ಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸಿ :ಸಿದ್ದರಾಮಯ್ಯ
ಬಳ್ಳಾರಿ, ನವೆಂಬರ್ 28: ನಾನು ಈಗಾಗಲೇ ಜೈಲಿಗೆ ಹೋಗಿ ಬಂದಿದ್ದೇನೆ, ನಾನು ನನ್ನ ತಪ್ಪನ್ನು ತಿದ್ದಿಕೊಂಡಿದ್ದೇನೆ, ಮುಂದೆ ಮತ್ತೆ ಬಿಜೆಪಿಗೆ ಹೋಗಿ ತಪ್ಪು ಮಾಡಲ್ಲ ಅಂದು ಆನಂದ್ ಸಿಂಗ್ ಕಾಂಗ್ರೆಸ್ ಸೇರಿದ್ದರು, ಈಗ ಯಾರಿಗೂ ಹೇಳದೇ ಕೇಳದೇ ಬಿಜೆಪಿ ಸೇರಿದ್ದಾರೆ ಅವರಿಗೆ ಉಪ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಹೊಸಪೇಟೆಯ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾಂಗ್ರೆಸ್ ಹಾಗೂ ಕ್ಷೇತ್ರದ ಜನರಿಗೆ ಮೋಸ ಮಾಡಿ ಹೋಗಿದ್ದಾರೆ, ಸ್ವಾಭಿಮಾನಿಗಳಾದ ಹೊಸಪೇಟೆ ಜನ ಅನರ್ಹ ಶಾಸಕ ಆನಂದ್ ಸಿಂಗ್ ಅವರನ್ನು ಉಪ ಚುನಾವಣೆಯಲ್ಲಿ ಸೋಲಿಸಬೇಕು ಎಂದರು.
ಸುಪ್ರೀಂ ಕೋರ್ಟ್ ಅವರನ್ನು ಅನರ್ಹಗೊಳಿಸಿದೆ, ಅವರು ನಾಲಾಯಕರು, ಅಯೋಗ್ಯರು ಎಮಬುದು ಸಾಬೀತಾಗಿದೆ ಹಾಗಾಗಿ ನೀವು ಅವರನ್ನು ಚುನಾವಣೆಯಲ್ಲಿ ತಿರಸ್ಕರಿಸಿ ಸುಪ್ರೀಂ ಕೋರ್ಟ್ ತೀರ್ಪನ್ನು ಎತ್ತಿ ಹಿಡಿಯಬೇಕು ಎಂದು ಮತದಾರರಿಗೆ ಕರೆ ನೀಡಿದರು.

ತನ್ನ ಸ್ವಾರ್ಥ ಹಾಗೂ ಅವರ ಅಕ್ರಮ ಆಸ್ತಿ ರಕ್ಷಣೆಗಾಗಿ ಆನಂದ್ ಸಿಂಗ್ ರಾಜಕೀಯದಲ್ಲಿದ್ದಾರೆ, ಜನಸೇವೆ ಮಾಡುವುದಕ್ಕಾಗಿ ಅಲ್ಲ. ಅವರು ಜಮೀನ್ದಾರಿ ಮನಸ್ಥಿತಿಯ ವ್ಯಕ್ತಿ, ಅಂತವರು ಗೆದ್ದರೆ ಯಾರಿಗೂ ಪ್ರಯೋಜನವಿಲ್ಲ, ಎಲ್ಲಾ ಕ್ಷೇತ್ರಗಳಲ್ಲಿಯೂ ಇಂತಹವರೇ ಇದ್ದಾರೆ, ಎಲ್ಲರನ್ನೂ ಸೋಲಿಸಿ ದೇಶಕ್ಕೆ ಉತ್ತಮ ಸಂದೇಶ ಕೊಡಬೇಕು ಎಂದರು.
ನನ್ನ ಉಸಿರು ಇರುವ ತನಕ ಕಾಂಗ್ರೆಸ್ ಬಿಟ್ಟು ಅಂತ ಆನಂದ್ ಸಿಂಗ್ ಹೇಳಿದ್ದರು. ಆದರೂ ಪಕ್ಷಕ್ಕೆ ಚೂರಿ ಹಾಕಿ ಹೋಗಿದ್ದಾರೆ. ಇವರೆಲ್ಲರನ್ನೂ ಬಿಜೆಪಿ ಖರೀದಿಸಿದೆ. ಈ ಬಾರಿ ಕಾಂಗ್ರೆಸ್ ನಲ್ಲಿ ಕಪ್ಪು ಚುಕ್ಕೆಯಿಲ್ಲದ, ಸರಳ, ಸಜ್ಜನ ವ್ಯಕ್ತಿಗಳು ಚುನಾವಣೆಗೆ ನಿಂತಿದ್ದಾರೆ ಅವರನ್ನು ಗೆಲ್ಲಿಸಬೇಕೆಂದರು.
ಡಿಸೆಂಬರ್ 05 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications