ಗಾಲಿ ರೆಡ್ಡಿಗೆ ಜಾಮೀನು, ಬಳ್ಳಾರಿಯಲ್ಲಿ ಸಂಭ್ರಮವೋ ಸಂಭ್ರಮ
ಬಳ್ಳಾರಿ, ಜ.20: ಸುಮಾರು ಮೂರುವರೆ ವರ್ಷಗಳಿಂದ ಕಾದಿದ್ದ ಕ್ಷಣ ಬಂದೊಡನೆ ಅಭಿಮಾನಿಗಳಿಗೆ ಮಾತೇ ಹೊರಡದಾಯಿತಂತೆ ಹಾಗಂತ ನಮ್ಮ ಪ್ರತಿನಿಧಿ ಬಳಿ ಜನಾರ್ದನ ರೆಡ್ಡಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ್ ಹೇಳಿಕೊಂಡಿದ್ದಾರೆ.
ಜಾಮೀನು ಸಿಗುವ ಬಗ್ಗೆ ನಮಗೆ ನಂಬಿಕೆ ಇತ್ತು. ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಕಚೇರಿ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು. ಗಾಲಿ ರೆಡ್ಡಿ ಅವರ ಏಳಿಗೆಗಾಗಿ ದುರ್ಗಮ್ಮ ದೇವಿ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. [ಗಾಲಿ ಜನಾರ್ದನ ರೆಡ್ಡಿಗೆ 2 BHK ಮನೆ ಬೇಕಿದೆ]
ಶ್ರೀಮತಿ ಅರುಣಾ ಜನಾರ್ದನ ರೆಡ್ಡಿ ಹಾಗೂ ಕುಟುಂಬಸ್ಥರು ಕೂಡ ಪೂಜೆಯಲ್ಲಿ ಪಾಲ್ಗೊಂಡಿದ್ದು ನಮ್ಮ ಸಂತೋಷ ಇನ್ನಷ್ಟು ಹೆಚ್ಚಿಸಿತು ಎಂದು ರಾಜಶೇಖರ್ ಹೇಳಿದ್ದಾರೆ. [ಗಾಲಿ ಜನಾರ್ದನ ರೆಡ್ಡಿಗೆ ಷರತ್ತುಬದ್ಧ ಜಾಮೀನು]
ಬೇಸರವಿದೆ: ರೆಡ್ಡಿಗಾರು ಅವರನ್ನು ಬಳ್ಳಾರಿಗೆ ಬರಮಾಡಿಕೊಳ್ಳಲು ಸಿದ್ಧರಾಗಿದ್ದೆವು ಆದರೆ, ಕೋರ್ಟ್ ಷರತ್ತಿನಿಂದ ನಮಗೆಲ್ಲ ಬೇಸರವಾಗಿದೆ. ಅವರನ್ನು ಕಾಣಲು ಬೆಂಗಳೂರಿಗೆ ತೆರಳುತ್ತೇವೆ ಎಂದರು.
ವಕೀಲರಾದ ಸಿ.ಎಚ್ ಹನುಮಂತರಾಯ ಪ್ರತಿಕ್ರಿಯೆ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಗಾಲಿ ರೆಡ್ಡಿ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಹಿರಿಯ ವಕೀಲರು, ಶನಿವಾರದೊಳಗೆ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಗಾಲಿ ರೆಡ್ಡಿ ಅವರು ಜೈಲಿನಿಂದ ಹೊರಕ್ಕೆ ಕರೆಸಿಕೊಳ್ಳಲಾಗುತ್ತದೆ. ಅವಶ್ಯ ಬಿದ್ದರೆ ಹೈದರಾಬಾದಿಗೆ ತೆರಳಿ ನಂತರ ಬಿಡುಗಡೆ ಮಾಡಬೇಕಾಗುತ್ತದೆ. ಮುಂದಿನ ಚಿತ್ರಗಳಲ್ಲಿ ಗಾಲಿ ರೆಡ್ಡಿ ಪ್ರತಿಕ್ರಿಯೆ, ಅಭಿಮಾನಗಳ ಸಂಭ್ರಮಾಚರಣೆ ನೋಡಿ...ಚಿತ್ರಕೃಪೆ: ರೋಹಿಣಿ, ಬಳ್ಳಾರಿ

