'ಪ್ರಧಾನಿಗಳೇ ನಿಮ್ಮದೇ ಪಕ್ಷದವರ ಅದ್ಧೂರಿ ಖರ್ಚು ಕಾಣ್ತಿಲ್ವಾ?'
ಬೆಂಗಳೂರು, ನವೆಂಬರ್ 16: ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಗಾಗಿ ನೀರಿಗಿಂತ ಅಗ್ಗ ಅನ್ನೋ ಹಾಗೆ ಹಣ ಖರ್ಚು ಮಾಡುತ್ತಿದ್ದರೆ, ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ಕಾರ್ಯಕರ್ತರು ಈ ಅದ್ಧೂರಿ ಮದುವೆ ವಿರೋಧಿಸಿ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ನಾಯಕರಾದ ಅಮಿತ್ ಶಾ, ಅರುಣ್ ಜೇಟ್ಲಿ, ಬಿ.ಎಸ್.ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಜತೆಗೆ ಪ್ರಧಾನಿ ನರೇಂದ್ರ ಮೋದಿ ಮುಖವಾಡ ತೊಟ್ಟು ಪ್ರತಿಭಟಿಸಿದರು.'ಪ್ರಧಾನಮಂತ್ರಿಗಳು ದೇಶದ ಜನ ಸಾಮಾನ್ಯರನ್ನು ಮನವಿ ಮಾಡ್ತಾರೆ. ಕಡಿಮೆ ದುಡ್ಡು ಬಳಸಿ ಅಂತಾರೆ. ಆದರೆ ಅವರದೇ ಪಕ್ಷದ ವ್ಯಕ್ತಿ ತನ್ನ ಕುಟುಂಬಕ್ಕಾಗಿ ಹೇಗೆ ಅದ್ಧೂರಿ ಖರ್ಚು ಮಾಡುತ್ತಿದ್ದಾರೆ. ನಿಜವಾದ ಕಪ್ಪು ಹಣ ಇರುವವರು ಹೇಗಿದ್ದಾರೆ ನೋಡಿ' ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.[ಗಾಲಿ ರೆಡ್ಡಿ ಮಗಳ ಮದುವೆಯಲ್ಲಿ ಕಂಡ ಮುಖಗಳು]
ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ. ಒಂದು ಕಡೆ ಕಪ್ಪು ಹಣಕ್ಕೆ ತಡೆ ಹಾಕಬೇಕು ಅನ್ನುತ್ತದೆ. ಅದೇ ವೇಳೆ ಜನಾರ್ದನ ರೆಡ್ಡಿಯಂಥವರು ತಮ್ಮ ಆದಾಯವನ್ನೂ ಮೀರಿ ಸಂಪಾದಿಸಿದ ಹಣವನ್ನು ತಮಗೆ ಬೇಕಾದಂತೆ ಖರ್ಚು ಮಾಡಲು ಪ್ರೋತ್ಸಾಹಿಸುತ್ತದೆ ಎಂದು ಎನ್ ಎಸ್ ಯುಐ ಕಾರ್ಯಕರ್ತರು ಆರೋಪಿಸಿದರು.[ರೆಡ್ಡಿ ಮಗಳ ಅದ್ಧೂರಿ ಮದುವೆ: ಐಟಿಯಲ್ಲಿ ದೂರು ದಾಖಲು]
ಆದಾಯ ತೆರಿಗೆ ಇಲಾಖೆ ಈ ಮದುವೆ ಮೇಲೆ ಕಣ್ಣಿಟ್ಟಿದೆ ಎಂದು ತಿಳಿಸಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಮಾಧ್ಯಮದವರ ಜತೆ ಮಾತನಾಡಿ, ಎಲ್ಲ ಖರ್ಚುಗಳ ಲೆಕ್ಕವನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.