"ಶಾಸಕರನ್ನು ಅನರ್ಹಗೊಳಿಸಿ, ಪ್ರಜಾಪ್ರಭುತ್ವ ಎತ್ತಿಹಿಡಿಯಿರಿ"
ಬೆಂಗಳೂರು, ಜುಲೈ 24: ರಾಷ್ಟ್ರದಲ್ಲಿ ನೈತಿಕ ಹಾಗೂ ಮೌಲ್ಯಾಧಾರಿತ ರಾಜಕಾರಣದಲ್ಲಿ ಅತ್ಯಂತ ಅಗ್ರಗಣ್ಯ ಪಂಕ್ತಿಯಲ್ಲಿ ಕರ್ನಾಟಕ ಇತ್ತೆಂಬುದು ನಾವೆಲ್ಲರೂ ಕಂಡ ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಸತ್ಯವೇ ಆಗಿದೆ. ಆದರೆ, ಇತ್ತೀಚೆಗಿನ ಹೊಲಸು ರಾಜಕಾರಣದಿಂದಾಗಿ ರಾಜ್ಯವೇ ತಲೆತಗ್ಗಿಸುವಂತಹ ಕೆಟ್ಟ ಪರಿಸ್ಥಿತಿ ಎದುರಾಗಿದೆ. ನಮ್ಮ ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಇಡೀ ರಾಜ್ಯವೇ ನಾಚಿಕೆಪಡುವ ರೀತಿಯಲ್ಲಿ ಅಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆಗಳನ್ನು ರಾಜಕೀಯ ಪಕ್ಷಗಳು ತೋರಿಸುತ್ತಿವೆ.
ಪಕ್ಷಕ್ಕೆ ನಿಷ್ಠರಾಗಿ ದುಡಿಯುವವರನ್ನು ಗೆಲ್ಲಿಸಿಕೊಳ್ಳಲಾಗದೆ, ಮಾರಾಟವಾಗಲು ಸಿದ್ಧರಾಗಿರುವ ವ್ಯಕ್ತಿಗಳಿಗೆ ಟಿಕೆಟ್ ಕೊಟ್ಟ ಪಕ್ಷಗಳು ಮತ್ತು ಅನೈತಿಕ ಮಾರ್ಗದಲ್ಲಿ ಶಾಸಕರನ್ನು ಕೊಳ್ಳಲು ಸಿದ್ಧವಾಗಿರುವ ಪಕ್ಷಗಳು ಕರ್ನಾಟಕ ಮರ್ಯದೆಯನ್ನು ತೆಗೆದಿದ್ದಾಗಿದೆ. ಶಾಸಕರಲ್ಲಿ ಅಧಿಕಾರದ ಹಪಾಹಪಿತನ ಹೆಚ್ಚಾಗಿ ಕುದುರೆ, ಕತ್ತೆಗಳಂತೆ ವ್ಯಾಪಾರವಾಗಿ ಸರ್ಕಾರಕ್ಕೂ, ರಾಜ್ಯದ ಜನತೆಗೂ ದ್ರೋಹಮಾಡಿ ಹೋಗಿದ್ದಾರೆ.
ಬಿಜೆಪಿಯ ಕುದುರೆ ವ್ಯಾಪಾರದ ಕಥೆ ಹೇಳಿದ ಸಿದ್ದರಾಮಯ್ಯ!
ಬಿಜೆಪಿಯು ಅತೃಪ್ತರು ಎಂದು ಹೇಳಲಾಗುತ್ತಿರುವ ಶಾಸಕರನ್ನು ವಾಮಮಾರ್ಗದಿಂದ ಕೊಂಡುಕೊಂಡು ಅನೈತಿಕವಾಗಿ ಸರ್ಕಾರವನ್ನು ರಚಿಸುವ ತರಾತುರಿಗೆ ಮುಂದಾಗಿದೆ. ಬಿಜೆಪಿಗೂ ಅತೃಪ್ತರ ಗೈರಿನಿಂದಾಗಿ ಇಂದು ಸರ್ಕಾರವನ್ನು ರಚಿಸಲು ಅವಕಾಶವಿದ್ದರೂ, ರಾಜ್ಯ ವಿಧಾನಸಭೆಯ ಒಟ್ಟೂ ಶಾಸಕರ ಅಧಾರದ ಮೇಲೆ ಬಹುಮತವಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ವಿಧಾನಸಭೆ ಚುನಾವಣೆ ನಡೆದ ಸಂದರ್ಭದಲ್ಲಿ ರಾಜ್ಯಪಾಲರು ಸರ್ಕಾರ ರಚನೆ ಮಾಡಲು ಬಿಜೆಪಿಗೆ ಮೊದಲ ಅವಕಾಶ ನೀಡಿದ್ದರೂ, ಸಂಖ್ಯಾಬಲವನ್ನು ತೋರಿಸಲಾಗದೆ ಹಿಂದೆಸರಿದಿತ್ತು. ಅದರೆ, ಕುದುರೆ ವ್ಯಾಪಾರದ ಮೂಲಕ ಮತ್ತೆ ಸರ್ಕಾರ ರಚಿಸಲು ಮುಂದಾಗಿದೆ.
