'ಭಾರಿ ತಿಮಿಂಗಲ ಬಲೆಗೆ ಕೆಡವಲು ರವಿ ಸ್ಕೆಚ್ ಹಾಕಿದ್ರು'
ಬೆಂಗಳೂರು, ಮಾ.18: ಐಎಎಸ್ ಅಧಿಕಾರಿ ಡಿಕೆ ರವಿ ಅವರು ಸಾಯುವುದಕ್ಕೂ ನಾಲ್ಕು ದಿನಗಳ ಮುಂಚೆ ನಗರದ ಪ್ರಮುಖ ಸಾಮಾಜಿಕ ಕಾರ್ಯಕರ್ತ ಗಣೇಶ್ ಎಸ್ ಕೌಂಡಿನ್ಯ ಅವರಿಗೆ ಫೋನ್ ಕಾಲ್ ಮಾಡಿ ಮಾತನಾಡಿದ್ದರು. ಗಣೇಶ್ ನೆರವಿನಿಂದ ಮುಂದಿನ ವಾರ ಭಾರಿ ತಿಮಿಂಗಲವನ್ನೊಂದನ್ನು ಕೆಡವಲು ರವಿ ಸ್ಕೆಚ್ ಹಾಕಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಈ ಬಗ್ಗೆ ಸ್ವತಃ ಗಣೇಶ್ ಕೌಂಡಿನ್ಯ ಅವರು ಖಾಸಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯಿಂದ ಮುಂದಿನ ವಾರ ದಾಳಿ ನಡೆಸಲು ಯೋಜನೆ ರೂಪಿಸಲಾಗಿತ್ತು. ನನಗೆ ಗುರುವಾರ(ಮಾ.12) ಫೋನ್ ಕರೆ ಮಾಡಿದ್ದರು. [ಸಿಬಿಐ ಬೇಡ ಸಿಐಡಿಯಿಂದಲೇ ತನಿಖೆಯಾಗಲಿ]
ಸುಮಾರು ಏಳೆಂಟು ನಿಮಿಷ ಮಾತುಕತೆ ನಡೆಸಿದೆವು. ವಾರಾಂತ್ಯದಲ್ಲಿ ಇಬ್ಬರು ಭೇಟಿಯಾಗಬೇಕಿತ್ತು. ಮಾಹಿತಿ ವಿನಿಮಯ ಮಾಡಿಕೊಳ್ಳಲು ರವಿ ತುಂಬಾ ಉತ್ಸುಕರಾಗಿದ್ದರು. ಅದರೆ, ನಿಜಕ್ಕೂ ಆಘಾತವಾಗಿದೆ.[ರವಿ ಸೂಪರ್ ಟ್ರ್ಯಾಕ್ ರೆಕಾರ್ಡ್]

