುಂದಾಗಿದೆ. ಆದ್ದರಿಂದ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರ ಲಾಬಿಗೆ ಮಣಿದು ಮಧ್ಯರಾತ್ರಿವರೆಗೆ ಮೋಜು, ಮಸ್ತಿ ಮಾಡಲು ಅವಕಾಶ ನೀಡಿದೆ. ಮೂರು ತಿಂಗಳು ಸಹ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸಬಾರದು, ತಕ್ಷಣ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಚಿತ್ರಗಳಲ್ಲಿ ಚುನಾವಣಾ ಸಮಿತಿ ಸಭೆ
ಸರ್ಕಾರದ ನಿರ್ಧಾರ ಹಿಂಪಡೆಯಬೇಕು
ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಪಬ್, ಬಾರ್, ರೆಸ್ಟೋರೆಂಟ್ ಮಾಲೀಕರ ಲಾಬಿಗೆ ಮಣಿದ ಸರ್ಕಾರ ಬೆಂಗಳೂರಿನಲ್ಲಿ ಮಧ್ಯರಾತ್ರಿ 1 ಗಂಟೆ ತನಕ ಕುಡಿಯಲು, ಮೋಜು, ಮಸ್ತಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಸರ್ಕಾರ ತಕ್ಷಣ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ.
ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ, ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವುದು ಅನುಮಾನ ಎಂದರು. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮಾತು ಕೇಳಿದರೆ ಈ ಅನುಮಾನ ಸ್ಪಷ್ಟವಾಗುತ್ತದೆ. ಸಿದ್ದರಾಮಯ್ಯ ವರ್ತನೆ ಕುರಿತು ಕಾಂಗ್ರೆಸ್ನಲ್ಲೇ ಅಸಮಾಧಾನ ಶುರುವಾಗಿದೆ. ಆದ್ದರಿಂದ ಸಿಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು.
ರಾಹುಲ್ ಗಾಂಧಿ ಅನರ್ಹರು
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅನಂತ್ ಕುಮಾರ್ ಮಾತನಾಡಿ, ದೇಶದ ಪ್ರಧಾನಿ ಹುದ್ದೆಗೇರಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅನರ್ಹರು. ಅವರಲ್ಲಿ ನಾಯಕತ್ವದ ಗುಣವಿಲ್ಲ ಎಂಬುದು ಸಾಬೀತಾಗಿದೆ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದವರು
ಬಿಜೆಪಿ ಚುನಾವಣೆ ನಿರ್ವಹಣೆ ಸಮಿತಿ ಸಭೆಯಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಆರ್.ಅಶೋಕ್ ಸೇರಿದಂತೆ ಪಕ್ಷದ ಹಿರಿಯ ಪ್ರಮುಖ ಮುಖಂಡರು ಹಾಗೂ ಜಿಲ್ಲಾ ಚುನಾವಣೆ ನಿರ್ವಹಣೆ ಸಮಿತಿ ಸದಸ್ಯರು ಭಾಗವಹಿಸಿದ್ದರು.