ಡಿಕೆ ರವಿ ಕೇಸ್: ಸಿಬಿಐ ತನಿಖೆ ಕುಂಠಿತಗೊಂಡಿತೆ?
ಬೆಂಗಳೂರು, ಮೇ.15: ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅವರ ನಿಗೂಢ ಸಾವಿನ ಪ್ರಕರಣದ ತನಿಖೆ ಕೈಗೊಂಡಿರುವ ಸಿಬಿಐ ತಂಡ ತನ್ನ ತನಿಖೆ ವೇಗವನ್ನು ಕುಂಠಿತಗೊಳಿಸಿದೆಯೇ? ಈಗಾಗಲೇ ಕೇಸು ಅಂತಿಮ ಹಂತ ತಲುಪಿದೆಯೇ? ಡಿ.ಕೆ.ರವಿ ಆತ್ಮಹತ್ಯೆ ಮಾಡಿಕೊಳ್ಳಲು ವೈಯಕ್ತಿಕ ಕಾರಣ ಎಂದು ಷರಾ ಬರೆಯಲು ಸಿಬಿಐ ಮುಂದಾಗಿದೆಯೇ? ಎಂಬ ಪ್ರಶ್ನೆಗಳು ಎದ್ದಿವೆ.
ಸಿಬಿಐ ತನ್ನ ಮೊದಲ ಹಂತದ ತನಿಖೆ ಮುಗಿಸಿದೆ. ಬಹುತೇಕ ಎಲ್ಲಾ ಪ್ರಮುಖ ವ್ಯಕ್ತಿಗಳ ವಿಚಾರಣೆ ಮುಗಿದಿದೆ. ಡಿಕೆ ರವಿ ಕುಟುಂಬದವರು ಹೊರತುಪಡಿಸಿದರೆ ಉಳಿದವರ ಪೈಕಿ ಯಾರೊಬ್ಬರೂ ಇದರಲ್ಲಿ ಬೇರೆಯವರ ಕೈವಾಡ ಇರುವುದರ ಬಗ್ಗೆ ಸ್ಪಷ್ಟವಾಗಿ ಏನೂ ಹೇಳಿಲ್ಲ. [ಡಿಕೆ ರವಿ ಕೇಸ್: ಸಾವು, ಸಿಐಡಿ, ಸಿಬಿಐ ತನಕ ಟೈಮ್ ಲೈನ್]
ಸರಣಿ ವಿಚಾರಣೆ: ಸಿಬಿಐನ ಹಿರಿಯ ಅಧಿಕಾರಿ ಉಮೇಶ್ ದತ್ತ, ಎಸ್ಪಿ ಕೃಷ್ಣಮೂರ್ತಿ ನೇತೃತ್ವದ ತಂಡ ಈಗಾಗಲೇ ಹಲವರನ್ನು ವಿಚಾರಣೆಗೆ ಒಳಪಡಿಸಿದೆ. ವಿಕ್ಟೋರಿಯಾ ಆಸ್ಪತ್ರೆ ವೈದ್ಯರು,ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ, ಡಿ.ಕೆ.ರವಿ ಮಾವ ಹನುಮಂತರಾಯಪ್ಪ, ಪತ್ನಿ ಕುಸುಮಾ, ರವಿ ತಂದೆ-ತಾಯಿ-ಸಹೋದರ, ಸ್ನೇಹಿತರು, ಸಂಬಂಧಿಕರಿಂದಲೂ ಮಾಹಿತಿ ಪಡೆಯಲಾಗಿದೆ. [ರವಿ ಕಳಿಸಿದ ಕೊನೆ ವಾಟ್ಸಪ್ ಸಂದೇಶದಲ್ಲಿ ಏನಿದೆ?]

ಉಳಿದಂತೆ, ಕಂದಾಯ ಇಲಾಖೆ ಉಪ ಆಯುಕ್ತರನ್ನು ಪ್ರಶ್ನೆ ಮಾಡಲಾಗಿದೆ. ರವಿ ಕಾರ್ಯ ನಿರ್ವಹಿಸುತ್ತಿದ್ದ ಕಚೇರಿಯ ಸಿಬ್ಬಂದಿ ಕೂಡಾ ಸಾವಿನ ಕಾರಣದ ಬಗ್ಗೆ ನೀಡಿರುವ ಹೇಳಿಕೆಗಳು ಯಾವುದೇ ಹೊಸ ತಿರುವು ನೀಡಿಲ್ಲ.
ಸಿಐಡಿಯಿಂದ ಪಡೆದ ದಾಖಲೆಗಳು, ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ನೀಡಿದ ಮರಣೋತ್ತರ ಪರೀಕ್ಷಾ ವರದಿ ಹಾಗೂ ಹೈದರಾಬಾದಿನಿಂದ ಬಂದ ಸಿಎಫ್ ಎಲ್ ವರದಿಯಲ್ಲೂ ಯಾವುದೇ ಹೊಸ ವಿಷಯ ಸಿಕ್ಕಿಲ್ಲ.[ರವಿ ಸೂಪರ್ ಟ್ರ್ಯಾಕ್ ರೆಕಾರ್ಡ್]
ಮೊಬೈಲ್ ಇನ್ನಿತರ ಸಾಧನಗಳ ಪರೀಕ್ಷೆ: ಸೈಬರ್ ಕ್ರೈಂ ವಿಭಾಗದಿಂದ ಡಿಕೆ ರವಿ ಅವರ ಮೊಬೈಲ್ ನಿಂದ ಸಾವಿರಾರು ಸಂದೇಶಗಳನ್ನು ಕೆದಕಿ ನೋಡಲಾಗಿದೆ. ಲ್ಯಾಪ್ ಟಾಪ್, ಐಪ್ಯಾಡ್ ಪರೀಕ್ಷಿಸಲಾಗಿದೆ. ಕೊನೆ ಸಂದೇಶದ ಜಾಡು ಹಿಡಿದು ಮಹಿಳಾ ಅಧಿಕಾರಿಯನ್ನು ಪ್ರಶ್ನಿಸಲಾಗಿದೆ.
ಮಹಿಳಾ ಅಧಿಕಾರಿ ಹಾಗೂ ಡಿಕೆ ರವಿ ಇಬ್ಬರು ಉತ್ತಮ ಸ್ನೇಹಿತರು ಎಂಬುದು ಸಿಬಿಐಗೆ ದೃಢಪಟ್ಟಿದೆ. ಹೀಗಾಗಿ ಯಾವುದೇ ಒಂದು 'ಲೀಡ್' ಇಲ್ಲದೆ ಸಿಬಿಐ ತಂಡ ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಕೇಸ್ ಕ್ಲೋಸ್ ಮಾಡುವ ಸಾಧ್ಯತೆ ದಟ್ಟವಾಗಿದೆ. (ಒನ್ ಇಂಡಿಯಾ ಸುದ್ದಿ)











Click it and Unblock the Notifications