ರವಿ ಆತ್ಮಹತ್ಯೆ ಮಾಡಿಕೊಂಡಿಲ್ಲ: ರವಿ ಡೇರ್ ಡೇವಿಲ್ ಅಧಿಕಾರಿಯಾಗಿದ್ದರು. ನಾಲ್ಕು ತಿಂಗಳ ಅವಧಿಯಲ್ಲಿ ದೊಡ್ಡ ದೊಡ್ಡ ಕಂಪನಿಗಳ ಮೇಲೆ ದಾಳಿ ನಡೆಸಿ 129 ಕೋಟಿ ರು ತೆರಿಗೆ ಹಣ ಸರ್ಕಾರದ ಬೊಕ್ಕಸ ಸೇರುವಂತೆ ಮಾಡಿದ್ದರು. ನನ್ನ ಬಳಿ ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಕಂಪನಿಗಳ ಮಾಹಿತಿ ಇದೆ. ಇದನ್ನು ರವಿ ಬಳಿ ಹಂಚಿಕೊಳ್ಳಲು ನಾನು ಸಿದ್ಧವಿದ್ದೆ. ಅದರೆ, ರವಿ ಹತ್ಯೆಯಾಗಿದ್ದು ನಿಜಕ್ಕೂ ಆಘಾತಕಾರಿ ಎಂದು ಗಣೇಶ್ ಹೇಳಿದ್ದಾರೆ. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]
ಮಾಧ್ಯಮ ಮಿತ್ರರೊಬ್ಬರಿಂದ ನನಗೆ ರವಿ ಪರಿಚಯವಾಯಿತು. ಅವರು ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿ ಕೈಗೊಂಡಿದ್ದ ಕ್ರಮಗಳು, ನಡೆಸಿದ್ದ ದಾಳಿಗಳ ಬಗ್ಗೆ ತಿಳಿದಿತ್ತು. ಹೀಗಾಗಿ ರವಿ ಬಗ್ಗೆ ನಂಬಿಕೆ ಬೆಳೆಯಿತು. [ಸಿದ್ದು ಮೇಲೆ ಸಾಕ್ಷಿ ನಾಶದ ಆರೋಪ]
ತೆರಿಗೆಗಳ್ಳರ ಮೇಲೆ ರವಿಗೆ ಸಿಟ್ಟಿತ್ತು: ರವಿ ಇತ್ತೀಚೆಗೆ ದಾಳಿ ನಡೆಸಿದ ಕಂಪನಿಗಳ ಮೇಲೆ ಈಗಾಗಲೇ ಆದಾಯ ತೆರಿಗೆ ಹಾಗೂ ಸೇವಾ ತೆರಿಗೆ ಇಲಾಖೆ ದಾಳಿ ನಡೆಸಿದ್ದವು. ಆದರೆ, ರವಿ ತನ್ನ ಇಲಾಖೆಯಿಂದ ದಾಳಿ ನಡೆಸಿ ನೂರಾರು ಕೋಟಿ ತೆರಿಗೆ ಹಣ ಸಂಗ್ರಹಿಸಿದರು.

ಅದರೆ, ರಾಜಕಾರಣಿಗಳ ಜೊತೆ ಒಡನಾಟವಿದ್ದ ಭಾರಿ ಕಂಪನಿಯೊಂದರ ಮೇಲೆ ದಾಳಿ ನಡೆಸಲು ಸೂಕ್ತ ದಾಖಲೆಗಳ ನೆರವು ಬೇಕಿತ್ತು. ಇದನ್ನು ಒದಗಿಸಲು ನಾನು ಮುಂದಾಗಿದ್ದೆ. ಬೇರುಮಟ್ಟದಿಂದ ತೆರಿಗೆಗಳ್ಳರನ್ನು ಬಯಲಿಗೆಳೆಯಲು ರವಿ ಹೋರಾಟ ನಡೆಸಿದ್ದರು. [ಮರಳು ಮಾಫಿಯಾ ಎಂದರೇನು?]
ಮಾಫಿಯಾ ಕೈವಾಡ ಇರಬಹುದೇ?: ಲ್ಯಾಂಡ್, ಸ್ಯಾಂಡ್ ಮಾಫಿಯಾ ಕೈವಾಡ ಇದೆ ಎಂಬ ವಾದವನ್ನು ಸುಲಭಕ್ಕೆ ತೆಗೆದು ಹಾಕುವಂತಿಲ್ಲ. ದೊಡ್ಡ ದೊಡ್ಡವರ ದ್ವೇಷ ಕಟ್ಟಿಕೊಂಡಿದ್ದ ರವಿ ಅವರ ಸಾವಿನ ನಿಗೂಢತೆ ಬಯಲಾಗಬೇಕಿದೆ. ಸಿಐಡಿ ಬದಲಿಗೆ ಸಿಬಿಐನಂಥ ಉನ್ನತ ಮಟ್ಟದ ಸಂಸ್ಥೆಯಿಂದ ತನಿಖೆಯಾಗಬೇಕಿದೆ ಎಂದು ಗಣೇಶ್ ಹೇಳಿದರು.












Click it and Unblock the Notifications