Mylara Karnika 2025: 'ತುಂಬಿದ ಕೊಡ ತುಳುಕಿತಲೇ ಪರಾಕ್'; ಮೈಲಾರದಲ್ಲಿ ಗೊರವಯ್ಯ ನುಡಿದ ಕಾರ್ಣಿಕ
Mylara Lingeshwara Karnika 2025: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣೀಕೋತ್ಸವ ನಡೆದಿದೆ. ಹಾಗಾದರೆ ಇಡೀ ರಾಜ್ಯವೇ ಕಾಯುತ್ತಿದ್ದ ಈ ಬಾರಿಯ ಅಂದರೆ ಇಂದು (ಫೆಬ್ರವರಿ 14, 2025) ಗೊರವಯ್ಯ ಅವರು ಏನು ಭವಿಷ್ಯವಾಣಿ ನುಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಡಂಗನಮರಡಿಯಲ್ಲಿ 18 ಅಡಿ ಬಿಲ್ಲನ್ನೇರಿ ಗೊರವಯ್ಯ ರಾಮಪ್ಪ ಈ ವರ್ಷದ ಅಂದರೆ 2025ರ ದೈವವಾಣಿಯನ್ನು ನುಡಿದಿದ್ದಾರೆ. "ತುಂಬಿದ ಕೊಡ ತುಳುಕಿತಲೇ ಪರಾಕ್" ಎಂದು ಭವಿಷ್ಯವಾಣಿ ನುಡಿದಿದ್ದಾರೆ. ಇನ್ನು ಈ ವೇಳೆ ಮೈಲಾರಲಿಂಗೇಶ್ವರನ ಕಾರ್ಣೀಕ ಕೇಳಿ ಲಕ್ಷಾಂತರ ಭಕ್ತರು ಪುನೀತರಾದರು.

ಕಳೆದ ಬಾರಿ ಅಂದರೆ 2024ರಲ್ಲಿ "ಮಳೆ ಬೆಳೆ ಎಲ್ಲಾ ಸಂಪಾದಿತಲೇ ಪರಾಕ್" ಎಂದು ಭವಿಷ್ಯವಾಣಿ ನುಡಿದಿದ್ದು, ಇದರಂತೆಯೇ ಉತ್ತಮ ಮಳೆಯಾಗಿದ್ದು, ಬೆಳೆಯು ಕೂಡ ಚೆನ್ನಾಗಿ ಬಂದಿವೆ. ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಈ ಮೂಲಕ ಕಳೆದ ಬಾರಿಯ ಭವಿಷ್ಯ ನಿಜ ಆಗಿದೆ. 2023ರಲ್ಲಿ ಕಾರ್ಣಿಕ "ಅಂಬಲಿ ಹಳಿಸಿತು, ಕಂಬಳಿ ಬೀಸಿತಲೇ ಪರಾಕ್" ಎಂಬ ಕಾರ್ಣಿಕ ಭವಿಷ್ಯವನ್ನು ನುಡಿದಿದ್ದರು.
ಕಾರ್ಣಿಕದ ಗೊರವಪ್ಪ ರಾಮಪ್ಪ ಅವರು 11 ದಿನಗಳ ಕಾಲ ಉಪವಾಸ ಮಾಡಿದ್ದು, ಇಂದು ಕಾರ್ಣಿಕ ನುಡಿಯುವ ದಿನ ವಿಶೇಷ ಪೂಜೆ ನೆರವೇರಿಸಿ ಕಾರ್ಣಿಕ ನುಡಿದಿದ್ದಾರೆ. ಮೈಲಾರ ಲಿಂಗೇಶ್ವರನ ಭವಿಷ್ಯ ವಾಣಿಯನ್ನು ಕೇಳಲು ಇಡೀ ರಾಜ್ಯದ ಜನರು ಕಾತರದಿಂದ ಕಾಯುತ್ತಿದ್ದರು. ಇದೀಗ 2025ರ ಭವಿಷ್ಯ ಹೊರಬಿದ್ದಿದೆ.
