ಡಾ.ಶಿವರಾಮಕಾರಂತ ಬಡಾವಣೆಯ 480 ಕಟ್ಟಡಗಳಿಗೆ ಮೇ 13ರಂದು ಸಕ್ರಮ ಪ್ರಮಾಣ ಪತ್ರ
ಬೆಂಗಳೂರು, ಮೇ 12: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಉದ್ದೇಶಿತ ಡಾ. ಶಿವರಾಮ ಕಾರಂತ ಬಡಾವಣೆಯ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿ ಸಲ್ಲಿಸಿದ 14ನೆಯ ವರದಿಯನ್ನು ಅಂಗೀಕರಿಸಿ 480 ಕಟ್ಟಡಗಳನ್ನು ಸಕ್ರಮಗೊಳಿಸಿ ಸರ್ವೋಚ್ಛ ನ್ಯಾಯಾಲಯವು ಆದೇಶ ಹೊರಡಿಸಿದೆ.
ಈವರೆಗೆ ಒಟ್ಟು 2,825 ಕಟ್ಟಡಗಳನ್ನು ಸಕ್ರಮಗೊಳಿಸಿದೆ. 2018 ಕ್ಕಿಂತ ಮುಂಚೆ ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆದು ಕಟ್ಟಿದ ಕಟ್ಟಡಗಳ ಮಾಲೀಕರು ಸಲ್ಲಿಸಿದ ದಾಖಲೆಗಳ ಮೇಲೆ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿ ನೀಡಿದ 14ನೇಯ ವರದಿಯನ್ನು ಅಂಗೀಕರಿಸಿದ ಸರ್ವೋಚ್ಛ ನ್ಯಾಯಾಲಯ ಈ ಕಟ್ಟಡಗಳನ್ನು ಸಕ್ರಮಗೊಳಿಸಿ ಆದೇಶಿಸಿದೆ.
ಫಲಾನುಭವಿಗಳು ಕಾನೂನು ರೀತ್ಯಾ ಬೆಟರ್ ಮೆಂಟ್ ಶುಲ್ಕ ವಿಧಿಸಬೇಕು
ಕೋರ್ಟ್ ಆದೇಶದಂತೆ ಡಾ. ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಕಟ್ಟಡಗಳ ಮಾಲೀಕರಿಗೆ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿ ನೇತೃತ್ವದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಕ್ರಮ ಪ್ರಮಾಣ ಪತ್ರವನ್ನು ವಿತರಿಸುವಂತೆಯೂ ಹಾಗೂ ಕಾನೂನು ರೀತ್ಯಾ ಬೆಟರ್ ಮೆಂಟ್ ಶುಲ್ಕ ವಿಧಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.
ನಾಳೆಯಿಂದ ಫಲಾನುಭವಿ ಕಟ್ಟಡ ಮಾಲೀಕರಿಗೆ ಸಕ್ರಮ ಪ್ರಮಾಣಪತ್ರ
ನ್ಯಾಯಾಲಯದ ಆದೇಶದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಟ್ಟಡಗಳ ಮಾಲೀಕರಿಗೆ ಸಕ್ರಮ ಪ್ರಮಾಣ ಪತ್ರವನ್ನು ಡಾ. ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಮೇಡಿ ಅಗ್ರಹಾರದ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಾಳೆಯಿಂದ ಅಂದರೆ ದಿನಾಂಕ 13.05.2022 ವಿತರಿಸಲಿದೆ.
ಯಾವ ದಾಖಲಾತಿಗಳು ಅಗತ್ಯ?
ಫಲಾನುಭವಿಗಳು ಸಕ್ರಮ ಪ್ರಮಾಣ ಪತ್ರವನ್ನು ಪಡೆಯಲು ತಮ್ಮೊಂದಿಗೆ ಪಾಸ್ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ, ಆಧಾರ್ಕಾರ್ಡ್, ಸಮಿತಿಯಿಂದ ಸ್ವೀಕರಿಸಿರುವ ಎಸ್.ಎಂ.ಎಸ್., ಸಮಿತಿಯು ನೀಡಿರುವ ರಸೀದಿಯನ್ನು ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಈವರೆಗೂ ಶಿವರಾಮ್ ಕಾರಂತ್ ಬಡಾವಣೆಯ 2825 ಕಟ್ಟಡ ಸಕ್ರಮ
ಬಿಡಿಎ ನಿರ್ಮಿಸುತ್ತಿರುವ ಶಿವರಾಮ್ ಕಾರಂತ್ ಬಡಾವಣೆಯಲ್ಲಿ ಈವರೆಗೂ 2825 ಕಟ್ಟಡಗಳನ್ನು ಸಕ್ರಮಗೊಳಿಸಲಾಗಿದೆ. 2018ಕ್ಕೆ ಮುನ್ನವೇ ಸ್ಥಳೀಯ ಪ್ರಾಧಿಕಾರಗಳ ಅನುಮತಿಯನ್ನು ಪಡೆದುಕೊಂಡು ಕಟ್ಟಲಾಗಿರುವ ಕಟ್ಟಡಗಳನ್ನು ಮಾಹಿತಿಯನ್ನು ಮಾಲೀಕರು ಬಿಡಿಎಗೆ ಸಲ್ಲಿಸಿದ್ದರು. ಈ ಮಾಹಿತಿಯನ್ನು ಆಧರಿಸಿ ನ್ಯಾಯಮೂರ್ತಿ ಎವಿ ಚಂದ್ರಶೇಖರ್ ಸಮಿತಿ ಸರ್ವೋಚ್ಚ ನ್ಯಾಯಾಲಯಕ್ಕೆ 14ನೇ ವರದಿಯನ್ನು ನೀಡಿತ್ತು. ಈ ವರದಿಯನ್ನು ಗಮನಿಸಿ ನ್ಯಾಯಾಲಯ 480 ಕಟ್ಟಡಗಳನ್ನು ಸಕ್ರಮಗೊಳಿಸಿ ಆದೇಶಿಸಿದೆ. ಇದರಿಂದಾಗಿ ಕಾನೂನು ಹೋರಾಟವನ್ನು ಮಾಡುತ್ತಿದ್ದ ಸ್ಥಳೀಯ ನಿವಾಸಿಗಳು ಹರ್ಷಗೊಂಡಿದ್ದಾರೆ.