ಎಲ್ಎಲ್ಸಿ ಕಾಲುವೆ ದುರಸ್ತಿ ಕಾರ್ಯ ಪೂರ್ಣ: ನಿಟ್ಟುಸಿರು ಬಿಟ್ಟ ರೈತರು
ಬಳ್ಳಾರಿ, ನವೆಂಬರ್ 03: ಕಳೆದ 20 ದಿನಗಳಿಂದ ಸಮಸ್ಯೆಗೆ ಸಿಲುಕಿದ್ದ ಬಿ.ಡಿ.ಹಳ್ಳಿ ಹಾಗೂ ಆಂಧ್ರ ಪ್ರದೇಶದ ಅಂದಾಜು 20ಕ್ಕೂ ಹೆಚ್ಚು ಗ್ರಾಮಗಳ ರೈತರು ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಸುಮಾರು 3 ಲಕ್ಷ ಎಕರೆ ಜಮೀನಿನ ಬೆಳೆ ನಾಶವಾಗುತ್ತದೆ ಎನ್ನುವ ಭಯದಲ್ಲಿದ್ದ ರೈತರು ಈಗ ನಿರಾಳರಾಗಿದ್ದಾರೆ.
ಕಳೆದ ಒಂದು ವಾರದಿಂದ ಆರಂಭಗೊಂಡಿದ್ದ ಬೈರದೇವನಹಳ್ಳಿ ಎಲ್ಎಲ್ಸಿ ಕಾಲುವೆಯ ದುರಸ್ತಿ ಕಾಮಗಾರಿ ತಾತ್ಕಾಲಿಕವಾಗಿ ಪೂರ್ಣಗೊಂಡಿದೆ. ಬುಧವಾರ ರಾತ್ರಿ 9ಗಂಟೆ ಸುಮಾರಿಗೆ ತಾತ್ಕಾಲಿಕ ಪಿಲ್ಲರ್ ನಿರ್ಮಾಣ ಪೂರ್ಣಗೊಂಡಿತು. ಈ ವೇಳೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಸಚಿವ ಬಿ.ಶ್ರೀರಾಮುಲು, ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಸ್ಥಳದಲ್ಲಿ ಹಾಜರಿದ್ದರು.
ಬಳ್ಳಾರಿ; ಸೇತುವೆಯ ಫಿಲ್ಲರ್ ದುರಸ್ತಿ, ಜನಪ್ರತಿನಿಧಿಗಳ ಮೊಕ್ಕಾಂ
ತಾತ್ಕಾಲಿಕ ಪಿಲ್ಲರ್ ಕೆಲಸ ಪೂರ್ಣಗೊಳ್ಳುತ್ತಿದ್ದಂತೆ ಗ್ರಾಮಸ್ಥರು ಹಾಗೂ ರೈತರ ಮುಖದಲ್ಲಿ ಮಂದಹಾಸ ಕಂಡು ಬಂದಿತು. ಗ್ರಾಮಸ್ಥರು ಹಾಗೂ ರೈತರು ಜಿಲ್ಲಾಡಳಿತ, ಸಚಿವರು ಹಾಗೂ ಶಾಸಕರಿಗೆ ಧನ್ಯವಾದ ತಿಳಿಸಿದರು. ತಾತ್ಕಾಲಿಕ ಪಿಲ್ಲರ್ ನಿರ್ಮಾಣ ಆಗಿರುವ ಹಿನ್ನೆಲೆಯಲ್ಲಿ ಗುರುವಾರದಿಂದ ಕಾಲುವೆ ಮೂಲಕ ನೀರು ಹರಿಸಲಾಗುವುದೆಂದು ತಿಳಿದು ಬಂದಿದೆ.
ಕಾಮಗಾರಿ ಸ್ಥಳದಲ್ಲೇ ವಾಸ್ತವ್ಯ ಹೂಡಿದ ಶ್ರೀರಾಮುಲು
ರೈತರ ಜಮೀನುಗಳಿಗೆ ನೀರು ಹರಿಸಬೇಕಾದರೆ ಕಾಲುವೆಯ ದುರಸ್ತಿ ಕಾಮಗಾರಿ ಸಮರೋಪಾದಿಯಲ್ಲಿ ನಡೆಯಬೇಕು ಎಂದು ಸಚಿವ ಶ್ರೀರಾಮುಲು ಕಾಮಗಾರಿ ಸ್ಥಳದಲ್ಲೇ ವಾಸ್ತವ್ಯ ಹೂಡಿದ್ದರು. ಸಚಿವ ಶ್ರೀ ರಾಮುಲು ಮಾತ್ರವಲ್ಲದೇ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ ನಾಗೇಂದ್ರ ಹಾಗೂ ಆಂಧ್ರಪ್ರದೇಶ ಸಚಿವರಾದ ಗುಮ್ಮನೂರು ಜಯರಾಂ ಸೇರಿದಂತೆ ಹಲವು ನಾಯಕರು ಮೊಕ್ಕಾಂ ಹೂಡಿದ್ದರು. ಸದ್ಯ ಎಲ್ಲಾ ರಾಜಕೀಯ ನಾಯಕರ ಒತ್ತಡದಿಂದ ಎಲ್ಸಿಸಿ ಕಾಲುವೆಯ ದುರಸ್ತಿ ಕಾಮಗಾರಿ ಬಹುಬೇಗ ಪೂರ್ಣಗೊಂಡಿದೆ.