ಸರ್ಕಾರ ಉರುಳಿದರೂ ಅತೃಪ್ತರಿಗೆ ತಪ್ಪಿಲ್ಲ ಅನರ್ಹತೆ ಭೀತಿ
ಟಿಕೆಟ್ ಕೊಟ್ಟು ಗೆಲ್ಲಿಸಿ, ವಿಧಾನಸೌಧಕ್ಕೆ ಕರೆತಂದ ಪಕ್ಷಕ್ಕೆ ನಿಷ್ಠರಾಗಿರದ ಅತೃಪ್ತರೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಶಾಸಕರು ಸದನಕ್ಕೆ ಕೆಟ್ಟ ಹೆಸರು ತಂದಿದ್ದು, ಸ್ಪೀಕರ್ರವರ ಕಾರ್ಯನಿರ್ವಹಣೆಯ ಬಗ್ಗೆಯೂ ಮಾಧ್ಯಮಗಳಲ್ಲಿ ಅನುಚಿತ ಆಕ್ಷೇಪಗಳನ್ನು ಮಾಡಿದ್ದಾರೆ.
ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿಲ್ಲವೇ?
ಅನುದಾನ ಹಂಚಿಕೆಯಲ್ಲಿ ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡದೆ ತಮಗೆ ಅನ್ಯಾಯ ಮಾಡಿದ್ದಾರೆ ಎಂಬುದು ಅತೃಪ್ತ ಶಾಸಕರು ರಾಜೀನಾಮೆಗೆ ನೀಡಿರುವ ಪ್ರಮುಖ ಕಾರಣಗಳಲ್ಲೊಂದು. ಹಾಗಿದ್ದರೆ ಜನರ ಮಧ್ಯೆ ಇದ್ದು ಹೋರಾಡುವ ಬದಲು ದೂರದ ಮುಂಬೈಗೆ ಹಾರಿ ಅಲ್ಲಿ ಠಿಕಾಣಿ ಹೂಡಿರುವುದೇಕೆ ಎಂಬ ಅನುಮಾನ ಹುಟ್ಟಿದೆ. ಅಲ್ಲದೆ ಶಾಸಕರ ಈ ಆರೋಪಗಳಿಗೆ ನಿನ್ನೆ ಸದನದಲ್ಲಿ ಉತ್ತರಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಆಯಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಎಷ್ಟು ಅನುದಾನ ಕೊಡಲಾಗಿದೆ ಎಂಬುದರ ಬಗ್ಗೆ ದಾಖಲೆ ನೀಡಿದ್ದಾರೆ. ಹಾಗಾಗಿ ಅತೃಪ್ತರು ಮಾಡಿರುವ ಈ ಆರೋಪ ಸುಳ್ಳು ಎಂಬುದು ಸಾಬೀತಾಗಿದೆ.
ಶಾಸಕರು ಎಷ್ಟು ದಿನ ಸದನಕ್ಕೆ ಹಾಜರಾಗಿದ್ದಾರೆ?
