ರಾಮಕೃಷ್ಣ ಹೆಗಡೆ ಅವರಿಗೇ ಮಣ್ಣು ಮುಕ್ಕಿಸಿದ್ದ ಸಿದ್ದು ನ್ಯಾಮಗೌಡ
Recommended Video
ಅದು 1991ರ ಸಮಯ. ಮಂಡಲ್ ಆಯೋಗದ ವಿರುದ್ಧ ದೇಶದಾದ್ಯಂತ ಎದ್ದಿದ್ದ ಕ್ರಾಂತಿಯಿಂದಾಗಿ ಹದಿನಾರೇ ತಿಂಗಳಲ್ಲಿ ವಿಪಿ ಸಿಂಗ್ ಅವರ ಸರಕಾರವೇ ಬಿದ್ದುಹೋಗಿ ಲೋಕಸಭೆ ಚುನಾವಣೆ ಘೋಷಣೆಯಾಗಿತ್ತು. ಆಗ, ಬಾಬ್ರಿ ಮಸೀದಿ ಮತ್ತು ರಾಮಜನ್ಮ ಭೂಮಿ ನಡುವಿನ ಹೋರಾಟ ಕೂಡ ಭುಗಿಲೆದ್ದಿತ್ತು.
ಆಗ, ಕರ್ನಾಟಕದಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ. ಅಷ್ಟರಲ್ಲಾಗಲೇ ಅವರು ಮೂರು ಬಾರಿ ಮುಖ್ಯಮಂತ್ರಿಯಾಗಿ ಭಾರೀ ಹೆಸರು ಗಳಿಸಿದ್ದರು. ಅವರ ಗೆಲುವು ಬಾಗಲಕೋಟೆಯಲ್ಲಿ ನಿಶ್ಚಿತವೆಂದೇ ಎಲ್ಲರೂ ನಿರ್ಧರಿಸಿದ್ದರು.
ರಸ್ತೆ ಅಪಘಾತದಲ್ಲಿ ಜಮಖಂಡಿ ಕ್ಷೇತ್ರದ ಶಾಸಕ ಸಿದ್ದು ನ್ಯಾಮಗೌಡ ಮರಣ
ಆದರೆ, ಅಂದು ಆಗಿದ್ದೇನು? ಅವರ ವಿರುದ್ಧ ಸ್ಪರ್ಧಿಸಿದ್ದ ವ್ಯಕ್ತಿ ಒಬ್ಬ ರೈತ. ಅವರು ಮೊದಲನೇ ಬಾರಿ ಚುನಾವಣಾ ಕಣಕ್ಕಿಳಿದಿದ್ದರು. ಆದರೆ, ರಾಮಕೃಷ್ಣ ಹೆಗಡೆ ಅವರ ಪ್ರತಿಷ್ಠೆಗೆ ಮರ್ಮಾಘಾತವಾಗುವಂಥ ಫಲಿತಾಂಶ ಪ್ರಕಟವಾಗಿತ್ತು. ಅವರನ್ನು ಒಬ್ಬ ರೈತ 21,204 ಮತಗಳ ಅಂತದಿಂದ ಸೋಲಿಸಿ ದೆಹಲಿಯ ಸಂಸತ್ತನ್ನು ಪ್ರವೇಶಿಸಿದ್ದರು.
ಅವರೇ, ಸಿದ್ದಪ್ಪ ಭೀಮಪ್ಪ ನ್ಯಾಮಗೌಡ (ಸಿದ್ದು ನ್ಯಾಮಗೌಡ). ರಾಮಕೃಷ್ಣ ಹೆಗಡೆಯಂಥ ಘಟಾನುಘಟಿ ರಾಜಕಾರಣಿಯನ್ನು ಒಬ್ಬ ಯಕಃಶ್ಚಿತ್ ಯುವ ರೈತನೊಬ್ಬ ಸೋಲಿಸಿದ್ದು ಅಂದು ಭಾರೀ ಸುದ್ದಿಯಾಗಿತ್ತು.
ಲಿಂಗಾಯತ ಸಮುದಾಯದವರೇ ಹೆಚ್ಚಿರುವಂಥ ಬಾಗಲಕೋಟೆ ಜಿಲ್ಲೆಯಲ್ಲಿ ಮತದಾರರು ಮುಖ ನೋಡಿ ಮಣೆ ಹಾಕದೆ, ಸ್ಥಳದಲ್ಲಿ ನಿಜವಾಗಿಯೂ ಕೆಲಸ ಮಾಡಿದ ವ್ಯಕ್ತಿಯೊಬ್ಬ ಗೆಲ್ಲಲು ನೆರವಾಗಿದ್ದರು. ಈ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇದ್ದರೂ ಸಿದ್ದುವನ್ನು ಗೆಲ್ಲಿಸಲು ಹಲವಾರು ಕಾರಣಗಳೂ ಇದ್ದವು.
