Belagavi: ಮಗಳಿಗೆ ಬಾಲ್ಯವಿವಾಹ ಬೇಡ ಎಂದ ಪತ್ನಿಯ ಕೈ-ಕಾಲು ಮುರಿದ ಪತಿ
ಬೆಳಗಾವಿ, ಮಾರ್ಚ್ 12: ಮಗಳಿಗೆ ಬಾಲ್ಯವಿವಾಹ ಬೇಡ ಎಂದಿರುವುದಕ್ಕೆ ಪತಿಯೇ ಪತ್ನಿಯ ಕೈ ಕಾಲು ಮುರಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರುಗೊಪ್ಪ ಗ್ರಾಮದಲ್ಲಿ ನಡೆದದಿದೆ. ಭೀರಪ್ಪ ಕರೆನ್ನವರ ಪತ್ನಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಹಾರುಗೊಪ್ಪ ಗ್ರಾಮದ ಭೀರಪ್ಪ ಕರೆನ್ನವರ ಹಾಗೂ ಮಾಯವ್ವಾ ದಂಪತಿಗೆ 13 ವರ್ಷದ ಓರ್ವ ಮಗಳಿದ್ದಾಳೆ. ಆಕೆಯನ್ನು ಭೀರಪ್ಪ ಕರೆನ್ನವರನ ಅಣ್ಣನ ಹೆಂಡತಿ ಮನೆಯ ಹುಡುಗನಿಗೆ ಮದುವೆ ಮಾಡಿಸುವ ವಿಚಾರಕ್ಕೆ ಈ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಮಾಯವ್ವಾ ಕೈ ಕಾಲು ಮುರಿದಿದೆ.

ಭೀರಪ್ಪನ ಅಣ್ಣನ ಪತ್ನಿ ಹಾಗೂ ಮನೆಯವರು 13 ವರ್ಷದ ಬಾಲಕಿಯನ್ನು ಮದುವೆ ಮಾಡಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಹುಡುಗನ ಮನೆಯಲ್ಲಿ 40 ಎಕರೆ ಜಮೀನು ಇದೆ. ನಿಮ್ಮ ಮಗಳು ಚೆನ್ನಾಗಿರುತ್ತಾಳೆ. ಹುಡುಗ ಸ್ವಲ್ಪ ಹುಚ್ಚನ ತರ ಇದ್ದಾನೆ. ಅವನಿಗೆ ಕೊಟ್ಟರೆ ಆಸ್ತಿ ಸಿಗುತ್ತದೆ ಎಂದು ಭೀರಪ್ಪನಿಗೆ ಆಮೀಷವೊಡ್ಡಿದ್ದಾರೆ.
40 ಎಕರೆ ಜಮೀನು ಹಾಗೂ ಆಸ್ತಿ ಆಸೆಗೆ ಬಿದ್ದ ಭೀರಪ್ಪ ಮಗಳನ್ನು ಆ ಯುವಕನಿಗೆ ಮದುವೆ ಮಾಡಿಕೊಡಲು ಒಪ್ಪಿದ್ದಾನೆ. ಈ ವಿಚಾರ ತಿಳಿದ ಮಾಯವ್ವಾ ಪತಿಯ ನಿರ್ಧಾರವನ್ನು ವಿರೋಧಿಸಿದ್ದಾಳೆ. ಆಸ್ತಿ ತೆಗೆದುಕೊಂಡು ಏನು ಮಾಡೋದು, ನಮ್ಮ ಮಗಳು ಮದುವೆ ವಯಸ್ಸಿಗೆ ಬಂದ ಮೇಲೆ ಮುಂದೆ ನೋಡೋಣ. ಇದು ಬಾಲ್ಯ ವಿವಾಹ ಆಗುತ್ತದೆ. ಮಗಳಿಗೆ ಇನ್ನೂ 13 ವರ್ಷ, ಒಳ್ಳೆಯ ಶಿಕ್ಷಣ ಕೊಡಿಸೋಣ ಮದುವೆ ಬೇಡ ಎಂದಿದ್ದಾರೆ.
ಆದರೆ ಭೀರಪ್ಪ, ಹುಡುಗನ ಮನೆಯವರು ಒಳ್ಳೆಯ ಆಸ್ತಿವಂತರು. ಮಗಳನ್ನು ಕೊಟ್ಟು ಬಿಡೋಣ ಎಂದು ಹಠ ಹಿಡಿದಿದ್ದಾನೆ. ಇದಕ್ಕೆ ಮಾಯವ್ವಾ ಸುತರಾಮ್ ಒಪ್ಪದೇ ಇದ್ದಾಗ, ಕೋಪಗೊಂಡು ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿ ಕೈ ಕಾಲು ಮುರಿದಿದ್ದಾನೆ. ಪತಿಯಿಂದಲೇ ಹಲ್ಲೆಗೊಳಗಾದ ಮಾಯವ್ವ ಸದ್ಯ ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಈ ಅವಾಂತರಕ್ಕೆ ಸೂತ್ರಧಾರಿ ಭೀರಪ್ಪನ ಅಣ್ಣ ಹಾಗೂ ಅವನ ಪತ್ನಿಯ ಮನೆಯವರು ಎನ್ನುವುದು ಮಾಯವ್ವನ ಆರೋಪವಾಗಿದ್ದು, ಪ್ರಕರಣ ದಾಖಲಾಗಿದೆ. ಆದರೂ ಪೋಲಿಸರು ಅವರನ್ನು ಬಂಧಿಸಿಲ್ಲ ಎಂದು ದೂರಿದಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications