ಡಿಕೆ ರವಿ ಆತ್ಮಹತ್ಯೆ ಹಿಂದೆ ಕ್ರಿಮಿನಲ್ ಸಂಚಿಲ್ಲ: ಸಿಬಿಐ
ಬೆಂಗಳೂರು, ಜೂ.24: ಐಎಎಸ್ ಅಧಿಕಾರಿ ಡಿಕೆ ರವಿ ಆತ್ಮಹತ್ಯೆಯ ನಿಗೂಢತೆಗೆ ಕೊನೆಗೂ ಉತ್ತರ ಸಿಕ್ಕಿದೆ. ರವಿ ಅವರ ಆತ್ಮಹತ್ಯೆ ಹಿಂದೆ ಯಾವುದೇ ಕ್ರಿಮಿನಲ್ ಸಂಚಿಲ್ಲ, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕೊಲೆಯಲ್ಲ ಎಂದು ಸಿಬಿಐ ಅಂತಿಮ ಷರಾ ಬರೆದಿದೆ.
ಡಿಕೆ ರವಿ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡ ತನ್ನ ಅಂತಿಮ ವರದಿಯನ್ನು ಸಿದ್ಧಪಡಿಸಿದ್ದು, ಅದರಂತೆ, ರವಿ ಸಾವಿನಲ್ಲಿ ಯಾವುದೇ ಸಂಶಯ ಕಂಡು ಬಂದಿಲ್ಲ ಎಂದು ಬರೆಯಲಾಗಿದೆ. [ಡಿಕೆ ರವಿ ಕೇಸ್: ಸಾವು, ಸಿಐಡಿ, ಸಿಬಿಐ ತನಕ ಟೈಮ್ ಲೈನ್]
ಕರ್ನಾಟಕ ಸರ್ಕಾರ ಮೇ ತಿಂಗಳಿನಲ್ಲಿ ಡಿಕೆ ರವಿ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿಯಿಂದ ಸಿಬಿಐಗೆ ಹಸ್ತಾಂತರಿಸಿತ್ತು. ಸಿಐಡಿ ತನಿಖೆ, ಮಧ್ಯಂತರ ವರದಿಯಲ್ಲೂ ರವಿ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಬೀತಾಗಿತ್ತು. [ರವಿ ಸಾವು: ಸಿಬಿಐ ತನಿಖೆಯ ಮೊದಲ ಪುಟ!]
ಆತ್ಮಹತ್ಯೆ ಹಿಂದೆ ಯಾವುದೇ ಸಂಚಿಲ್ಲ: ರವಿ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದರ ಹಿಂದೆ ಯಾರ ಕೈವಾಡವೂ ಇಲ್ಲ. ಯಾರು ಬಲವಂತವಾಗಿ ನೇಣು ಬಿಗಿದಿಲ್ಲ. ಉಸಿರುಗಟ್ಟಿಸಿ ಸಾಯಿಸಿಲ್ಲ ಅಥವಾ ದೈಹಿಕ ಒತ್ತಡ ಹೇರಿಲ್ಲ. ಆತ್ಮಹತ್ಯೆ ಹಿಂದೆ ಯಾವುದೇ ಕ್ರಿಮಿನಲ್ ಸಂಚು ಕಂಡು ಬಂದಿಲ್ಲ. [ತನಿಖೆ: ಜಾರಿ ನಿರ್ದೇಶನಾಲಯ ಎಂಟ್ರಿ]
ಫೋರೆನ್ಸಿಕ್ ವರದಿ, ಮರಣೋತ್ತರ ಪರೀಕ್ಷಾ ವರದಿ, ಎಫ್ ಎಸ್ಎಲ್ ವರದಿ, ಡಿಕೆ ರವಿ ಫೋನ್ ಕಾಲ್, ವಾಟ್ಸಪ್ ಸಂದೇಶ ಪರೀಕ್ಷೆ, ಹಲವಾರು ಜನರ ವಿಚಾರಣೆ ಬಳಿಕ ಈ ಅಂತಿಮ ನಿರ್ಣಯಕ್ಕೆ ಬರಲಾಗಿದೆ ಎಂದು ಸಿಬಿಐ ಹೇಳಿದೆ.
ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ಸಿಬಿಐ ಅಂತಿಮ ವರದಿ ಯಾವಾಗ ಹೊರಬರಲಿದೆ? ಏಮ್ಸ್ ವರದಿ ಏನು ಹೇಳುತ್ತದೆ? ಮುಂದೆ ಓದಿ...