ವೇದಾವತಿ ನದಿ ದಡದಲ್ಲಿ ಮಲಗಿದ ಶ್ರೀರಾಮುಲು: ಸೇತುವೆ ಕಾಮಗಾರಿ ಚುರುಕು
ರೈತರಿಗೆ ನೀಡಿದ ಭರವಸೆ ಉಳಿಸಿಕೊಂಡ ಶ್ರೀರಾಮುಲು
ಇನ್ನು (ನವೆಂಬರ್ 1) ರಿಂದ ವೇದಾವತಿ ನದಿ ದಡದಲ್ಲಿಯೇ ಇರುವ ಸಚಿವ ಶ್ರೀರಾಮುಲು, ಕಾಲುವೆ ನೀರು ಇಲ್ಲದೇ, ಒಣಗಿ ಹೋಗುತ್ತಿರುವ ಗದ್ದೆಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವತೆಯನ್ನು ತಿಳಿದುಕೊಂಡಿದ್ದರು. ಬಳಿಕ ರೈತರನ್ನು ಭೇಟಿಯಾಗಿ ಅವರ ಕಷ್ಟಗಳನ್ನು ಸಹ ಆಲಿಸಿದ್ದರು. ಹೀಗಾಗಿ ಅವರು ಕಾಮಾಗಾರಿ ಸಂಪೂರ್ಣಗೊಳ್ಳುವರೆಗೂ ಅಲ್ಲೇ ಇದ್ದು, ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದರು. ರೈತರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಆದಷ್ಟು ಬೇಗ ನೀರು ಹರಿದು ಬರಲಿದ್ದು, ಯಾವುದೇ ಕಾರಣಕ್ಕೂ ನನ್ನ ರೈತ ಬಂಧುಗಳು ಆತಂಕ ಪಡಬಾರದು ಎಂದು ಭರವಸೆ ನೀಡಿದ್ದ ಸಚಿವ ಶ್ರೀರಾಮುಲು ಸದ್ಯ ತಮ್ಮ ಭರವಸೆಯನ್ನು ಉಳಿಸಿಕೊಂಡಿದ್ದಾರೆ.
ರೈತರ ಮೊಗದಲ್ಲಿ ಮಂದಹಾಸ ಖುಷಿ ತಂದಿದೆ ಎಂದ ಸಚಿವರು
ಇನ್ನು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಶ್ರೀರಾಮುಲು, "ಕೊನೆಗೂ ಬಳ್ಳಾರಿ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಬೈರದೇವನಹಳ್ಳಿ ಎಲ್ಎಲ್ಸಿ ಕಾಲುವೆಯ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಭವಿಷ್ಯದಲ್ಲಿ ಯಾವುದೇ ಅಡ್ಡಿ, ಆತಂಕಗಳು ಎದುರಾಗದಂತೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಎರಡು ದಿನಗಳಿಂದ ಖುದ್ದು ನಾನೇ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರಿಂದ ಕಾಲುವೆಯ ದುರಸ್ತಿ ಕಾರ್ಯ ನಿಗಧಿತ ಅವಧಿಗಿಂತ ಮೊದಲೇ ಪೂರ್ಣಗೊಂಡಿದ್ದು, ಇದರಿಂದಾಗಿ ಈ ಭಾಗದ ಸಾವಿರಾರು ರೈತರ ಮೊಗದಲ್ಲಿ ಮಂದಹಾಸ ಮೂಡಿರುವುದು ವೈಯಕ್ತಿಕವಾಗಿ ನನಗೂ ತುಂಬಾ ಖುಷಿ ತಂದಿದೆ" ಎಂದಿದ್ದಾರೆ.
ಅಧಿಕಾರಿಗಳಿಗೆ ಕಾರ್ಮಿಕರಿಗೆ ಧನ್ಯವಾದ ತಿಳಿಸಿದ ಶ್ರೀರಾಮುಲು
ಇನ್ನು "ಕಳೆದ 20 ದಿನಗಳಿಂದ ನೀರು ಹರಿಯದ ಪರಿಣಾಮ ಈ ಭಾಗದ ರೈತರು ಬೆಳೆದಿದ್ದ ಬೆಳೆಗಳು ಒಣಗಿ ಹೋಗುವ ಆತಂಕ ಎದುರಾಗಿತ್ತು. ಅಧಿಕಾರಿಗಳ ಇಚ್ಛಾಶಕ್ತಿ, ಕಾರ್ಮಿಕರ ಸತತ ಪರಿಶ್ರಮದಿಂದ ಕಾಲುವೆಯ ದುರಸ್ತಿ ಕಾರ್ಯವನ್ನು ಮುಗಿಸಿಕೊಟ್ಡಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸುವೆ. ನೀರು ಹರಿಸಿ ನಿಮ್ಮ ಬೆಳೆಗಳನ್ನು ರಕ್ಷಣೆ ಮಾಡುವುದಾಗಿ ನಾನು ರೈತರಿಗೆ ವಾಗ್ದಾನ ಮಾಡಿದ್ದೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದ್ದು ಮುಂದೆಯೂ ಕೂಡ ಈ ಭಾಗದ ರೈತರ ಹಿತಕಾಪಾಡಲು ನಾನು ಸದಾ ಸಿದ್ಧನಿದ್ದೇನೆ. ಅಧಿಕಾರ ಇರಲಿ, ಇಲ್ಲದಿರಲಿ, ನಿಮ್ಮ ರಕ್ಷಣೆಗೆ ನಾನು ಬದ್ಧನಾಗಿರುವೆ," ಎಂದು ಬರೆದುಕೊಂಡಿದ್ದಾರೆ.