ಪ್ರತಾಪ್ ಸಿಂಹ ಹತ್ಯೆಗೆ ಸಂಚು: ಅಪರಾಧಿಗಳಿಗೆ 5 ವರ್ಷ ಶಿಕ್ಷೆ
ಬೆಂಗಳೂರು, ಸೆ. 16: ಪತ್ರಕರ್ತರು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಹಿಂದೂ ಸಂಘಟನೆಯ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಶುಕ್ರವಾರ ತನ್ನ ತೀರ್ಪು ಪ್ರಕಟಿಸಿದೆ. 13 ಜನ ಅಪರಾಧಿಗಳಿಗೆ 5 ವರ್ಷಗಳ ಕಾಲ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.
ರಾಷ್ಟ್ರೀಯ ತನಿಖಾ ದಳ 14 ಆರೋಪಿಗಳ ವಿರುದ್ಧ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. 13 ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿ ಅಪರಾಧಿಗಳು ಎಂದು ಗುರುವಾರ(ಸೆಪ್ಟೆಂಬರ್ 15)ದಂದು ಘೋಷಿಸಲಾಗಿತ್ತು. ಶುಕ್ರವಾರದಂದು ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿದೆ. ಎಲ್ಲಾ ಆರೋಪಿಗಳಿಗೆ 5 ವರ್ಷ ಶಿಕ್ಷೆ ಹಾಗೂ 7 ಸಾವಿರ ರು ದಂಡ ವಿಧಿಸಲಾಗಿದೆ. [ಪತ್ರಕರ್ತರು, ಹಿಂದೂ ಸಂಘಟನೆಯ ಮುಖಂಡರ ಹತ್ಯೆಗೆ ಸಂಚು ಸಾಬೀತು]

ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್, ಪ್ರತಾಪ್ ಸಿಂಹ, ಹಿಂದೂ ಪರ ಸಂಘಟನೆಯ ಮುತಾಲಿಕ್ ಸೇರಿದಂತೆ ಹಲವಾರು ಗಣ್ಯರ ಹೆಸರು ಲಷ್ಕರ್ ಇ ತೋಯ್ಬಾ ಉಗ್ರರ ಹಿಟ್ ಲಿಸ್ಟ್ ನಲ್ಲಿತ್ತು. ['ಪ್ರತಾಪ್ ಮದುವೆ' ಪೌರೋಹಿತ್ಯ ವಹಿಸಿದ್ದ ಉಗ್ರರ ಪ್ರವರ]
ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಹಿಂದೂ ಪರ ಸಂಘಟನೆಗಳ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ 14 ಆರೋಪಿಗಳನ್ನು ಬಂಧಿಸಲಾಗಿತ್ತು. ಇವರಲ್ಲಿ 13 ಜನರ ವಿರುದ್ಧದ ಆರೋಪ ಸಾಬೀತಾಗಿದೆ. ಪ್ರಕರಣದಲ್ಲಿನ ಒಬ್ಬ ಆರೋಪಿ ಝಾಕೀರ್ ತಲೆ ತಪ್ಪಿಸಿಕೊಂಡಿದ್ದಾನೆ.
ಒಂದು ವರ್ಷ ಮಾತ್ರ ಬಾಕಿ: ವಿಚಾರಣೆ ವೇಳೆಯಲ್ಲಿ ಎಲ್ಲಾ 13 ಜನ ಆರೋಪಿಗಳು ಈಗಾಗಲೇ 4 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾರೆ. [ಭಟ್, ಸಿಂಹ, ಸಂಕೇಶ್ವರ್ ಹತ್ಯೆಗೆ ಉಗ್ರರ ಸಂಚು]
* ಶೋಯಿಬ್ ಅಹ್ಮದ್ ಮಿರ್ಜಾ(27 ವರ್ಷ), ಕಂಪ್ಯೂಟರ್ ಪದವೀಧರ
* ಅಬ್ದುಲ್ ಹಕೀಮ್ ಜಮಾದಾರ್ (30)
* ರಿಯಾಜ್ ಅಹ್ಮದ್ ಬೈಹಟ್ಟಿ(31) ಎಂಬಿಎ ಪದವಿಧರ
* ಮೊಹಮ್ಮದ್ ಅಕ್ರಮ್ (27)
* ಉಬೇದುಲ್ಲಾ ಬಹದ್ದೂರ್(28)
* ವಹೀದ್ ಹುಸೇನ್ (31) ಎಂಬಿಎ
* ಡಾ. ಝಾಫರ್ ಇಕ್ಬಾಲ್ ಶೋಲಾಪುರ(31)
* ಮೊಹಮ್ಮದ್ ಸಾದಿಕ್ ಲಷ್ಕರ್ (33)
* ಮೆಹಬೂಬ್ ಬಾಗಲಕೋಟೆ(32)
* ಒಬೈದ್ ಉರ್ ರೆಹಮಾನ್ (26) ಪದವಿ ಪೂರ್ವ್ ವಿದ್ಯಾರ್ಥಿ.
* ಡಾ. ನಯೀಂ ಸಿದ್ದಿಕಿ (32)
* ಡಾ. ಇಮ್ರಾನ್ ಅಹ್ಮದ್ (30)
* ಸೈಯದ್ ತನ್ಜೀಮ್ ಅಹ್ಮದ್ (27)
ರಿಯಾದ್ ನಲ್ಲಿ ಸಂಚು : ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಉದ್ಯಮಿಗಳು, ಹಿಂದೂ ಸಂಘಟನೆ ಮುಖ್ಯಸ್ಥರ ಮೇಲೆ ಹಲ್ಲೆ, ಹತ್ಯೆಗೆ ರಿಯಾದ್ ನಲ್ಲಿ ಸಂಚು ರೂಪಿಸಲಾಗಿತ್ತು. ಬೆಂಗಳೂರು, ಹುಬ್ಬಳ್ಳಿ, ನಾಂದೇಡ್ ಹಾಗೂ ಹೈದರಾಬಾದ್ ಟಾರ್ಗೆಟ್ ಸ್ಥಳಗಳಾಗಿತ್ತು.












Click it and Unblock the Notifications