ಶೇ 40ರಷ್ಟು ಕಮೀಷನ್ ಆರೋಪ; ತನಿಖೆಗೆ ವಿ. ಎಸ್. ಉಗ್ರಪ್ಪ ಆಗ್ರಹ
ಬಳ್ಳಾರಿ, ಆಗಸ್ಟ್, 28: "ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿದ ಸರ್ಕಾರದ ವಿರುದ್ಧ 40 ಪರ್ಸೆಂಟೇಜ್ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡಬೇಕು. ನಿಷ್ಪಕ್ಷಪಾತ ತನಿಖೆ ಆದರೆ ಬಹುತೇಕ ಸಚಿವರು ಜೈಲಿಗೆ ಹೋಗುತ್ತಾರೆ" ಎಂದು ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಬಳ್ಳಾರಿಯಲ್ಲಿ ಗುಡುಗಿದರು.
ಬಳ್ಳಾರಿ ಜಿಲ್ಲಾ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, "ನ್ಯಾಯಾಂಗ ತನಿಖೆಗೆ ಆದೇಶ ಮಾಡಿದರೆ ನಮ್ಮಲ್ಲಿರುವ ದಾಖಲೆಗಳನ್ನು ಕೊಡುತ್ತೇವೆ. ಆದರೆ ರಾಜ್ಯದಲ್ಲಿ ವ್ಯವಸ್ಥಿತವಾಗಿ ಸಂಚು ನಡೆಯುತ್ತಿದೆ. ಇಂತಹ ವಿಚಾರಗಳ ಬಗ್ಗೆ ಮಾತಾಡಿದರೆ, ಮಾಂಸ ತಿಂದು ದೇವಸ್ಥಾನಕ್ಕೆ ಹೋದರು ಅಂತ ಇಲ್ಲಸಲ್ಲದ ಆರೋಪಗಳನ್ನು ಮಾಡಿ ದಾರಿ ತಪ್ಪಿಸುತ್ತಾರೆ. ಮಾಂಸ ತಿನ್ನಬಾರದು, ದೇವಸ್ಥಾನಕ್ಕೆ ಹೊಗಬಾರದು ಅಂತ ಎಲ್ಲಿ ಇದೆ?" ಎಂದು ಪ್ರಶ್ನಿಸಿದರು.
ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ಬಳ್ಳಾರಿ ಜಿಲ್ಲಾ ಪಂಚಾಯಿತಿ
"ಬಿಜೆಪಿಯವರು ಅಧುನಿಕ ರಾಮನ ಭಕ್ತರು, ಭಾರಧ್ವಜರ ಆಶ್ರಮದಲ್ಲಿ ರಾಮನಿಗೆ ಮಾಂಸಹಾರ ವ್ಯವಸ್ಥೆ ಮಾಡುತ್ತೇವೆ ಎಂದಿದ್ದರು. ಸೀತಾ ಮಾತೆ ಗಂಗಾ ನದಿ ದಾಟಬೇಕಾದರೆ ತಾಯಿ ನೀನು ಜಗನ್ಮಾತೆ, ರಕ್ಷಣೆ ಕೊಡು, ನಾನು ವಾಪಸ್ ಬಂದ ಮೇಲೆ ನಿನಗೆ ತೃಪ್ತಿ ಆಗುವಷ್ಟು ಮಾಂಸದ ನೈವೇದ್ಯ, ಹೆಂಡದ ನೈವೇದ್ಯ ಕೊಡುತ್ತೇವೆ ಎಂದಿದ್ದರು" ಎಂದು ಪೌರಾಣಿಕ ಪ್ರಸಂಗಗಳನ್ನು ಉಲ್ಲೇಖಿಸಿದರು.
ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ಉಗ್ರಪ್ಪ
"ಬಿಜೆಪಿ ಹಾಗೂ ಆರ್ಎಸ್ಎಸ್ನವರಿಗೆ ತಾಕತ್ತಿದ್ದರೆ, ಧಮ್ ಇದ್ದರೆ ಮಾಂಸ ತಿನ್ನುವವರು, ಮೊಟ್ಟೆ ತಿನ್ನುವವರು, ಮೀನು ತಿನ್ನುವವರು ಶಾಖೆಗೆ ಬರಬಾರದು ಎಂದು ಹೇಳಲಿ. ಮಾಂಸ. ಮೊಟ್ಟೆ, ಮೀನು ತಿನ್ನುವವರ ವೋಟ್ ಬೇಕಾಗಿಲ್ಲ ಅಂತ ಹೇಳಲಿ" ಎಂದು ವಿ. ಎಸ್. ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
"ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಪ್ರಧಾನಿ ಮೋದಿ ಅವರು ವಸೂಲಿ ಸರ್ಕಾರ, 10% ಸರ್ಕಾರ ಎಂದು ಆರೋಪ ಮಾಡಿದ್ದರು. ಆಗ ನಾನು ಒಬ್ಬ ವಕೀಲನಾಗಿ ನೊಟೀಸ್ ನೀಡಿದ್ದೆ. ಸಾಕ್ಷಿಗಳಿದ್ದರೆ ಬಿಡುಗಡೆ ಮಾಡಬೇಕಿತ್ತಲ್ಲ? ನೂರು ಕೋಟಿ ರೂಪಾಗಳಿಗೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ ಅಂತ ನೊಟೀಸ್ ನೀಡಿದ್ದೆ" ಎಂದು ಉಗ್ರಪ್ಪ ಹೇಳಿದ್ದಾರೆ.
