ಮಾಜಿ ಸಂಸದ ಉಗ್ರಪ್ಪ ನೋಟಿಸ್ ಹಿಂಪಡೆಯಿರಿ; ಮಾಧ್ಯಮ ವಕ್ತಾರ ಪತ್ರೇಶ್
ಹಗರಿಬೊಮ್ಮನಹಳ್ಳಿ, ಅಕ್ಟೋಬರ್ 17: ''ಇತ್ತೀಚೆಗೆ ಕೆಪಿಸಿಸಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ಮೆಲುಧ್ವನಿಯಲ್ಲಿ ಮಾತನಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಉಗ್ರಪ್ಪ ಅವರಿಗೆ ಶೋಕಾಸ್ ನೋಟಿಸ್ ಆದೇಶವನ್ನು ಹಿಂಪಡೆಯಬೇಕು,'' ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಒತ್ತಾಯಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ''ಮಾಜಿ ಸಂಸದ ಉಗ್ರಪ್ಪ ಡಿಕೆಶಿಯವರ ಬಗ್ಗೆ ಅವಹೇಳನಕಾರಿಯಾಗಿ ಮತ್ತು ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಎಲ್ಲೂ ಮಾತನಾಡಿಲ್ಲ. ಆದರೆ ದೃಶ್ಯಮಾಧ್ಯಮಗಳು ಇದನ್ನು ತಪ್ಪುತಪ್ಪಾಗಿ ಬಿಂಬಿಸಿ ಉಗ್ರಪ್ಪನವರ ಮತ್ತು ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿವೆ,'' ಎಂದು ಪತ್ರೇಶ್ ಆರೋಪಿಸಿದ್ದಾರೆ.
ಉಗ್ರಪ್ಪ ರಕ್ಷಣೆಗೆ ಮುಂದಾದ ಕಾಂಗ್ರೆಸ್?: ರೆಹಮಾನ್ ಖಾನ್ ಸ್ಪಷ್ಟನೆ!
ಮಾಜಿ ಸಂಸದ ಉಗ್ರಪ್ಪನವರು ಕಾಂಗ್ರೆಸ್ ಸೇರಿದಾಗಿನಿಂದ ಸಂಕಷ್ಟದ ಸಮಯದಲ್ಲಿ ಪಕ್ಷವನ್ನು ಸಮರ್ಥಿಸಿಕೊಳ್ಳುವುದರ ಜೊತೆಗೆ ಜೀವನದುದ್ದಕ್ಕೂ ಸಂಸ್ಕಾರಯುತ ಮೌಲ್ಯಗಳ ಜೊತೆ ಶಿಸ್ತನ್ನು ಅಳವಡಿಸಿಕೊಂಡು ಬದುಕುತ್ತಿದ್ದು ಅವರಿಗೆ ನೋಟಿಸ್ ಕೊಟ್ಟಿರುವುದು ಅವಸರದ ನಿರ್ಧಾರವಾಗಿದೆ ಎಂದಿದ್ದಾರೆ.
ಕರ್ನಾಟಕದ ಅನುಭವಿ ಮತ್ತು ಮೇಧಾವಿ ರಾಜಕಾರಿಣಿ ಹಾಗೂ ಬಹುಸಂಖ್ಯಾತ ವಾಲ್ಮೀಕಿ ಸಮುದಾಯದ ಹಿರಿಯ ನಾಯಕರಾದ ಉಗ್ರಪ್ಪ ಅವರಿಗೆ ಶೋಕಾಸ್ ನೋಟಿಸ್ ನೀಡಿರುವುದು ಮುಜುಗರದ ಸಂಗತಿಯಾಗಿದ್ದು ತಕ್ಷಣವೇ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಮಧ್ಯಪ್ರವೇಶಿಸಿ ಅಮಾನತು ಮತ್ತು ಶಿಸ್ತು ಸಮಿತಿ ನೀಡಿದ ನೋಟಿಸ್ ಹಿಂಪಡೆದು ಅವರ ಸಂಸದೀಯ ಜಾಣ್ಮೆ ಮತ್ತು ಅನುಭವವನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳಬೇಕೆಂದು ಪತ್ರೇಶ್ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಮಾಧ್ಯಮಗೋಷ್ಠಿ ಕರೆದಿದ್ದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹಾಗೂ ಕೆಪಿಸಿಸಿ ಮಾಧ್ಯಮ ಸಂಯೋಜಕ ಎಂ.ಎ. ಸಲೀಂ ಅವರೊಂದಿಗೆ ಗುಟ್ಟಾಗಿ ಮಾತನಾಡಿಕೊಂಡಿದ್ದು, ನಂತರ ಮಾಧ್ಯಮಗಳಲ್ಲಿ ಈ ಸಂಭಾಷಣೆ ವೈರಲ್ ಆಗಿದ್ದು ನೆನಪಿರಬಹುದು. ಇದಾದ ಬಳಿಕ, ಕಾಂಗ್ರೆಸ್ ಶಿಸ್ತು ಪರಿಪಾಲನಾ ಸಮಿತಿ ಮುಖ್ಯಸ್ಥರಾದ ರೆಹಮಾನ್ ಖಾನ್ ಅವರು, ಸಲೀಂ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿದರೆ, ಉಗ್ರಪ್ಪ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಡಿಕೆಶಿ ಕುರಿತು ಅವಹೇಳನಕಾರಿ ಮಾತು; ಉಗ್ರಪ್ಪಗೆ ಕಾಂಗ್ರೆಸ್ನಿಂದ ಶೋಕಾಸ್ ನೋಟೀಸ್!
