ಬಳ್ಳಾರಿ ಗ್ರಾಮೀಣ ಕ್ಷೇತ್ರ : ಶ್ರೀರಾಮುಲು, ನಾಗೇಂದ್ರ ಮುಖಾಮುಖಿ?
Recommended Video

ಬಳ್ಳಾರಿ, ಫೆಬ್ರವರಿ 14 : ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ. ನಾಗೇಂದ್ರ ಅವರು ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಹಾಗಾದರೆ ಕ್ಷೇತ್ರದಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಕುತೂಹಲದ ಪ್ರಶ್ನೆಯಾಗಿದೆ.
ರಾಜ್ಯ ರಾಜಕೀಯ ವಲಯದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಸಿದೆ. ಬಿ.ನಾಗೇಂದ್ರ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಲ್ಲಿ ಅವರ ಎದುರಾಳಿಯಾಗಿ ಬಿ. ಶ್ರೀರಾಮುಲು ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರು ಒಪ್ಪಿಗೆ ನೀಡದಿದ್ದರೆ ಅವರ ಸಹೋದರಮಾವ, ರಾಯಚೂರು ಮಾಜಿ ಸಂಸದ ಸಣ್ಣ ಫಕ್ಕೀರಪ್ಪ ಅವರು ಸ್ಪರ್ಧಿಸುವುದು ಖಚಿತವಾಗಿದೆ.

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಜೊತೆಯಲ್ಲಿ ಶ್ರೀ ರಾಮುಲು ಮತ್ತು ಸಣ್ಣ ಫಕ್ಕೀರಪ್ಪ ಅವರು ಇತ್ತೀಚೆಗೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. 'ಶ್ರೀರಾಮುಲು ತಪ್ಪಿದಲ್ಲಿ ಫಕ್ಕೀರಪ್ಪ ಸ್ಪರ್ಧಿಸಲಿ' ಎಂದು ನಿರ್ಧಾರವಾಗಿದೆ ಎಂಬುದು ಬಿಜೆಪಿ ಮೂಲಗಳ ಮಾಹಿತಿ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಮಾಜಿ ಸಂಸದ ಸಣ್ಣ ಫಕ್ಕೀರಪ್ಪ, ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಮತ್ತು ಬಿ. ನಾಗೇಂದ್ರ ರೆಡ್ಡಿ ಸಹೋದರರಿಂದ ದೂರಕ್ಕೆ ಸರಿದ ನಂತರ ಬಿ. ಶ್ರೀರಾಮುಲು ಅವರ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪರಿವರ್ತನಾ ಯಾತ್ರೆ, ಪಕ್ಷದ ವಿವಿಧ ಸಭೆ, ಸಮಾರಂಭಗಳು, ಸ್ಲಂ ವಾಸ ಮತ್ತು ಬಿ. ಶ್ರೀರಾಮುಲು ಮನೆಯಲ್ಲಿ ಶಿವರಾತ್ರಿಯ ದಿನದಂದು ನಡೆದ ಲಕ್ಷ ದೀಪೋತ್ಸವದಲ್ಲಿ ಕಾಣಿಸಿಕೊಂಡು, ಸಕ್ರಿಯವಾಗಿ ಅನೇಕರೊಂದಿಗೆ ಬೆರೆಯುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೆಜ್ಜೆಯನ್ನು ಗಮನಿಸಿ, ಬಿಜೆಪಿ ಈ ಇಬ್ಬರಲ್ಲಿ ಓರ್ವರನ್ನು ಬಳ್ಳಾರಿ ಗ್ರಾಮೀಣ ಕಣಕ್ಕೆ ಇಳಿಸಲಿದೆ.












Click it and Unblock the Notifications