ಬಳ್ಳಾರಿಯ ಟವರ್ ಕ್ಲಾಕ್ ದುಸ್ಥಿತಿಯ ಬಗ್ಗೆ ಆರೋಪ
"ಹೊಸಪೇಟೆಯಲ್ಲಿ ಯಾವ ಟೆಂಡರ್ ಇಲ್ಲದೇ ಕಾಮಗಾರಿ ನಡೆಯುತ್ತಿತ್ತು, ಅದೇ ರೀತಿ ಸರ್ಕಾರದಲ್ಲಿ ಟೆಂಡರ್ ಇಲ್ಲದೇ ಸಾಕಷ್ಟು ಕಾಮಗಾರಿಗಳು ನಡೆದಿವೆ. ಬಳ್ಳಾರಿಯ ಟವರ್ ಕ್ಲಾಕ್ ಅವ್ಯವ್ಥೆ ದುಸ್ಥಿತಿಯಲ್ಲಿತ್ತು. ಅದರ ಬಗ್ಗೆ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಬೇಕಿತ್ತು. ಏಕಾಏಕಿ ಸುಸ್ಥಿತಿಯಲ್ಲಿದ್ದ ಕಟ್ಟಡ ಕೆಡವಿದ್ದು ತಪ್ಪು. ಕಟ್ಟಡ ಶಿಥಿಲಗೊಂಡಿದ್ದರೆ ತೆರವು ಮಾಡಬೇಕಿತ್ತು" ಎಂದು ಉಗ್ರಪ್ಪ ಗುಡುಗಿದರು.
40% ಕಮಿಷನ್ ಪಡೆಯುವುದನ್ನು ನಿಲ್ಲಿಸಿ
"ತಮಗಿಷ್ಟ ಬಂದಂತೆ ಕೆಲಸ ಮಾಡುವುದು ಸರಿಯಲ್ಲ. ಟವರ್ ಕ್ಲಾಕ್ನ ಗಡಿಯಾರಗಳನ್ನು ತೆರವು ಮಾಡದೇ ಕಟ್ಟಡ ಕೆಡವಿದ್ದು ಕೂಡ ಸರಿಯಲ್ಲ. ಸಾರ್ವಜನಿಕರ ಹಣ ದುರ್ಬಳಕೆ ಆಗುತ್ತಿದೆ. ಯಾರಿಗಾಗಿ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆಯೋ? ನನಗೆ ಗೊತ್ತಿಲ್ಲ. ಈಗ ಮಾಡುತ್ತಿರುವ ಕಾಮಗಾರಿಯಲ್ಲಾದರೂ 40 ಪರ್ಸೆಂಟ್ ಕಮಿಷನ್ ಪಡೆಯದೆ ಯಥಾಸ್ಥಿತಿಯಲ್ಲಿ ಕೆಲಸ ಮಾಡಲಿ" ಎಂದು ಉಗ್ರಪ್ಪ ಆಗ್ರಹಿಸಿದರು.
ಕಡತ ವಿಲೇವಾರಿಗೆ ಶೇ.50% ಕಮಿಷನ್ ಆರೋಪ
"ಬೆಂಗಳೂರಿನಲ್ಲಿ ಸರ್ಕಾರಿ ಕಾಮಗಾರಿಗಳಲ್ಲಿ, ಕಡತ ವಿಲೇವಾರಿಗೆ ಶೇಕಡಾ 50% ಕಮಿಷನ್ ಕೇಳಲಾಗುತ್ತಿದೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘ ಆರೋಪ ಮಾಡಿದೆ. ಕೆಂಪಣ್ಣ ಅವರ ಅಧ್ಯಕ್ಷತೆಯಲ್ಲಿರುವ ಸಂಘ 1948ರಲ್ಲಿ ಸ್ಥಾಪನೆ ಆದ ಅತ್ಯಂತ ಹಳೆಯದಾಗಿದೆ. 2 ಲಕ್ಷ ಜನ ಗುತ್ತಿಗೆದಾರರು ಇದರ ಸದಸ್ಯರಾಗಿದ್ದಾರೆ. ಇಂತಹ ಸಂಘದವರು ನಾ ಖಾವೂಂಗಾ, ನಾ ಖಾನೆ ದೂಂಗಾ ಎಂದು ಹೇಳಿದ ಪ್ರಧಾನಿಗಳಿಗೆ ಪತ್ರ ಬರೆದರು. ಕೇವಲ ಪ್ರಧಾನಿ ಮಾತ್ರವಲ್ಲದೇ, ಅಮಿತ್ ಶಾ ಹಾಗೂ ರಾಜ್ಯಪಾಲರಿಗೂ ಪತ್ರ ಬರೆದಿದ್ದಾರೆ. ಆದರೆ ಈವರೆಗೂ ಯಾವ ಕ್ರಮ ಆಗಲಿಲ್ಲ" ಎಂದು ಉಗ್ರಪ್ಪ ಅಸಮಾಧಾನ ಹೊರಹಾಕಿದರು.