ಮನೆಯ ಅಂದ ಕೆಡುತ್ತೆ ಎಂದು ಫಲವತ್ತಾದ ಮರಕ್ಕೆ ವಿಷ ಉಣಿಸಿದ ಮಾಲೀಕ
ಬೆಂಗಳೂರು, ನವೆಂಬರ್ 6: ಮನೆಯ ಅಂದ ಕೆಡುತ್ತೆ ಎಂದು ಫಲವತ್ತಾಗಿ ಬೆಳೆದಿದ್ದ ಮರಕ್ಕೆ ಮನೆಯ ಮಾಲಿಕನೊಬ್ಬ ವಿಷ ಉಣಿಸಿದ ಘಟನೆ ಆರ್ಆರ್ ನಗರದಲ್ಲಿ ನಡೆದಿದೆ.
ಆರ್ಆರ್ನಗರದ ಪಂಚ ಶಿಲಾ ಬ್ಲಾಕ್ನಲ್ಲಿ ಘಟನೆ ನಡೆದಿದೆ. ಹದಿನೈದು ವರ್ಷದ ಮರಕ್ಕೆ ವಿಷಕಾರಿ ಇಂಜೆಕ್ಷನ್ ನೀಡಿದ್ದಾರೆ ಮನೆಯ ಮಾಲಿಕ ನರೇಂದ್ರ.
ಮರದ ಸುತ್ತಲೂ ನಲವತ್ತು ವಿಷಕಾರಿ ಇಂಜೆಕ್ಷನ್ ಹಾಕಿದ್ದಾರೆ. ಹೊಸದಾಗಿ ನಿರ್ಮಿಸಿರುವ ಮನೆಯ ಅಂದಕ್ಕೆ ಮರ ಅಡ್ಡಿ ಬರುತ್ತಿದೆ ಎಂದು ಈ ಕೆಲಸ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದೀಗ ಸ್ಥಳೀಯರು ಬಿಬಿಎಂಪಿಗೆ ದೂರು ನೀಡಿದ್ದಾರೆ.
ಈಗಾಗಲೇ ನಗರದಲ್ಲಿ ಮಾಲಿನ್ಯ ಮಿತಿ ಮೀರುತ್ತಿದೆ. ಮನೆಗಳು, ರಸ್ತೆ ಅಗಲೀಕರಣ, ನಮ್ಮ ಮೆಟ್ರೋ ಹೆಸರಿನಲ್ಲಿ ಸಾವಿರಾರು ಮರಗಳ ಮಾರಣ ಹೋಮ ನಡೆದಿದೆ. ಇನ್ನಾದರೂ ಉಳಿದಿರುವ ಮರಗಳನ್ನಾದರೂ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಹಲವರಿದ್ದಾರೆ.
ಆದರೆ ಮನೆಯ ಅಂದಕ್ಕೆ ಕಳಂಕ ಎಂದು ಶುದ್ಧ ಗಾಳಿ ನೀಡುವ, ಉಸಿರು ಉಳಿಸುವ ಮರದ ಉಸಿರುಗಟ್ಟಿಸಿದ್ದಾರೆ. ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡಬಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ಮನೆಯ ಅಂದವನ್ನು ಕಾಪಾಡಲು ಮರದ ಅಂದವನ್ನು ಹಾಳುಗೆಡವಿರುವ ಮನೆಯ ಮಾಲೀಕನಿಗೆ ಸಾರ್ವಜನಿಕರು ಛೀ, ಥೂ ಎಂದು ಬೈಯುತ್ತಿದ್ದಾರೆ. ಇದೇ ವರ್ಷವೇ ಜಯನಗರದಲ್ಲೂ ಇಂಥದ್ದೇ ಒಂದು ಘಟನೆ ನಡೆದಿತ್ತು. ಜಯನಗರದ ನಾಲ್ಕನೇ ಟಿ ಬ್ಲಾಕ್ನಲ್ಲಿರುವ ಅಶ್ವತ್ಥ ಮರಕ್ಕೆ ಕಿಡಿಗೇಡಿಗಳು ವಿಷ ಉಣಿಸಿದ್ದರು. ಮರಕ್ಕೆ ಐದು ಕಡೆ ರಂಧ್ರ ಮಾಡಿ ಅದರೊಳಗೆ ವಿಷಪೂರಿತ ಔಷಧಿಯನ್ನು ಬಿಟ್ಟಿದ್ದರು.

ಮರಕ್ಕೆ ವಿಷದ ಇಂಜೆಕ್ಷನ್ ಕೊಟ್ಟವರು ಓರ್ವ ಡಾಕ್ಟರ್
ಮರಕ್ಕೆ ಇಂಜೆಕ್ಷನ್ ಕೊಟ್ಟವರು ಓರ್ವ ವೈದ್ಯರು. ದಕ್ಷಿಣ ಬೆಂಗಳೂರು ರಾಜರಾಜೇಶ್ವರಿನಗರ ಮೂರನೇ ಹಂತ, ಬಿಇಎಂಎಲ್ ಲೇಔಟ್ನಲ್ಲಿರುವ ಪಂಚಶೀಲ ಬ್ಲಾಕ್ ನಿವಾಸಿ ಡಾ. ನರೇಂದ್ರ ಎಂಬುವವರು ಮರದ ಕಾಂಡಕ್ಕೆ ಪಾದರಸ ಇಂಜೆಕ್ಷನ್ ಚುಚ್ಚಿದ್ದಾರೆ.

ಮರ ಕಡಿಯಲು ಅನುಮತಿಗೆ ಮನವಿ ಮಾಡಿದ್ದೆವು
ಅಕ್ಟೋಬರ್ 30ರಂದು ಅಲ್ಲಿನ ನಿವಾಸಿಗಳ ಸಂಘ ಡಾ. ನರೇಂದ್ರ ಅವರನ್ನು ವಿಚಾರಿಸಿದಾಗ ತನ್ನ ಮನೆ ಮುಂದೆ ಇರುವ 15 ವರ್ಷದ ಮರವನ್ನು ಕಡಿಯಲು ಬಿಬಿಎಂಪಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದರು. ಆರ್ಆರ್ ನಗರ ದ ಬಿಬಿಎಂಪಿ ಟ್ರೀ ಆಫೀಸರ್ ಭಾನು ಪ್ರಕಾಶ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ತಿಳಿಸಿದ್ದಾರೆ.

ಮನೆ ನಿರ್ಮಿಸುವಾಗ ಎರಡು ಮರ ಕಡಿದಿದ್ದರು
ಮನೆ ನಿರ್ಮಿಸುವಾಗ ಎರಡು ಮರಗಳನ್ನು ಕಡಿದಿದ್ದರು. ಇಲ್ಲಿಯವರೆಗೆ ಅವರು ಶಾಂತಿ ಮಾರ್ಗ್ನಲ್ಲಿದ್ದ ಐದು ಮರಗಳನ್ನು ಕಡಿದಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಕುಟುಂಬದವರಿಗೆ ಮರದಿಂದ ಅಸ್ತಮಾ?
ಮರಗಳು ವೈದ್ಯರ ಕುಟುಂಬದವರಿಗೆ ಅಸ್ತಮಾ ಉಂಟು ಮಾಡುತ್ತಿರುವುದರಿಂದ ಆ ಮರವನ್ನು ನಾಶ ಮಾಡಬೇಕೆಂದು ಡಾ. ನರೇಂದ್ರ ಹೇಳಿದ್ದರು ಎಂದು ರಾಜ್ಕುಮಾರ್ ತಿಳಿಸಿದ್ದಾರೆ.












Click it and Unblock the Notifications