ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಎಸ್ ಬಿ ಎಂ ಶಾಸಕರು!
ಬೆಂಗಳೂರು, ಡಿಸೆಂಬರ್ 14: ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಹಲವು ರಾಜಕೀಯ ಗಣ್ಯರು ಪಕ್ಷಬೇಧ ಮರೆತು ಬೆಂಗಳೂರಿನ ವೆಗಾಸ ಆಸ್ಪತ್ರೆಗೆ ತೆರಳುತ್ತಿದ್ದಾರೆ. ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸಿದ್ದರಾಮಯ್ಯ ಅವರು ಸದ್ಯ ಚೇತಿರಿಸಿಕೊಳ್ಳುತ್ತಿದ್ದಾರೆ.
'ಎಸ್ ಬಿ ಎಂ' ಶಾಸಕರು ಎಂದು ಹೆಸರಾದ ಬೆಂಗಳೂರಿನ ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜ ಹಾಗೂ ಮುನಿರತ್ನ ಶನಿವಾರ ಸಿದ್ದರಾಮಯ್ಯರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ವೇಳೆ ತಮ್ಮ ನೆಚ್ಚಿನ ನಾಯಕನನ್ನು ಭೇಟಿಯಾದ ಮೂವರೂ ಶಾಸಕರು, ನೀವು ಬೇಗ ಚೇತರಿಸಿಕೊಳ್ಳಿ ಎಂದು ಶುಭ ಹಾರೈಸಿದರು. ಈ ವೇಳೆ, ಸಿದ್ದರಾಮಯ್ಯ, 'ಏನ್ರಯ್ಯ ಮೂವರು ಒಟ್ಟಿಗೆ ಬಂದಿದ್ದಿರಿ, ಬಿಜೆಪಿಯವರು ನಿಮ್ಮನ್ನು ಮಂತ್ರಿ ಮಾಡಿದ್ರಾ. ಎಲ್ಲೇ ಇರಿ ಒಟ್ಟಿನಲ್ಲಿ ಚೆನ್ನಾಗಿ ಇರಿ' ಎಂದು ಕಿಚಾಯಿಸಿದ ಘಟನೆ ನಡೆಯಿತು. ಇದಕ್ಕೆ ನಗುತ್ತಲೇ ಉತ್ತರಿಸಿದ ಎಸ್ ಟಿ ಸೋಮಶೇಖರ್ 'ಎಲ್ಲೇ ಇದ್ದರೂ ನಾವು ನಿಮ್ಮ ಶಿಷ್ಯಂದಿರು' ಎಂದು ಹೇಳಿದರು.

ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜ ಹಾಗೂ ಮುನಿರತ್ನ ಆಪ್ತ ಸ್ನೇಹಿತರಾಗಿದ್ದು, ಸಿದ್ದರಾಮಯ್ಯ ಶಿಷ್ಯರು ಎಂದು ಗುರತಿಸಿಕೊಂಡಿದ್ದರು. ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಬಂಡೆದ್ದು ಕಾಂಗ್ರೆಸ್ ಗೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದರು. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಗೆಲುವು ಕಂಡು ಮತ್ತೆ ಶಾಸಕರಾಗಿದ್ದಾರೆ. ಕಳೆದ ಬುಧವಾರ ಎದೆನೋವು ಕಾಣಿಸಿಕೊಂಡಿದ್ದಕ್ಕೆ ಆಂಜಿಯೋಪ್ಲಾಸ್ಟ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಸಿದ್ದರಾಮಯ್ಯ ಅವರು ಡಿ.15 ರಂದು ಆಸ್ಪತ್ರೆಯಿಂದ ಬಿಡುಗಡೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಅವರಿಗೆ ಕನಿಷ್ಠ ಒಂದು ವಾರ ವಿಶ್ರಾಂತಿ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.












Click it and Unblock the Notifications