ಬಳ್ಳಾರಿಗೆ ಕಾಂಗ್ರೆಸ್ ಪ್ರಚಾರಕ್ಕೆ ಬರಲಿದ್ದಾರಂತೆ ಸೋನಿಯಾ!
ಬಳ್ಳಾರಿ, ಮೇ 03 : ಪ್ರಧಾನಿ ನರೇಂದ್ರ ಮೋದಿ ಅವರು ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಭಾಷಣ ಮಾಡುತ್ತಿದ್ದಂತೆಯೇ, ಬಿಜೆಪಿಯವರ ತಂತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಬಳ್ಳಾರಿಗೆ ಕರೆತರಲಿದೆಯಂತೆ.
ಕಾಂಗ್ರೆಸ್ ಪಕ್ಷದ ಆಂತರಿಕ ಚಟುವಟಿಕೆಗಳ ಪ್ರಕಾರ, ಅಚ್ಚರಿಯ ಬೆಳವಣಿಗೆಯಲ್ಲಿ ಮೇ 8 ರ ಮಂಗಳವಾರ ಕರ್ನಾಟಕ ಪ್ರವಾಸ ಕೈಗೊಳ್ಳಲಿರುವ ಸೋನಿಯಾಗಾಂಧಿ ಅವರು, ಚಿಕ್ಕಮಗಳೂರಿಗೆ ತೆರಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಔರಾದ್ ತಾಪಮಾನವನ್ನೂ ಮೀರಿಸಿದ ರಾಹುಲ್ ಗಾಂಧಿ ಮಾತಿನ ಕಾವು
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಇಂದಿರಾಗಾಂಧಿ ಅವರು ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಈ ಹಿನ್ನಲೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸೋನಿಯಾ ಅವರ ಸಾರ್ವಜನಿಕ ರಾಲಿಗೆ ಸಾಕಷ್ಟು ಮಹತ್ವ ಬರಲಿದೆ.
ಅಷ್ಟೇ ಅಲ್ಲ, 1999 ರಲ್ಲಿ ಸೋನಿಯಾಗಾಂಧಿ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿ, ಸಂಸತ್ತು ಪ್ರವೇಶಕ್ಕೆ ಪ್ರಥಮ ಅವಕಾಶ ಪಡೆದಿದ್ದರು. ಇನ್ನೇನು ಪ್ರಧಾನಿ ಆಗಲಿದ್ದಾರೆ ಎನ್ನುವ ಹಂತದಲ್ಲಿ ಬಿಜೆಪಿ ಹೆಣೆದ ನಾಗರಿಕತ್ವದ ತಂತ್ರಕ್ಕೆ ಹಿಂಜರಿದಿದ್ದರು.
ಅಮೇಥಿ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಸೋನಿಯಾ ಬಳ್ಳಾರಿಗೆ ರಾಜೀನಾಮೆ ನೀಡಿದ್ದರು. ಆ ನಂತರ ಬಳ್ಳಾರಿಯ ಸರ್ವಾಂಗೀಣ ಅಭಿವೃದ್ಧಿಗಾಗಿ 3,300 ಕೋಟಿ ರೂಪಾಯಿ ಮೌಲ್ಯದ ವಿಶೇಷ ಅಭಿವೃದ್ಧಿ ಪ್ಯಾಕೇಜನ್ನು ಎಸ್.ಎಂ. ಕೃಷ್ಣ ನೇತೃತ್ವದ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು.
2019 ರಲ್ಲಿ ಸೋನಿಯಾ, ರಾಹುಲ್ ಇಬ್ಬರಿಗೂ ಸೋಲು: ಬಿಜೆಪಿ ಭವಿಷ್ಯ!
ಸೋನಿಯಾಗಾಂಧಿ ಅವರು ಚಿಕ್ಕಮಗಳೂರು ಸಾರ್ವಜನಿಕ ಸಭೆಯನ್ನು ಮುಗಿಸಿಕೊಂಡು, ಬಳ್ಳಾರಿಗೆ ಆಗಮಿಸಿ, ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 8ರ ಸಂಜೆ 5 ಗಂಟೆಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರಂತೆ.
ಪ್ರಸ್ತುತ ಸೋನಿಯಾಗಾಂಧಿ ಅವರ ಆಗಮನದಿಂದ ಜಿಲ್ಲೆಯ ಒಂಭತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಕ್ಸಿಜನ್ ನೀಡಿದಂತೆ ಆಗಲಿದೆ. ಸೋಲುವ ಆತಂಕದಲ್ಲಿದ್ದ ಅನೇಕ ಅಭ್ಯರ್ಥಿಗಳು ಈಗಲೇ ಗೆಲುವಿನ ನಗೆ ಬೀರುತ್ತಿರುವುದು ವಿಶೇಷ.