ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿದ್ದ ಬಿಟ್ಕಾಯಿನ್ ಪ್ರಕರಣ
ಬೆಂಗಳೂರು, ನ. 06: ಬಿಟ್ಕಾಯಿನ್ ಪ್ರಕರಣದಲ್ಲಿದಲ್ಲಿ ಪ್ರಮುಖವಾಗಿ ಹೆಸರು ಕೇಳಿಬರುತ್ತಿದ್ದ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ಹೋಟೆಲ್ನಲ್ಲಿ ಗಲಾಟೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಕಳೆದ ಎರಡು ವಾರಗಳಿಂದ ಬಿಟ್ಕಾಯಿನ್ ಸದ್ದು ಮಾಡುತ್ತಿದೆ. ಪ್ರತಿಪಕ್ಷ ಕಾಂಗ್ರೆಸ್ ಆಡಳಿತ ಪಕ್ಷವಾದ ಬಿಜೆಪಿ ವಿರುದ್ಧ ಅದರಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಬಿಟ್ಕಾಯಿನ್ ಪ್ರಕರಣ ಕುರಿತು ಗಂಭೀರ ಆರೋಪಗಳನ್ನು ಮಡುತ್ತಿದ್ದಾರೆ.
ರಾಜ್ಯದಲ್ಲಿ ಬಿಟ್ಕಾಯಿನ್ ಹಗರಣದ ಪ್ರಮುಖ ರೂವಾರಿ ಶ್ರೀಕಿ ಅಲಿಯಾಸ್ ಶ್ರೀಕಾಂತ್. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆದಿಯಾಗಿ ಎಲ್ಲರ ಬಾಯಲ್ಲೂ ಶ್ರೀಕಾಂತ್ ಹೆಸರು ಬರುತ್ತಿದೆ. ಈ ಮಧ್ಯೆ ಶುಕ್ರವಾರ ಶ್ರೀಕಾಂತ್ ಬಂಧನವಾಗಿದೆ. ಆದರೆ, ಪ್ರಕರಣ ಮಾತ್ರ ಬಿಟ್ಕಾಯಿನ್ಗೆ ಸಂಬಂಧಿಸಿದ್ದು ಅಲ್ಲ. ಹೋಟೆಲ್ನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಶ್ರೀಕಿ ಮಾಡಿಕೊಂಡ ಗಲಾಟೆಯೇನು?
ಬಿಟ್ಕಾಯಿನ್ಗೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದ ಶ್ರೀಕಾಂತ್ ನಗರದ ಹಳೇ ಏರ್ಪೋರ್ಟ್ ರಸ್ತೆಯಲ್ಲಿರುವ ಹೋಟೆಲ್ ರಾಯಲ್ ಆರ್ಕೇಡ್ನಲ್ಲಿ ಉಳಿದುಕೊಂಡಿದ್ದ. ಇದೇ ಹೋಟೆಲ್ನಲ್ಲಿ ತಂಗಿದ್ದ ವಿಷ್ಣುಭಟ್ ಎಂಬುವವರಿಗೂ ಮತ್ತು ಶ್ರೀಕಾಂತ್ ಮಧ್ಯೆ ಗಲಾಟೆ ನಡೆದಿದೆ. ಇಬ್ಬರ ಮಧ್ಯೆ ಗಲಾಟೆ ಆಗುತ್ತಿರುವುದರನ್ನು ಹೋಟೆಲ್ ಮಾಲೀಕರು ಜೀವನ್ಭಿಮಾ ನಗರ ಪೊಲೀಸ್ ಠಾಣೆಯ ಗಮನಕ್ಕೆ ತಂದಿದ್ದಾರೆ. ಕೂಡಲೇ ಹೋಟೆಲ್ಗೆ ತೆರಳಿದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಹೋಟೆಲ್ ರಾಯಲ್ ಆರ್ಕಿಡ್ನಲ್ಲಿ ಕಳೆದ ಎರಡು ತಿಂಗಳಿನಿಂದ ತಂಗಿದ್ದ ಎಂದು ಹೇಳಲಾಗುತ್ತಿದೆ. ಜೀವನ್ಭಿಮಾ ನಗರ ಠಾಣೆ ಪೊಲೀಸರು ಶ್ರೀಕಾಂತ್ ಉಳಿದುಕೊಂಡಿದ್ದ ಕೊಠಡಿಯನ್ನೂ ತಪಾಸಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಶ್ರೀಕಾಂತ್ ಹಿನ್ನೆಲೆ ಹೀಗಿದೆ
ಡ್ರಗ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಕಳೆದ ನವೆಂಬರ್ನಲ್ಲಿ ಶ್ರೀಕಾಂತ್ನನ್ನು ಬಂಧಿದ್ದರು. ವಿಚಾರಣೆ ಮಾಡುತ್ತಿರುವ ಸಂದರ್ಭದಲ್ಲಿ ಬಿಟ್ಕಾಯಿನ್ ಹ್ಯಾಕ್ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ಶ್ರೀಕಾಂತ್ ಬಳಿಯಿದ್ದ 9ಕೋಟಿ ಮೌಲ್ಯದ 31 ಬಿಟ್ಕಾಯಿನ್ಗಳನ್ನು ಜಪ್ತಿ ಮಾಡಲಾಗಿತ್ತು. ಅಲ್ಲದೆ, ಸರ್ಕಾರಿ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿದ ಆರೋಪವೂ ಶ್ರೀಕಾಂತ್ ಮೇಲೆ ಇದೆ.
"ಬಿಟ್ಕಾಯಿನ್ ಪ್ರಕರಣದಲ್ಲಿ ಅಂತರಾಷ್ಟ್ರೀಯ ವಹಿವಾಟು ನಡೆದಿರುವುದರಿಂದ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ (ಇಡಿ) ವಹಿಸಲಾಗಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಬಿಟ್ಕಾಯಿನ್ ಹಗರಣ ಪ್ರಕರಣದ ತನಿಖೆಯನ್ನು ಇಡಿಗೆ ವಹಿಸಿರುವ ಆದೇಶ ಪ್ರತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಎಂದು ಕಾಂಗ್ರೆಸ್ ಆಗ್ರಹಿಸಿತ್ತು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಹೋಟೆಲ್ನಲ್ಲಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಾಂತ್ ಅಲಿಯಾಸ್ ಶ್ರೀಕಿಯನ್ನು ಪೊಲೀಸರು ವಶಕ್ಕೆ ಪಡೆದಿರುವುದು ಕುತೂಹಲ ಮೂಡಿಸಿದೆ.
Recommended Video