ನಕಲಿ ಪತ್ರದ ವೈರಲ್ ಬಗ್ಗೆ ಸ್ಪಷ್ಟನೆ ನೀಡಿದ ಆನಂದ್ ಸಿಂಗ್
ಬಳ್ಳಾರಿ, ಜನವರಿ 21: ತಮ್ಮ ಹೆಸರಿನ ನಕಲಿ ಲೆಟರ್ ಪ್ಯಾಡ್ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ಯಾರು ಕಿವಿಗೊಡಬೇಡಿ ಎಂದು ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಜನರಲ್ಲಿ ಮನವಿ ಮಾಡಿದ್ದಾರೆ.
ತಮ್ಮ ನಕಲಿ ಲೆಟರ್ ಪ್ಯಾಡ್ ಬಳಕೆ ಮಾಡಿ ಜನರನ್ನು ದಾರಿ ತಪ್ಪಿಸುತ್ತಿರುವುದರ ಬಗ್ಗೆ ವಿಜಯನಗರ ಶಾಸಕ ಆನಂದ್ ಸಿಂಗ್ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
""ಕೆಲವು ಕಿಡಿಗೇಡಿಗಳು ನನ್ನ ಲೆಟರ್ ಪ್ಯಾಡ್ ಬಳಕೆ ಮಾಡಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಅನಾಮಧೇಯ ಪತ್ರಗಳ ಕಿವಿಗೊಡಬೇಡಿ ಎಂದು ಎಲ್ಲಾ ಧರ್ಮೀಯರಲ್ಲಿ ವಿನಂತಿ ಮಾಡುತ್ತೇನೆ'' ಎಂದು ಆನಂದ್ ಸಿಂಗ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

ನಕಲಿ ಲೆಟರ್ ಪ್ಯಾಡ್ ಬಳಕೆಯಾಗುತ್ತಿರುವುದರ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದು, ಕಳೆದ ಎರಡು ವರ್ಷಗಳಿಂದ ಈ ರೀತಿ ಹೊಸಪೇಟೆ ನಗರದಲ್ಲಿ ನನ್ನ ಲೆಟರ್ ಪ್ಯಾಡ್ ಬಳಸಿ ಅನಾಮಧೇಯ ಪತ್ರಗಳು ಹರಿದಾಡುತ್ತಿದ್ದವು, ಈಗ ರಾಜ್ಯದ ಬೇರೆ ಜಿಲ್ಲೆಗಳಲ್ಲಿಯೂ ಹರಿದಾಡುತ್ತಿದ್ದಾವೆ ಎಂದು ಹೇಳಿದ್ದಾರೆ.
""ಅದರಲ್ಲೂ ನನ್ನ ಲೆಟರ್ ಪ್ಯಾಡ್ ನಲ್ಲಿ ಸೋಮಶೇಖರ ರೆಡ್ಡಿ ಸಹಿ ಮಾಡಿರುವ ರೀತಿಯ ಪತ್ರ ಹರಿದಾಡುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಪತ್ರದಲ್ಲಿ ಮದರಸಾಗಳ ಬಗ್ಗೆ ಕೆಟ್ಟ ಪದಗಳ ಬಳಕೆ ಮಾಡಲಾಗಿದೆ'' ಎಂದು ತಿಳಿಸಿದರು.

ತಮ್ಮ ವಿರುದ್ಧ ಷಡ್ಯಂತ್ರ ಮಾಡುವವರು ಯಾರೆಂದು ಗೊತ್ತಿಲ್ಲ, ಶತ್ರುಗಳು ಯಾರೆಂಬುದು ಸಹ ಅರ್ಥವಾಗುತ್ತಿಲ್ಲ, ಪೊಲೀಸರು ಅಂತಹ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ, ಕ್ರಮ ಜರುಗಿಸಬೇಕೆಂದು ಆನಂದ್ ಸಿಂಗ್ ಮನವಿ ಮಾಡಿದ್ದಾರೆ.












Click it and Unblock the Notifications