ಸದರಿ ಶಾಸಕರು ಎಷ್ಟು ದಿನ ಸದನಕ್ಕೆ ಹಾಜರಾಗಿದ್ದಾರೆ? ಎಷ್ಟು ದಿನ ಸದನದ ಕಲಾಪಗಳಲ್ಲಿ ಭಾಗವಹಿಸಿದ್ದಾರೆ? ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಕುರಿತು ಎಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ? ಪ್ರಮುಖ ಜನಪರ ಮಸೂದೆಗಳು ಮಂಡನೆಯಾಗುವ ಸಮಯದಲ್ಲಿ ಮತ್ತು ಪ್ರಮುಖ ಚರ್ಚೆಗಳ ಸಂದರ್ಭದಲ್ಲಿ ಎಷ್ಟು ಸಕ್ರಿಯರಾಗಿ ಪಾಲ್ಗೊಂಡಿದ್ದಾರೆ? ಎಂದು ಸಭಾಪತಿಗಳು ಗಮನಿಸಬೇಕು. ಅತೃಪ್ತರು ಎಂದು ಹೇಳಲಾಗುವ ಶಾಸಕರು ತಮ್ಮ ರಾಜೀನಾಮೆಗೆ ಸೂಕ್ತಕಾರಣಗಳನ್ನು ನೀಡಿಲ್ಲ ಮಾತ್ರವಲ್ಲದೆ ಬಾಹ್ಯ ಒತ್ತಡಗಳು ಮತ್ತು ಅಧಿಕಾರ ಲಾಲಸೆಯಿಂದ ರಾಜೀನಾಮೆ ನೀಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷವು ಅಭಿಪ್ರಾಯಪಡುತ್ತದೆ.
ಕರ್ನಾಟಕದ ಜನ ಪಶ್ಚಾತಾಪ ಪಡುತ್ತಿದ್ದಾರೆ
"ಇಂತಹ ಖೂಳರನ್ನು ಶಾಸಕರಾಗಿ ಆರಿಸಿದ್ದಕ್ಕಾಗಿ ಕರ್ನಾಟಕದ ಜನ ಪಶ್ಚಾತಾಪ ಪಟ್ಟು ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಸೂಕ್ತವಾಗಿ ಪರಾಮರ್ಶಿಸಿ, ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಮುಂದೆದೂ ಇಂತಹ ಹೀನ ರಾಜಕಾರಣ ಬಂದೊದಗಬಾರದೆಂಬ ಮುನ್ನೆಚ್ಚರಿಕೆಯಿಂದ ರಾಜ್ಯದ ಜನತೆಗೆ ದ್ರೋಹ ಮಾಡಿ, ರಾಜ್ಯ ರಾಜಕಾರಣಕ್ಕೆ ಕಪ್ಪುಚುಕ್ಕೆ ತಂದಿಟ್ಟಿರುವ ಶಾಸಕರನ್ನು ಅನರ್ಹಗೊಳಿಸಬೇಕೆಂದು ವಿಧಾನಸಭೆಯ ಸಭಾಧ್ಯಕ್ಷರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದೇವೆ" ಎಂದು ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕದ ಅಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ.
ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು
ತಮಿಳುನಾಡು ಮಾದರಿಯಲ್ಲಿ ಎಲ್ಲಾ ಶಾಸಕರನ್ನು ತಕ್ಷಣವೇ ಅಮಾನತುಗೊಳಿಸಿ, ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು. - 10ನೇ ಶೆಡ್ಯೂಲ್ ಪ್ರಕಾರ ದೂರು ದಾಖಲಾಗಿ, ವಿಪ್ ಉಲ್ಲಂಘನೆ ಎಲ್ಲವನ್ನು ಪರಿಗಣಿಸಿ ಶಾಸಕರನ್ನು ಉಚ್ಚಾಟಿಸಬಹುದು. ಶಾಸಕರ ವಿರುದ್ಧ ಕ್ರಮ ಜರುಗಿಸಲು ತಮಿಳುನಾಡು ಮಾದರಿಯಲ್ಲಿ ದೂರು ಬಂದರೆ, ಒಟ್ಟಿಗೆ ಪ್ರಯಾಣಿಸಿದ ಚಿತ್ರ, ವಿಡಿಯೋ ಸಾಕ್ಷಿ ಪರಿಗಣಿಸಬಹುದು. - ಉಚ್ಚಾಟನೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದರೂ ಈ ಶಾಸಕರಿಗೆ ಸಚಿವರಾಗುವ ಯೋಗ ತಕ್ಷಣಕ್ಕೆ ಸಿಗುವುದಿಲ್ಲ. ಉಪ ಚುನಾವಣೆ ಎದುರಿಸಿ ಮತ್ತೆ ಆಯ್ಕೆಯಾದರೂ, ಕೇಸಿನಲ್ಲಿ ಖುಲಾಸೆಗೊಂಡರೆ ಸಚಿವರಾಗಬಹುದು.