ರವಿ ಆತ್ಮಹತ್ಯೆ ಏಮ್ಸ್ ವರದಿಯಿಂದ ಸಾಬೀತು
* ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ನೀಡಿದ ಮರಣೋತ್ತರ ಪರೀಕ್ಷೆ ವರದಿ ನಂತರ ಮತ್ತೊಮ್ಮೆ ಅಟಾಪ್ಸಿ ಪರೀಕ್ಷೆ ನಡೆಸಲಾಯಿತು. ಏಮ್ಸ್ ವೈದ್ಯರು ಕೂಡಾ ಇದು ಆತ್ಮಹತ್ಯೆ ಎಂದು ವರದಿ ನೀಡಿದರು.
* ಬೆಂಗಳೂರು ಹಾಗೂ ಹೈದರಾಬಾದಿನಲ್ಲಿ ನಡೆಸಲಾದ ಫೊರೆನ್ಸಿಕ್ ವರದಿಯಲ್ಲೂ ಆತ್ಮಹತ್ಯೆ ಎಂದೇ ತೀರ್ಪು
* ನೇಣು ಬಿಗಿದುಕೊಂಡು ಉಸಿರುಗಟ್ಟಿ (asphyxiation) ಸಾವನ್ನಪ್ಪಿದ್ದಾರೆ ಎಂಬ ಮೊದಲ ವರದಿಯನ್ನು ಪುಷ್ಟಿಕರಿಸಿದ ಏಮ್ಸ್ ವೈದ್ಯರು.

ಜುಲೈನಲ್ಲಿ ಸಿಬಿಐ ಅಂತಿಮ ತೀರ್ಪು
ಜುಲೈನಲ್ಲಿ ಸಿಬಿಐ ಅಂತಿಮ ತೀರ್ಪು ನೀಡುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಕೇಂದ್ರ ವಿಧಿ ವಿಜ್ಞಾನ ತಜ್ಞರಿಂದ ಮತ್ತೊಮ್ಮೆ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆಯೂ ಇದೆ.
ಅಂತಿಮ ವರದಿಗೂ ಮುನ್ನ ಇನ್ನೂ ಕೆಲವರನ್ನು ವಿಚಾರಣೆಗೊಳಪಡಿಸಲಾಗುತ್ತದೆ. ಸಿಎಫ್ ಎಸ್ ಎಲ್ ವರದಿಯನ್ನು ಪರಿಗಣಿಸಿ ಜುಲೈನಲ್ಲಿ ಪ್ರಕರಣದ ಕೊನೆ ತೀರ್ಪು ನೀಡಲಿದ್ದಾರೆ.

