ಪ್ರತಿಸ್ಪರ್ಧಿ ವಿರುದ್ಧ ವಿಶೇಷ ರೀತಿ ಪ್ರಚಾರ ಕೈಗೊಂಡ 'ಕೈ' ಅಭ್ಯರ್ಥಿ
ಬಳ್ಳಾರಿ, ಮೇ 01 : ಇದೊಂದು ರೀತಿಯ ವಿಶೇಷ ಪ್ರಚಾರ. ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯಕ ತನ್ನ ತೀವ್ರ ಪ್ರತಿಸ್ಪರ್ಧಿ ಓದೋ ಗಂಗಪ್ಪ ಅವರ ಅಫಿಡವಿಟ್ ಹಿಡಿದುಕೊಂಡು ಪಕ್ಷೇತರ ಅಭ್ಯರ್ಥಿ 35 ಕೋಟಿ ರೂಪಾಯಿ ಅಕ್ರಮ ಆಸ್ತಿಗಳಿಸಿದ್ದಾರೆ. ಅವರೇ ಅಫಿಡವಿಟ್ ನಲ್ಲಿ ನಮೂದಿಸಿರುವಂತೆ ಲೋಕಾಯುಕ್ತದಲ್ಲಿ ಪ್ರಕರಣ ತನಿಖೆಯ ಹಂತದಲ್ಲಿದೆ. ನೀವೇ ಆಲೋಚಿಸಿ ಇಂಥಹ ಭ್ರಷ್ಟ ನಿಮಗೆ ಬೇಕೇ? ಎಂದು ಜನರನ್ನು ಪ್ರಶ್ನಿಸುತ್ತಿದ್ದಾರೆ.
ಹೂವಿನಹಡಗಲಿ ಎಸ್ಸಿ ವಿಧಾನಸಭಾ ಕ್ಷೇತ್ರದ ಹಿರೇಮಲ್ಲನಕೆರೆ ಗ್ರಾಮದಲ್ಲಿ ಚುನಾವಣಾ ಭಾಷಣ ಮಾಡುವಾಗ ಅವರ ಗಮನವೆಲ್ಲಾ, ಪ್ರತಿಸ್ಪರ್ಧಿ, ಪಕ್ಷೇತರ ಅಭ್ಯರ್ಥಿ ನಿವೃತ್ತ ಇಂಜಿನಿಯರ್ ಓದೋ ಗಂಗಪ್ಪ ಅವರ ಅಧಿಕಾರವಧಿಯ ಭ್ರಷ್ಟಾಚಾರ, ದುರಾಡಳಿತಗಳೇ ಕೇಂದ್ರಬಿಂದುವಾಗಿದೆ.
ಓದೋ ಗಂಗಪ್ಪ ದಾವಣಗೆರೆ ವಿಭಾಗದಲ್ಲಿ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಲೋಕಾಯುಕ್ತ ದಾಳಿ ನಡೆದಿತ್ತು. ಈ ಸಂದರ್ಭದಲ್ಲಿ 35 ಕೋಟಿ ರೂ. ಅಕ್ರಮ ಆಸ್ತಿ ಆರೋಪ ಎದುರಾಗಿತ್ತು. ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಈ ವಿಚಾರ ಗಂಗಪ್ಪ ಸಲ್ಲಿಸಿರುವ ಅಫಿಡವಿಟ್ ನಲ್ಲಿದೆ ಎಂದು ಟೀಕಿಸಿದ್ದಾರೆ.

ಹಾಲಿ ಶಾಸಕರಾಗಿರುವ ಪಿ.ಟಿ. ಪರಮೇಶ್ವರ ನಾಯಕ ಅವರು ತಾವು ಪುನಾರಾಯ್ಕೆ ಆದಲ್ಲಿ ಕ್ಷೇತ್ರವನ್ನು ಸಮಗ್ರವಾಗಿ ನೀರಾವರಿಗೊಳಪಡಿಸಿ ಬರಗಾಲ ಮುಕ್ತ ತಾಲೂಕಾಗಿ ಬದಲಾಯಿಸುವೆ. ರಸ್ತೆ, ಕುಡಿವ ನೀರು, ವಿದ್ಯುತ್, ಶಿಕ್ಷಣ, ಆರೋಗ್ಯ ಕ್ಷೇತ್ರ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಮೊದಲ ಆದ್ಯತೆ ನೀಡಿ ಕ್ಷೇತ್ರವನ್ನು ಸರ್ವಾಂಗೀಣ ಪ್ರಗತಿಯತ್ತ ಕೊಂಡೊಯ್ಯುವೆ ಎಂದು ಭರವಸೆ ನೀಡಿದರು.












Click it and Unblock the Notifications