ಯುವತಿ ಮೇಲೆ Acid ದಾಳಿಗೂ ಮುನ್ನ ದಿನ ಸ್ನೇಹಿತನಿಗೆ ಸುಳಿವು ಕೊಟ್ಟಿದ್ದ ಆರೋಪಿ
ಬೆಂಗಳೂರು, ಮೇ.01: ಯುವತಿಗೆ Acid ಎರಚುವ ಮುನ್ನ ದಿನ ಎಣ್ಣೆ ಮತ್ತಿನಲ್ಲಿ ತನ್ನ ಸ್ನೇಹಿತಿಗೆ ಸೂಕ್ಷ್ಮವಾಗಿ ಹೇಳಿಕೊಂಡಿದ್ದ!. 'ನಾಳೆ ಬೆಳಗ್ಗೆ ನ್ಯೂಸ್ ಚಾನಲ್ ಗಳಲ್ಲಿ ಬರ್ತೀನಿ... ಹೋಗಿ ಲಾಯರ್ ಭೇಟಿ ಮಾಡು' ಎಂದು ತಲೆ ಮರೆಸಿಕೊಂಡಿರುವ ಆರೋಪಿ ನಾಗೇಶ್ ತನ್ನ ಆಪ್ತನಿಗೆ ಹೇಳಿಕೊಂಡಿದ್ದನಂತೆ. ಎಣ್ಣೆ ಮತ್ತಿನಲ್ಲಿ ಹೀಗೆಲ್ಲಾ ಮಾತಾಡ್ತಾನೆ ಅಂತ ಆತನ ಸ್ನೇಹಿತ ಗಂಭೀರವಾಗಿ ಪರಿಗಣಿಸಿರಲಿಲ್ಲ!
ಯುವತಿ ಮೇಲಿನ Acid ದಾಳಿ ಪ್ರಕರಣ ಕುರಿತು ಪೊಲೀಸರು ಈವರೆಗೂ 20 ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಸಿಡ್ ದಾಳಿ ನಡೆಸಿ ತಲೆ ಮರೆಸಿಕೊಂಡಿರುವ ಆರೋಪಿ ನಾಗೇಶ್ ನಾಲ್ಕು ದಿನವಾದರೂ ಪತ್ತೆಯಾಗಿಲ್ಲ. ಆತನ ಆಪ್ತರ ವಿಚಾರಣೆ ವೇಳೆ ಈ ಮೇಲಿನ ಸಂಗತಿ ಹೊರ ಬಿದ್ದಿದೆ.
ಯುವತಿಗೆ Acid ಎರಚುವ ಮುನ್ನ ದಿನ ರಾತ್ರಿ ತನ್ನ ಸ್ನೇಹಿತನೊಂದಿಗೆ ಬಾರ್ನಲ್ಲಿ ಕುಡಿಯಲು ಹೋಗಿದ್ದನಂತೆ. ನಾಳೆ ನಾನು ನಾಳೆ ಬೆಳಗಾಗುವಷ್ಟರಲ್ಲಿ ಟಿವಿ ಚಾನೆಲ್ಗಳಲ್ಲಿ ಬರ್ತೀನಿ. ನೀನೇ ಹೋಗಿ ಲಾಯರ್ ಹತ್ತಿರ ಮಾತಾಡು ಎಂದು ಹೇಳಿದ್ದನಂತೆ. ಕುಡಿದ ಅಮಲಿನ ಮಾತು ಎಂದು ಆತನ ಸ್ನೇಹಿತ ತಲೆ ಕೆಡಿಸಿಕೊಂಡಿರಲಿಲ್ಲವಂತೆ. ಅಂದುಕೊಂಡಂತೆ ಮರು ದಿನ ಬೆಳಗ್ಗೆ ಯುವತಿ ಮೇಲೆ ಆಸಿಡ್ ದಾಳಿ ನಡೆಸಿ ಕಿರಾತಕ ನಾಗೇಶ್ ಸುದ್ದಿಯಾಗಿರುವುದು ಅಚ್ಚರಿ ಮೂಡಿಸಿದೆ.