ಡಿಕೆ ರವಿ ಸಾವಿಗೆ ಕಾರಣ ಏನು?
ಡಿಕೆ ರವಿ ಹಾಗೂ ಅವರ ಪಾಲುದಾರ ಆರ್ ಹಾಗೂ ಎಚ್ ಹೆಸರಿನ ಸಂಸ್ಥೆ ಮೂಲಕ ರಿಯಲ್ ಎಸ್ಟೇಟ್ ಬಿಸಿನೆಸ್ ನಡೆಸಲು ಯೋಜಿಸಿದ್ದು, ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದು, ಎಸ್ ಸಿ/ಎಸ್ ಟಿ ಕೋಟಾದಲ್ಲಿ ಮಂಜೂರಾದ ಭೂಮಿಗೆ ಕೈ ಹಾಕಿದ್ದು, 50 ಎಕರೆ ಭೂಮಿಯನ್ನು ಪಡೆದು ಲೇಔಟ್ ನಿರ್ಮಾಣಕ್ಕೆ ಮುಂದಾಗಿದ್ದು ಎಲ್ಲವೂ ಹೊಸ ತಿರುವು ನೀಡುತ್ತಿದೆ. ಇನ್ಮುಂದೆ ಸಿಬಿಐ ಜೊತೆಗೆ ಜಾರಿ ನಿರ್ದೇಶನಾಲಯ ಕೂಡಾ ತನಿಖೆ ಮುಂದುವರೆಸಿದೆ.

ರಿಯಲ್ ಎಸ್ಟೇಟ್, ಮರಳು ಮಾಫಿಯಾ ವಿರುದ್ಧ ತನಿಖೆ?
ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವಿಗೆ ರಿಯಲ್ ಎಸ್ಟೇಟ್ ದಂಧೆ ಅಲ್ಲದೆ ಬೇರೆ ಯಾವ ಕಾರಣ ಇಲ್ಲ ಎಂಬುದಾದರೆ, ಡಿಕೆ ರವಿಗೆ ಮಾನಸಿಕ ಒತ್ತಡ ಬಂದಿದ್ದು ಯಾರಿಂದ, ಸಾವು ಆತ್ಮಹತ್ಯೆ ಎಂಬುದಾದರೆ, ಮಾಫಿಯಾಗಳ ತನಿಖೆ ನಡೆಸುವುದಿಲ್ಲ. ಜನರ ಆಕ್ರೋಶ, ದಕ್ಷ ಅಧಿಕಾರಿಯ ಸಾವಿನ ನಂತರವೂ ಮರಳು ಮಾಫಿಯಾ ದಂಧೆ ಹತ್ತಿಕ್ಕಲು ಸುಲಭಕ್ಕೆ ಸಾಧ್ಯವಿಲ್ಲ. [ವಿವರ ಇಲ್ಲಿ ಓದಿ]

ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ತನಿಖೆ ಇಲ್ಲ?
ಮಹಿಳಾ ಅಧಿಕಾರಿಗೆ ಡಿಕೆ ರವಿ ಅವರು ಸಾಯುವ ದಿನ 44 ಬಾರಿ ಫೋನ್ ಕರೆ ಮಾಡಿದ್ದರು ಎಂದು ಸರ್ಕಾರದಿಂದಲೇ ಸುದ್ದಿ ಹಬ್ಬಿತ್ತು. ಸಾಯುವ ದಿನ ವಾಟ್ಸಪ್ ಸಂದೇಶ ಕಳಿಸಿದ್ದು, ಹಾಗೂ ಕರೆ ಮಾಡಿದ್ದು ಒಂದೇ ಬಾರಿ ಎಂದು ಸಿಬಿಐ ಸ್ಪಷ್ಟಪಡಿಸಿದೆ.
ವಾಟ್ಸಪ್ ಸಂದೇಶ ಸಿಐಡಿ ಕಡೆಯಿಂದಲೇ ಬಹಿರಂಗಗೊಂಡಿದೆ. ರವಿ ಅವರ ವೈಯಕ್ತಿಕ ವಿಚಾರಗಳು ಬಹಿರಂಗಗೊಳಿಸುವಲ್ಲಿ ಸರ್ಕಾರದ ಅಧಿಕಾರಿಗಳು ಶಾಮೀಲಾಗಿರುವುದು ಪತ್ತೆಯಾಗಿತ್ತು. ಅದರೆ, ಇವರ ವಿರುದ್ಧ ಯಾವುದೇ ಕ್ರಮ, ವಿಚಾರಣೆ ಕೈಗೊಂಡಿಲ್ಲ












Click it and Unblock the Notifications