ಡಿಕೆಶಿ ಕಲೆಕ್ಷನ್ ಗಿರಾಕಿ, ಅವನ ಹುಡುಗರ ಹತ್ತಿರವೇ ಐವತ್ತರಿಂದ ನೂರು ಕೋಟಿ ರೂ. ಇದೆ ಅಂದ್ರೆ ಡಿಕೆಶಿ ಹತ್ರ ಎಷ್ಟು ದುಡ್ಡಿರಬಹುದು ಎಂದು ಇಬ್ಬರೂ ನಾಯಕರು ಮಾತನಾಡಿಕೊಂಡಿದ್ದರು
ಕಾಂಗ್ರೆಸ್ ನಾಯಕರಾದ ವಿಎಸ್ ಉಗ್ರಪ್ಪ ಹಾಗೂ ಎಂ.ಎ. ಸಲೀಂ ಅವರು ತಮ್ಮ ಮೇಲೆ ಮಾಡಿದ್ದ ಆರೋಪಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ, "ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಸಂಭಾಷಣೆಗೂ (ವಿ.ಎಸ್. ಉಗ್ರಪ್ಪ ಹಾಗೂ ಸಲೀಂ ನಡುವೆ), ನನಗೂ ಹಾಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ನಾನು ಯಾವುದೇ ಪರ್ಸೆಂಟೇಜ್ ವಿಚಾರದಲ್ಲೂ ಭಾಗಿಯಾಗಿಲ್ಲ. ಅದರ ಅಗತ್ಯವೂ ನನಗಿಲ್ಲ. ಗೃಹ ಸಚಿವರು ಯಾರಾದರೂ ದೂರು ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅವರು ಸುಮೋಟೋ ಕೇಸ್ ದಾಖಲಿಸಿದರೂ ಒಳ್ಳೆಯದೇ. ನಾನು ಹಳ್ಳಿಯಿಂದ ಬಂದವನಾಗಿದ್ದು, ನನಗೆ ನನ್ನದೇ ಆದ ನಡೆ, ನುಡಿ, ದೇಹಭಾಷೆ, ವ್ಯಕ್ತಿತ್ವ ಹಾಗೂ ಯಶಸ್ಸು ಇದೆ. ಕೆಲವೊಂದು ಗುಣಗಳು ಬದಲಾಗುವುದಿಲ್ಲ." ಎಂದು ತಿರುಗೇಟು ಕೊಟ್ಟಿದ್ದರು.
ಪ್ರಕರಣದ ಕುರಿತು ಮಾತನಾಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, "ಈ ಎಲ್ಲ ಬೆಳವಣಿಗೆಯ ಹಿಂದೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದ್ದಾರೆ" ಎಂಬ ಗಂಭೀರ ಆರೋಪವನ್ನು ಮಾಡಿದ್ದರು. ಜೊತೆಗೆ "ಇಡೀ ಪ್ರಕರಣದಲ್ಲಿ ವಿ.ಎಸ್. ಉಗ್ರಪ್ಪ ಅವರನ್ನು ರಕ್ಷಣೆ ಮಾಡಲಾಗಿದ್ದು, ಅಲ್ಪಸಂಖ್ಯಾತ ನಾಯಕ ಸಲೀಂ ಅವರ ಬಲಿ ಪಡೆಯಲಾಗಿದೆ" ಎಂದಿದ್ದರು.
''ಈ ಘಟನೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಬೇರೆ ಪಕ್ಷಗಳ ನಾಯಕರು ಮಾತನಾಡುವ ಅಗತ್ಯವಿಲ್ಲ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಸಮಿತಿಯಿದೆ, ಅದು ಗಮನ ಹರಿಸಲಿದೆ" ಎಂದು "ಒನ್ಇಂಡಿಯಾ ಕನ್ನಡ'ಕ್ಕೆ ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ಪ್ರತಿಕ್ರಿಯೆ ಕೊಟ್ಟಿದ್ದರು.