ಗಾಲಿ ಜನಾರ್ದನ ರೆಡ್ಡಿ ಪ್ರತಿಕ್ರಿಯೆ
ವಕೀಲರಾದ ಸಿ.ಎಚ್ ಹನುಮಂತರಾಯ ಜೊತೆ ಮಾತನಾಡಿದ ರೆಡ್ಡಿ ಅವರು ಎಲ್ಲಾ ಪ್ರಕರಣದಲ್ಲೂ ಜಯ ಸಿಗುವ ವಿಶ್ವಾಸವಿದೆ. ಸುಪ್ರೀಂಕೋರ್ಟ್ ನೀಡಿರುವ ಜಾಮೀನಿನಿಂದ ನಾನು ಬಿಡುಗಡೆಯಾಗುತ್ತಿದ್ದೇನೆ. ಸದ್ಯ ಮೂರು ತಿಂಗಳ ಕಾಲ ಯಾವುದೇ ರಾಜಕೀಯ ಚಟುವಟಿಕೆ ನಡೆಸುವುದಿಲ್ಲ. ಕುಟುಂಬದೊಡನೆ ಕಾಲ ಕಳೆಯುತ್ತೇನೆ ಎಂದಿದ್ದಾರೆ ಎಂದು ಹೇಳಿದರು.

ದುರ್ಗಮ್ಮ ದೇಗುಲದಲ್ಲಿ ವಿಶೇಷ ಪೂಜೆ
ಗಾಲಿ ರೆಡ್ಡಿ ಅವರ ಏಳಿಗೆಗಾಗಿ ದುರ್ಗಮ್ಮ ದೇವಿ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು

ಬಳ್ಳಾರಿಯ ಪ್ರಮುಖ ಬೀದಿಗಳಲ್ಲಿ
ಬಳ್ಳಾರಿಯ ಪ್ರಮುಖ ಬೀದಿಗಳಲ್ಲಿ ಗಾಲಿ ಜನಾರ್ದನ ರೆಡ್ಡಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.

ಬಳ್ಳಾರಿ ಎಲ್ಲೆಡೆ ಸಂತಸಮಯ ವಾತಾವರಣ
ಮೂರೂವರೆ ವರ್ಷಗಳ ಜೈಲುವಾಸ ಕಂಡಿರುವ ಗಾಲಿ ಜನಾರ್ದನ ರೆಡ್ಡಿ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ನಡೆದರೂ ಬಳ್ಳಾರಿಗೆ ತೆರಳುವಂತಿಲ್ಲ. ಬಿಜೆಪಿ ಕಚೇರಿಯಿಂದ ರೆಡ್ಡಿ ಅವರ ಮುಂದಿನ ವಸತಿ ವ್ಯವಸ್ಥೆ ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ. ಬಳ್ಳಾರಿ ಘಟಕ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

ರೆಡ್ಡಿಗೆ ಜಾಮೀನು: ಶ್ರೀರಾಮುಲು ಸಂತಸ
ಜನಾರ್ದನ ರೆಡ್ಡಿಯವರಿಗೆ ಜಾಮೀನು ಸಿಕ್ಕಿರುವುದು ಸಂತಸದ ವಿಷಯ. ಕಾನೂನು ಹೋರಾಟದಲ್ಲಿ ಅವರಿಗೆ ಜಯ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಸಂಸದ ಶ್ರೀರಾಮುಲು ಹೇಳಿದ್ದಾರೆ. ನಾನು ಅವರನ್ನು ಜೈಲಿನಿಂದ ಹೊರಬಂದ ಮೇಲೆ ಅವರನ್ನು ಕಾಣಲು ಹೋಗುತ್ತೇನೆ. ಸತ್ಯಕ್ಕೆ ಗೆಲುವು ಸಿಕ್ಕಿದೆ ಎಂದಿದ್ದಾರೆ.