ಕಾರ್ಣಿಕ ನುಡಿಯುವ ಗೊರವಪ್ಪ ಡೆಂಕನ ಮರಡಿಯಲ್ಲಿ ರಥಸಪ್ತಮಿಯಿಂದ 11 ದಿನಗಳ ಕಾಲ ಭಂಡಾರ ನೀರು, ಹಾಲುಹಣ್ಣು ಸೇವಿಸಿ ಉಪವಾಸ ವ್ರತಾಚರಣೆಯಲ್ಲಿರುತ್ತಾರೆ. ಬಳಿಕ ಸಂಪ್ರದಾಯದಂತೆ ಬಿಲ್ಲನ್ನೇರಿ ಇಂದು ಭವಿಷ್ಯವಾಣಿ ಕಾರ್ಣಿಕವನ್ನು ನುಡಿದಿದ್ದಾರೆ. ಇದರರ್ಥ ಈ ಬಾರಿ ರಾಜ್ಯ ಹಾಗೂ ದೇಶದಲ್ಲಿ ಉತ್ತಮ ಮಳೆ, ಬೆಳೆಯಾಗಲಿದೆ ಎಂದು ವಿಶ್ಲೇಷಣೆ ಮಾಡಿದ್ದಾರೆ.
ಜಾತ್ರೆ ಕೊನೇ ದಿನ ಫೆಬ್ರವರಿ 15ರಂದು ದೇಗುಲದ ಆವರಣದಲ್ಲಿ ಕಂಚಿವೀರರು, ಗೊರವಪ್ಪರಿಂದ ಭಕ್ತರನ್ನು ರೋಮಾಂಚನಗೊಳಿಸುವ ಸರಪಳಿ, ಭಗಣಿ ಗೂಟ ಪವಾಡಗಳು ನಡೆದು ಪ್ರೇಕ್ಷಕರ ಮೈನವಿರೇಳಿಸುತ್ತವೆ. ಇನ್ನು ಈ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬರುತ್ತಾರೆ. ಎತ್ತಿನ ಬಂಡಿ, ಟ್ರ್ಯಾಕ್ಟರ್ ಸೇರಿ ಸೇರಿದಂತೆ ಹಲವಯ ವಾಹನಗಳ ಮೂಲಕ ಜಾತ್ರೆಗೆ ಆಗಮಿಸುತ್ತಾರೆ. ಅಲ್ಲದೆ, ಹೊಸಪೇಟೆ, ದಾವಣಗೆರೆ, ಹಾವೇರಿ, ಗದಗ ಸೇರಿದಂತೆ ನಾಲ್ಕು ಸಾರಿಗೆ ವಿಭಾಗಗಳಿಂದ 400ಕ್ಕೂ ಹೆಚ್ಚು ವಿಶೇಷ ಸಾರಿಗೆ ಬಸ್ಗಳ ಸೌಲಭ್ಯ ಕಲ್ಪಿಸಲಾಗಿದೆ.
ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ದ್ವಾಪರ ಯುಗದಲ್ಲಿ ಮಣಿಕಾಸುರ, ಮಲ್ಲಾಸುರರೆಂಬ ಅಸುರರು, ಋಷಿ ಮುನಿಗಳಿಗೆ ನಾನಾ ವಿಧದ ಹಿಂಸೆ, ಕಿರುಕುಳ ಕೊಡುತ್ತಿದ್ದರು. ಇದರಿಂದ ನೊಂದ ಋಷಿಮುನಿಗಳು ಶಿವನ ಬಳಿಗೆ ತೆರಳಿ ದೂರು ಸಲ್ಲಿಸುತ್ತಾರೆ. ಋಷಿಗಳ ಮನವಿಯನ್ನು ಪುರಸ್ಕರಿಸಿದ ಶಿವ, ರಾಕ್ಷಸರ ಸಂಹಾರಕ್ಕೆ ಮೈಲಾರ ಲಿಂಗೇಶ್ವರನಾಗಿ, ಪಾರ್ವತಿಯು ಗಂಗಿಮಾಳಮ್ಮನ ರೂಪ ತಾಳಿ ಮೈಲಾರದ ಡೆಂಕನಮರಡಿಯಲ್ಲಿ ಘೋರ ಯುದ್ಧ ನಡೆಸಿ ಸಂಹರಿಸಿದರೆಂಬ ಮಾತಿದೆ.












Click it and Unblock the Notifications