ವಿಜಯನಗರ ಜಿಲ್ಲೆ; ಎಲ್ಲಿ ಸ್ಥಾಪನೆಯಾಗಲಿದೆ ಡಿಸಿ ಕಚೇರಿ?
ಬಳ್ಳಾರಿ, ಮಾರ್ಚ್ 02: ವಿಜಯನಗರದಲ್ಲಿ ನೂತನ ಜಿಲ್ಲಾಧಿಕಾರಿಗಳ ಕಚೇರಿ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಕರ್ನಾಟಕ ಸರ್ಕಾರ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಘೋಷಣೆ ಮಾಡಿದೆ.
ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಯಾಗಿ ಐಎಎಸ್ ಅಧಿಕಾರಿ ಅನಿರುದ್ಧ ಶ್ರವಣ್ ನೇಮಕಗೊಂಡಿದ್ದಾರೆ. ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ತಹಸೀಲ್ದಾರ್ ವಿಶ್ವನಾಥ ಅವರ ಜೊತೆ ಅವರು ಸ್ಥಳ ಪರಿಶೀಲನೆ ಮಾಡಿದರು.
ನೂತನ ವಿಜಯನಗರ ಜಿಲ್ಲೆಯಲ್ಲಿನ ಸರ್ಕಾರಿ ಕಚೇರಿ ಕಾರ್ಯಾರಂಭ ಮಾಡಲು ಹುದ್ದೆಗಳ ವಿವರಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. ಇದಕ್ಕೆ ಬೇಕಾಗಿರುವ ಪೂರ್ವ ಸಿದ್ಧತೆಗಳನ್ನು ಅನಿರುದ್ಧ ಶ್ರವಣ್ ನೋಡಿಕೊಳ್ಳಲಿದ್ದಾರೆ.

ಹಿರಿಯ ಐಎಎಸ್ ಅಧಿಕಾರಿ ಡಾ. ರಜನೀಶ್ ಗೋಯಲ್ ಸರ್ಕಾರದ ಮಟ್ಟದಲ್ಲಿ ವಿಜಯನಗರ ಜಿಲ್ಲೆಯನ್ನು ಆರಂಭಿಸಲು ಎಲ್ಲಾ ಪೂರ್ವ ಸಿದ್ಧತೆಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ.
ವಿಜಯನಗರ ಕೇಂದ್ರ ಸ್ಥಾನ; ನೂತನ ವಿಜಯನಗರ ಜಿಲ್ಲೆಗೆ ಹೊಸಪೇಟೆ ಕೇಂದ್ರಸ್ಥಾನ. ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ, ಕೂಡ್ಲಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ, ಹರಪನಹಳ್ಳಿ ತಾಲೂಕುಗಳು ಜಿಲ್ಲೆಯಲ್ಲಿ ಇರಲಿವೆ.

ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿರುವ ಆನಂದ್ ಸಿಂಗ್ ವಿಜಯನಗರ ಜಿಲ್ಲೆ ರಚನೆಗೆ ಒತ್ತಾಯ ಮಾಡಿದ್ದರು. 2019ರ ಸೆಪ್ಟೆಂಬರ್ನಲ್ಲಿ ಯಡಿಯೂರಪ್ಪ ಹೊಸ ಜಿಲ್ಲೆ ರಚನೆ ಘೋಷಣೆ ಮಾಡಿದ್ದರು.
ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ ಜಿಲ್ಲೆಯನ್ನು ರಚನೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಗೆ ಬಳ್ಳಾರಿ ಕೇಂದ್ರಸ್ಥಾನ. ಬಳ್ಳಾರಿ, ಕುರುಗೋಡು, ಸಿರಗುಪ್ಪ, ಕಂಪ್ಲಿ ಮತ್ತು ಸಂಡೂರು ತಾಲೂಕುಗಳು ಬಳ್ಳಾರಿ ಜಿಲ್ಲೆಯಲ್ಲಿಯೇ ಇರಲಿವೆ.












Click it and Unblock the Notifications