ಬಳ್ಳಾರಿಯ ಕನಕ ದುರ್ಗಮ್ಮ ದೇಗುಲ
ಬಳ್ಳಾರಿಯಲ್ಲಿ ವರಲಕ್ಷ್ಮಿ ಪೂಜೆಯ ಸಂಭ್ರಮವನ್ನು ಪರಿಚಯಿಸಿದ ಗಾಲಿ ರೆಡ್ಡಿ ಸೋದರರು, ಗುಂತಕಲ್ ಸಮೀಪದ ಕಸ್ವಾಪುರ ನೆಟ್ಟಿಗಂಟಿ ಆಂಜನೇಯ ಸ್ವಾಮಿ ಅಲ್ಲದೆ ಬಳ್ಳಾರಿಯ ಕನಕ ದುರ್ಗಮ್ಮ ದೇಗುಲಕ್ಕೆ ತುಂಬಾ ನಡೆದುಕೊಳ್ಳುತ್ತಿದ್ದರು. ಗಾಲಿ ರೆಡ್ಡಿ ಸೋದರರಲ್ಲದೆ ಬಿ. ಶ್ರೀರಾಮುಲು, ಶಾಂತಾ ಅವರು ಕೂಡಾ ಈ ದೇಗುಲಕ್ಕೆ ವಿಶೇಷ ಸಂದರ್ಭಗಳಲ್ಲಿ ತಪ್ಪದೇ ಭೇಟಿ ಕೊಡುತ್ತಿದ್ದರು.

ಮಹಾಂಕಾಳಿ ದೇವಿಗೆ ವಿಶೇಷ ಪೂಜೆ
ಶರನ್ನವರಾತ್ರಿಯ ಸಂದರ್ಭದಲ್ಲಿ ಈ ದೇಗುಲದಲ್ಲಿ 9 ದಿನಗಳ ಕಾಲ ಬನ್ನಿ ಮಹಾಂಕಾಳಿ ದೇವಿಗೆ ವಿಶೇಷ ಪೂಜೆ, ಪುನಸ್ಕಾರ ನಡೆಯುತ್ತದೆ. ವಿಜಯದಶಮಿಯ ದಿನ ಮಹಿಳೆಯರು ದೇವಿಗೆ ಸೀರೆ, ಬಳೆ, ಉಡಿಗೆ ಅಕ್ಕಿ, ನೈವೇದ್ಯದೊಂದಿಗೆ ತೆರಳಿ ಮಲ್ಲಿಗೆ, ಸೇವಂತಿ, ಕನಕಾಂಬರ ಹೀಗೆ ಬಗೆಬಗೆಯ ಪುಷ್ಪಗಳಿಂದ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಅರುಣಾ ರೆಡ್ಡಿ ಅವರು ಈ ದೇಗುಲಕ್ಕೆ ಆಗಾಗ ಭೇಟಿ ಕೊಡುತ್ತಿರುತ್ತಾರೆ.

ಅಭಿವೃದ್ಧಿ ಕಾರ್ಯಗಳು ಕುಂಠಿತ
ನಗರದ ಹೃದಯಭಾಗದಲ್ಲಿರುವ ಅಧಿದೇವತೆ ಕನಕ ದುರ್ಗಮ್ಮ ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿದ ಸರಕಾರದಿಂದ ಇದುವರೆವಿಗೂ 7 ಕೋಟಿಗೂ ಅಧಿಕ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತದೆ.

ಸರ್ಕಾರದ ಹಣ ವಿನಿಯೋಗವಾಗಿಲ್ಲ
ಅದರೆ, ಇಲ್ಲಿ ಎಲ್ಲವೂ ಗಾಲಿ ರೆಡ್ಡಿ ಕುಟುಂಬ ಸೇರಿದಂತೆ ಖಾಸಗಿಯವರಿಂದ ನಡೆಸಲಾದ ಅಭಿವೃದ್ಧಿ ಕಾಮಗಾರಿಯಾಗಿದೆ. ಮೂಲ ಸೌಕರ್ಯ ಅಭಿವೃದ್ಧಿ ಇನ್ನೂ ಕುಂಠಿತವಾಗಿದೆ ಎಂದು ಜನಾರ್ದನ ರೆಡ್ಡಿ ಅಭಿಮಾನಿ ಬಳಗ ದೂರಿದೆ.












Click it and Unblock the Notifications