ಏಳು ತಂಡ ಶೋಧ:
ಯುವತಿ ಮೇಲೆ ಆಸಿಡ್ ದಾಳಿ ನಡೆಸಿದ ಬಳಿಕ ವಕೀಲರನ್ನು ಸಂಪರ್ಕಿಸಿರುವ ಆರೋಪಿ ನಾಗೇಶ್ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದಾನೆ. ಈತನ ಪತ್ತೆಗಾಗಿ ಏಳು ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿದೆ. ಅದರಲ್ಲಿ ಒಂದು ತಂಡ ಮೊಬೈಲ್ ಜಾಡು ಹಿಡಿದು ತನಿಖೆ ಮಾಡುತ್ತಿದೆ. ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕದಲ್ಲಿ ಆರೋಪಿಯನ್ನು ಹುಡುಕಲಾಗುತ್ತಿದೆ. ಇನ್ನು ಆರೋಪಿಯ ಕುಟುಂಬ ಸದಸ್ಯರು, ಆಪ್ತರನ್ನು ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
Acid ಮೂಲ ಪತ್ತೆ:
ಗಾರ್ಮೆಂಟ್ ನಡೆಸುತ್ತಿದ್ದ ನಾಗೇಶ್ ಆಸಿಡ್ ಎಲ್ಲಿಂದ ತಂದಿದ್ದಾನೆ ಎಂಬುದರ ಜಾಡು ಹಿಡಿದು ಪತ್ತೆ ಕಾರ್ಯದಲ್ಲಿ ಪೊಲೀಸ್ ತಂಡವೊಂದು ತನಿಖೆ ಮಾಡುತ್ತಿದೆ. ಗಾರ್ಮೆಂಟ್ ಫ್ಯಾಕ್ಟರಿಯಿಂದಲೇ ನಾಗೇಶ್ ಆಸಿಡ್ ತಂದಿದ್ದಾನೆ ಎಂದು ಹೇಳಲಾಗಿತ್ತು. ವಾಸ್ತವದಲ್ಲಿ ನಾಗೇಶ್ ಯುವತಿ ಮೇಲೆ ಎರಚಿರುವ ಎಚ್ಸಿಎಲ್ ಆಸಿಡ್ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಬಳಸುವುದಿಲ್ಲ. ಹೀಗಾಗಿ ಈತ ಎಲ್ಲಿಂದ ಆಸಿಡ್ ತಂದಿದ್ದಾನೆ ಎಂಬುದರ ಮೂಲ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿಸಿಕೊಂಡಿದ್ದಾರೆ.
ಶಾಲೆಯಿಂದ ಪ್ರತಿಭಟನೆ:
ಆಸಿಡ್ ದಾಳಿ ಮಾಡಿದ ಕಿರಾತಕನನ್ನು ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿ ಸಂತ್ರಸ್ತ ಯುವತಿ ಓದಿದ್ದ ಪ್ರೌಢ ಶಾಲೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಅಲ್ಲದೇ ಶಾಲಾ ಆಡಳಿತ ಮಂಡಳಿ ವತಿಯಿಂದ ಯವತಿಗೆ 50 ಸಾವಿರ ರೂ. ಪರಿಹಾರ ನೀಡಲಾಗಿದೆ. ಹೆಗ್ಗನಹಳ್ಳಿಯಲ್ಲಿರುವ ನಿಸರ್ಗ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ, ಆರೋಪಿಯ ಬಂಧನಕ್ಕೆ ಆಗ್ರಹಿಸಿದರು. 2013 ರಲ್ಲಿ ಇದೇ ಶಾಲೆಯಲ್ಲಿ ಸಂತ್ರಸ್ತ ಯುವತಿ ಹತ್ತನೇ ತರಗತಿ ಓದಿದ್ದಳು.
ಯುವತಿ ಚೇತರಿಕೆ:
ಆಸಿಡ್ ದಾಳಿಗೆ ಒಳಗಾಗಿರುವ ಸಂತ್ರಸ್ತ ಯುವತಿ ನಗರದ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಆದರೆ, ಆಸಿಡ್ ದಾಳಿ ಮಾಡಿ ನಾಲ್ಕು ದಿನವಾದರೂ ಆರೋಪಿಯನ್ನು ಪತ್ತೆ ಮಾಡಲಾಗದ ಪೊಲೀಸರ ಕ್ರಮ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.
Recommended Video