ಬಿಜೆಪಿಗೆ ರಾಮುಲು, ಬಳ್ಳಾರಿಯಿಂದ ಸ್ಪರ್ಧೆ
ಬಳ್ಳಾರಿ, ಮಾ.13 : ಹಲವಾರು ದಿನದ ಹಗ್ಗ ಜಗ್ಗಾಟದ ನಂತರ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶ್ರೀ ರಾಮುಲು ಅವರು ಬಿಜೆಪಿಗೆ ಮರಳಲು ಬಿಜೆಪಿ ವರಿಷ್ಠ ನಾಯಕರು ಒಪ್ಪಿಗೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಶ್ರೀರಾಮುಲು ಅವರು ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಬಿ.ಶ್ರೀರಾಮುಲು ಬಿಜೆಪಿ ಸೇರ್ಪಡೆ ವಿಚಾರ ಕರ್ನಾಟಕದಲ್ಲಿ ಬಗೆಹರಿಯದೆ ದೆಹಲಿ ತಲುಪಿತ್ತು. ಗುರುವಾರ ದೆಹಲಿಯಲ್ಲಿ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮತ್ತು ಬಳ್ಳಾರಿ ಕ್ಷೇತ್ರದಿಂದ ಕಣಕ್ಕಿಳಿಯಲು ಒಪ್ಪಿಗೆ ನೀಡಿಲಾಗಿದೆ. [ಬಿಎಸ್ಆರ್ ಜೊತೆ ಮೈತ್ರಿ?]

ಶ್ರೀರಾಮುಲು ಅವರ ಬಿಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲು ಪಕ್ಷದ ಹಿರಿಯ ನಾಯಕಿ, ಸುಷ್ಮಾ ಸ್ವರಾಜ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಶ್ರೀರಾಮುಲು ಬಿಜೆಪಿ ಸೇರ್ಪಡೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವುದು ವಿಳಂಬವಾಗಿತ್ತು. [ಬಿಜೆಪಿಗೆ ಕಗ್ಗಂಟಾದ 8 ಕ್ಷೇತ್ರಗಳು]
ಅಭ್ಯರ್ಥಿಯಾಗಿ ಆಯ್ಕೆ : ಬಿ.ಶ್ರೀರಾಮುಲು ಅವರು ಬಿಜೆಪಿಗೆ ಮರಳಲು ರಾಷ್ಟ್ರೀಯ ನಾಯಕರು ಒಪ್ಪಿಗೆ ನೀಡಿದ ಬಳಿಕ ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಯಾಗಿ ಅವರನ್ನು ಘೋಷಿಸಲಾಗಿದೆ. ಹಾಲಿ ಕ್ಷೇತ್ರದಲ್ಲಿ ಜೆ.ಶಾಂತಾ ಸಂಸದರಾಗಿದ್ದು, ಅವರು ಬಿಎಸ್ಆರ್ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಸದ್ಯ ಬಿಎಸ್ಆರ್ ಕಾಂಗ್ರೆಸ್ ವಿಲೀನದ ನಂತರ ಕ್ಷೇತ್ರದಲ್ಲಿ ಶ್ರೀರಾಮುಲು ಅವರಿಗೆ ಟಿಕೆಟ್ ನೀಡಲಾಗಿದೆ.
ಬಿಎಸ್ವೈ ನಂತರ ಶ್ರೀರಾಮುಲು : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ಕೆಜೆಪಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ ನಂತರ ಶ್ರೀರಾಮುಲು ಅವರು ತಮ್ಮ ಬಿಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲಿದ್ದಾರೆ. ಇದರಿಂದ ಕರ್ನಾಟಕದಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಸಹ ಹೆಚ್ಚಳವಾಗಲಿದೆ. ಬಿಎಸ್ಆರ್ ಕಾಂಗ್ರೆಸ್ ನಲ್ಲಿ 4 ಶಾಸಕರಿದ್ದು, ಅವರು ಬಿಜೆಪಿ ಶಾಸಕರೆಂದು ಗುರುತಿಸಿಕೊಳ್ಳಲಿದ್ದಾರೆ.












Click it and Unblock the Notifications