ಮೊಳಕಾಲ್ಮೂರಿನಿಂದ ಟಿಕೆಟ್ : ಮೌನಮುರಿದ ಶ್ರೀರಾಮುಲು
ಬಳ್ಳಾರಿ, ಏಪ್ರಿಲ್ 12 : ಮೊಳಕಾಲ್ಮೂರು ಕ್ಷೇತ್ರದಿಂದ ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರಿಗೆ ಟಿಕೆಟ್ ನೀಡಿರುವ ವಿಚಾರದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಮೊದಲ ಬಾರಿಗೆ ಶ್ರೀರಾಮುಲು ಅವರು ಈ ಕುರಿತು ಮೌನ ಮುರಿದಿದ್ದಾರೆ.
'ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಆದೇಶದ ಮೇರೆಗೆ ನಾನು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಈ ವಿಚಾರದಲ್ಲಿ ನಾನು ಯಾವುದೇ ವೈಯಕ್ತಿಕ ನಿರ್ಧಾರವನ್ನು ಕೈಗೊಂಡಿಲ್ಲ' ಎಂದು ಶ್ರೀರಾಮುಲು ಅವರು ಸ್ಪಷ್ಟಪಡಿಸಿದರು.
'ಪ್ರಜಾಪ್ರಭುತ್ವ ಉಳಿಸಿ' ಉಪವಾಸ ಸತ್ಯಾಗ್ರಹ ವೇದಿಕೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ನಾನು, ಮೊಳಕಾಲ್ಮೂರಲ್ಲಿ ಸ್ಪರ್ಧಿಸುತ್ತಿರುವುದರಲ್ಲಿ ಪಕ್ಷದ ನಾಯಕರ ಪ್ರತ್ಯೇಕ ಲೆಕ್ಕಾಚಾರವಿದೆ. ಕಳೆದ ಚುನಾವಣೆಯಲ್ಲಿ ನನ್ನೊಂದಿಗೆ ರಾಜಕೀಯ ಪ್ರಾರಂಭ ಮಾಡಿ ಬಿಎಸ್ಆರ್ ಪಕ್ಷ ಸೇರಿ, ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಎಸ್.ತಿಪ್ಪೇಸ್ವಾಮಿ, ನನ್ನ ಸಹೋದರ ಸಮಾನರು' ಎಂದು ಹೇಳಿದರು.

'ಎಸ್.ತಿಪ್ಪೇಸ್ವಾಮಿ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮಾತುಕತೆ ನಡೆಸುವೆ. ಪಕ್ಷದ ಆಂತರಿಕ ಲೆಕ್ಕಾಚಾರಗಳ ವಿಚಾರಗಳನ್ನು ವಿವರಿಸಿ, ತಿಳಿ ಹೇಳುವೆ. ಅವರು ನನ್ನನ್ನು ಬೆಂಬಲಿಸುವ ಸಂಪೂರ್ಣ ವಿಶ್ವಾಸವಿದೆ' ಎಂದರು.
'ಬಳ್ಳಾರಿ ಗ್ರಾಮೀಣ, ಮೊಳಕಾಲ್ಮೂರು ಅಥವಾ ಇನ್ನಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ಸೂಚನೆ ನೀಡಿದಲ್ಲಿ ಸ್ಪರ್ಧಿಸುತ್ತೇನೆ. ನಾನು ಬಿಜೆಪಿಯ ಕಟ್ಟಾಳು, ನಿಷ್ಠಾವಂತ ಕಾರ್ಯಕರ್ತ. ಪಕ್ಷದ ಆದೇಶವನ್ನು ತಪ್ಪದೇ ಪಾಲಿಸುವೆ. ಇದರಲ್ಲಿ ವೈಯಕ್ತಿಕ ಹಿತಾಸಕ್ತಿ ಇಲ್ಲ' ಎಂದು ಸ್ಪಷ್ಟಪಡಿಸಿದರು.












Click it and Unblock the Notifications