ಜನಮೆಚ್ಚಿದ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡರಿಗೆ ಭಾವುಕ ಶೃದ್ಧಾಂಜಲಿ
ರೈತ ನಾಯನಾಗಿದ್ದ ಸಿದ್ದು ನ್ಯಾಮಗೌಡ ಅವರು ಹಲವಾರು ರೈತರ ಚಳವಳಿಯ ನೇತೃತ್ವ ವಹಿಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ, ಬಾಗಲಕೋಟೆ ಕ್ಷೇತ್ರದಲ್ಲಿ ಕೃಷ್ಣಾ, ಮಲಪ್ರಭಾ ಮತ್ತು ಘಟಪ್ರಭಾ ನದಿಗಳು ಹರಿಯುತ್ತಿದ್ದರೂ ಮೊದಲ ಬಾರಿ ಬ್ಯಾರೇಜ್ ನಿರ್ಮಿಸಲು ಸಿದ್ದು ನ್ಯಾಮಗೌಡ ಭಾರೀ ಶ್ರಮ ವಹಿಸಿದ್ದರು.
ಕ್ಷೇತ್ರದಲ್ಲಿ ಸಾಕಷ್ಟು ನೀರಿನ ಸಂಪನ್ಮೂಲ ಇದ್ದರೂ ಅದರ ಪ್ರಯೋಜನ ಪಡೆಯಲು ಸಾಧ್ಯವಾಗಿರಲಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ, ಕೃಷಿಗೆ ನೀರಿನ ಕೊರತೆ ಅನುಭವಿಸುತ್ತಿತ್ತು. ಆಗ, ಪಂಪ್ ಸೆಟ್ ಇರುವಂಥ ಪ್ರತಿ ರೈತರಿಂದ 5 ರುಪಾಯಿ ಸಂಗ್ರಹಿಸಿ, 1 ಕೋಟಿ ರುಪಾಯಿ ಸಂಗ್ರಹಿಸಿ, ಚಿಕ್ಕಪಡಸಲಗಿ ಗ್ರಾಮದಲ್ಲಿ ಬ್ಯಾರೇಜ್ ನಿರ್ಮಿಸಲು ಅವರು ಹೋರಾಟ ನಡೆಸಿದ್ದಲ್ಲದೆ, ಸರಕಾರದ ಅನುದಾನ ಮೂಲಕ ಸಿದ್ದು ನ್ಯಾಮಗೌಡ ಅವರು ಶ್ರಮಬಿಂದುಸಾಗರ ಬ್ಯಾರೇಜ್ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
1988ರಿಂದ ನಡೆದಿದ್ದ ಈ ಹೋರಾಟಕ್ಕೆ ಬಳುವಳಿಯಾಗಿ ಬಾಗಲಕೋಟೆ ರೈತರು ಮತ್ತು ಮತದಾರರು 'ಬ್ಯಾರೇಜ್ ಸಿದ್ದು' ಎಂದೇ ಖ್ಯಾತರಾಗಿದ್ದ ಸಿದ್ದು ನ್ಯಾಮಗೌಡ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲ್ಲಿಸಿದರು. ಅಲ್ಲಿಂದ ಅವರು ಹಿಂದುರಿಗಿ ನೋಡಿದ್ದಿಲ್ಲ. ಅಂದಿನಿಂದ ಸಿದ್ದು ನ್ಯಾಮಗೌಡ ಅವರು ಹಲವಾರು ಏಳುಬೀಳುಗಳನ್ನು ಕಂಡಿದ್ದಾರೆ. 2008ರಲ್ಲಿ ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರದಿಂದ ಸೋತರೂ, 2013ರಲ್ಲಿ ಮತ್ತು 2018ರಲ್ಲಿ ಜಯಭೇರಿ ಬಾರಿಸಿದ್ದರು.
ಆದರೆ ದುರಾದೃಷ್ಟವಶಾತ್, ಮೇ 28ರ ಸೋಮವಾರ ಬೆಳಗಿನ ಜಾವ 4.30ಕ್ಕೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 69 ವರ್ಷ ಜನಪ್ರಿಯ ರಾಜಕಾರಣಿ ಸಿದ್ದು ನ್ಯಾಮಗೌಡ ಅವರು ಅಸುನೀಗಿದ್ದಾರೆ. ಅಪಘಾತದಲ್ಲಿ ಅವರ ಎದೆಗೆ ಭಾರೀ ಪೆಟ್ಟು ಬಿದ್ದಿದ್ದರಿಂದ ಅವರು ಕೊನೆಯುಸಿರೆಳೆದರು. ಅವರ ಅಂತ್ಯಕ್ರಿಯೆ ಜಮಖಂಡಿಯಲ್ಲಿ ಮಂಗಳವಾರ ನೆರವೇರುವ ಸಾಧ್ಯತೆಯಿದೆ.