ನಕಲಿ ವೋಟರ್ ಐಡಿ ಪತ್ತೆ: ಆರ್.ಆರ್. ನಗರ ಚುನಾವಣೆ ಮುಂದೂಡಿಕೆಗೆ ಬಿಜೆಪಿ ಆಗ್ರಹ
Recommended Video
ಬೆಂಗಳೂರು, ಮೇ 9: ಕಾಂಗ್ರೆಸ್ ಶಾಸಕ ಮುನಿರತ್ನ ನಾಯ್ಡು ಪ್ರತಿನಿಧಿಸುತ್ತಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಮಂಗಳವಾರ ರಾತ್ರಿ 9,746 ನಕಲಿ ಚುನಾವಣಾ ಗುರುತಿನ ಚೀಟಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಚುನಾವಣೆಯನ್ನು ಮುಂದೂಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮತ್ತು ಕರ್ನಾಟಕ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವಡೇಕರ್, "ಕಾಂಗ್ರೆಸ್ ಜನ ಬೆಂಬಲವನ್ನು ಕಳೆದುಕೊಂಡಿದೆ. ಕರ್ನಾಟಕದಲ್ಲಿ ಮುಂದಿನ ಚುನಾವಣೆ ಗೆಲ್ಲಲು ಕಾಂಗ್ರೆಸ್ ಪ್ರಜಾತಂತ್ರ ವಿರೋಧಿ ತಂತ್ರಗಳಿಗೆ ಮೊರೆ ಹೋಗಿದೆ. ಹೀಗಾಗಿ ರಾಜರಾಜೇಶ್ವರಿ ನಗರದಲ್ಲಿ ಚುನಾವಣೆ ಮುಂದೂಡಿಕೆ ಮಾಡುವಂತೆ ನಾವು ಒತ್ತಾಯಿಸುತ್ತಿದ್ದೇವೆ," ಎಂದಿದ್ದಾರೆ.
BJP demands countermanding of elections in AC 154 Raj Rajeshwari Nagar in light of latest revelations of tens of thousands of fake voter ID and empty packets of hard currency. This is Congress conspiracy to rig election , in face of their imminent defeat.
— Prakash Javadekar (@PrakashJavdekar) May 8, 2018
RR ನಗರ ಕ್ಷೇತ್ರ: 9746 ವೋಟರ್ ಐಡಿ ಪತ್ತೆ, ತನಿಖೆ ಜಾರಿ
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ಬಾದಾಮಿ ಕ್ಷೇತ್ರದಲ್ಲಿ ಭಾರೀ ಹಣ ವಶಕ್ಕೆ ಪಡೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಹೀಗಾಗಿ ಚುನಾವಣಾ ಆಯೋಗ ಇಲ್ಲಿಗೆ ವಿಶೇಷ ಚುನಾವಣಾ ಅಧಿಕಾರಿಯನ್ನು ನೇಮಿಸಬೇಕು ಎಂದವರು ಆಗ್ರಹಿಸಿದ್ದಾರೆ. ಜೊತೆಗೆ ಹೆಚ್ಚಿನ ಪ್ಯಾರಾ ಮಿಲಿಟರಿ ಪಡೆಗಳನ್ನೂ ಬಾದಾಮಿಗೆ ಕರೆಸಿಕೊಳ್ಳಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ರಾಜರಾಜೇಶ್ವರಿ ನಗರ ವ್ಯಾಪ್ತಿಯ ಜಾಲಹಳ್ಳಿಯ ಶಾರದಾಂಬ ನಗರದ ಎಸ್.ಎಲ್.ವಿ ಪಾರ್ಕ್ ವ್ಯೂ ಅಪಾರ್ಟ್ ಮೆಂಟ್ ನಲ್ಲಿ ರಾಕೇಶ್ ಎಂಬವರು ಬಾಡಿಗೆದಾರರಾಗಿರುವ ಫ್ಲ್ಯಾಟ್ ಮೇಲೆ ಮಂಗಳವಾರ ದಾಳಿ ನಡೆಸಲಾಗಿತ್ತು. ಈ ವೇಳೆ ಇಲ್ಲಿ 9,746 ಅಕ್ರಮ ಗುರುತಿನ ಚೀಟಿಗಳು ಸಿಕ್ಕಿದ್ದವು.
ರಾಜರಾಜೇಶ್ವರಿ ನಗರ : ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಪರಿಚಯ
ಈ ಸಂಬಂಧ ಮಂಗಳವಾರ ರಾತ್ರಿ ತುರ್ತು ಪತ್ರಿಕಾಗೋಷ್ಠಿ ನಡೆಸಿರುವ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್, ತನಿಖೆಗೆ ಆದೇಶ ನೀಡಿದ್ದಾರೆ. ಮತ್ತು, "ಪ್ರಕರಣ ಗಂಭೀರತೆಯಿಂದ ಕೂಡಿದ್ದು, ಚುನಾವಣಾ ಮುಂದೂಡಿಕೆ ಬಗ್ಗೆ ಕೇಂದ್ರ ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳಲಿದೆ," ಎಂದಿದ್ದಾರೆ.