ಯಾರ್ ಹೇಳಿದ್ದು ಬಾದಾಮಿಯಿಂದ ಸ್ಪರ್ಧಿಸ್ತೇನಂತ? ಸಿದ್ದು ಗುದ್ದು
Recommended Video
ಬೆಂಗಳೂರು, ಏಪ್ರಿಲ್ 16 : "ನಾನು ಬಾದಾಮಿಯಿಂದನೂ ಸ್ಪರ್ಧಿಸುತ್ತಿದ್ದೇನೆ ಅಂತ ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿಸಲಾಗಿತ್ತು. ಆದರೆ, ಅದೆಲ್ಲ ಸುಳ್ಳು. ಅಲ್ಲಿಯ ಕೆಲವರು ನನ್ನನ್ನು ಅಲ್ಲಿಂದನೂ ಸ್ಪರ್ಧಿಸಬೇಕೆಂದು ಬಲವಂತ ಮಾಡಿದ್ದು ನಿಜ. ಆದರೆ, ಅಲ್ಲಿಂದ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ!"
ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರೊಂದಿಗೆ ಎರಡು ದಿನಗಳ ಕಾಲ ಸುದೀರ್ಘ ಮಾತುಕತೆ ನಡೆಸಿದ ನಂತರ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಪ್ರಕಟವಾದ ತರುವಾಯ, ಮೇಲಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಸಿದ್ದರಾಮಯ್ಯನವರು ಬಾದಾಮಿಯಿಂದ ಸ್ಪರ್ಧಿಸುವುದಿಲ್ಲ, ಆ ಸುದ್ದಿಯೆಲ್ಲ ಸುಳ್ಳು ಎಂದು ಹೇಳುವುದಿದ್ದರೆ, ಕಾಂಗ್ರೆಸ್ ಪಕ್ಷದ ಅಧಿಕೃತ ಪಟ್ಟಿ ಬಿಡುಗಡೆಯಾಗುವ ಮೊದಲೇ ಇದನ್ನು ಸಿದ್ದರಾಮಯ್ಯನವರು ಪ್ರಕಟಿಸಬಹುದಿತ್ತು. ಅದನ್ನು ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆ ಉದ್ಭವವಾಗಿದೆ.
ಬಾದಾಮಿ ವಿಧಾನಸಭೆ ಕ್ಷೇತ್ರದಿಂದಲೂ ಸಿದ್ದರಾಮಯ್ಯ ಅವರು ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದ್ದು ಸುಳ್ಳಲ್ಲ. ಇದಕ್ಕೆ ಹೈಕಮಾಂಡ್ ಅನುಮತಿ ಕೂಡ ಸಿಕ್ಕಿದೆ ಎಂಬ ಸುದ್ದಿಯೂ ಸುಳ್ಳಲ್ಲ. ಸಿದ್ದರಾಮಯ್ಯ ಬಾದಾಮಿ ಆಯ್ದುಕೊಂಡಿದ್ದರಿಂದ ಚಿಮ್ಮನಕಟ್ಟಿ ಅವರು ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿದ್ದೂ ಸುಳ್ಳಲ್ಲ.
ಮೈಸೂರು ಜಿಲ್ಲೆಯ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರು ಜೆಡಿಎಸ್ ಅಭ್ಯರ್ಥಿ ಜಿಟಿ ದೇವೇಗೌಡ ಅವರಿಂದ ಜಿದ್ದಾಜಿದ್ದಿನ ಫೈಟ್ ಎದುರಿಸಲಿದ್ದಾರೆ, ಅಲ್ಲಿ ಗೆಲ್ಲುವುದು ಸ್ವಲ್ಪ ಕಷ್ಟಕರ ಎಂಬ ಗುಪ್ತಚರ ಇಲಾಖೆಯ ಮಾಹಿತಿ ಬಂದ ನಂತರ, ಸಿದ್ದರಾಮಯ್ಯನವರ ಆಯ್ಕೆಗಳೂ ಬದಲಾಗಿದ್ದವು. ಬಾದಾಮಿಯಿಂದ ಸ್ಪರ್ಧಿಸುವುದು ಹೆಚ್ಚೂಕಡಿಮೆ ಖಚಿತವಾಗಿತ್ತು.
ಟಿಕೆಟ್ ರಾಜಕೀಯ: ಸಿದ್ದರಾಮಯ್ಯ ಮೇಲೆ ಹೈಕಮಾಂಡ್ಗೆ ಏಕಿಷ್ಟು ನಂಬಿಕೆ?
ಆದರೆ, ಕಾಂಗ್ರೆಸ್ ಬಿಡುಗಡೆ ಮಾಡಿರುವ ಪಟ್ಟಿ ಅಚ್ಚರಿ ತಂದಿದೆ. ಅಲ್ಲಿ ಸಿದ್ದರಾಮಯ್ಯನವರ ಹೆಸರೂ ಇಲ್ಲ, ಚಿಮ್ಮನಕಟ್ಟಿಯವರ ಹೆಸರೂ ಇಲ್ಲ. ಬದಲಿಗೆ ಸಿದ್ದರಾಮಯ್ಯನವರ ಆಪ್ತನೆಂದೇ ಚಾಲ್ತಿಯಲ್ಲಿರುವ, ಮಕ್ಕಳತಜ್ಞ ಮತ್ತು ನರರೋಗ ತಜ್ಞರಾಗಿರುವ ಡಾ. ದೇವರಾಜ್ ಪಾಟೀಲ ಅವರ ಹೆಸರನ್ನು ಪ್ರಸ್ತಾಪಿಸಲಾಗಿದೆ.
ಇದೊಂದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರು ಹೂಡಿರುವ ತಂತ್ರಗಾರಿಕೆಯೆಂದೇ ಬಿಂಬಿಸಲಾಗುತ್ತಿದೆ. ಕಡೆ ಕ್ಷಣದಲ್ಲಿ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ದೇವರಾಜ್ ಪಾಟೀಲರ ಬದಲಾಗಿ ಸಿದ್ದರಾಮಯ್ಯನವರೇ ಸ್ಪರ್ಧಿಸಿದರೂ ಅಚ್ಚರಿಯಿಲ್ಲ ಎಂಬ ಮಾತು ಕೂಡ ಹರಿದಾಡುತ್ತಿದೆ. ವಿರೋಧಿಗಳ ಬಾಯಿ ಮುಚ್ಚಿಸುವ ಉದ್ದೇಶದಿಂದ ದೇವರಾಜ್ ಹೆಸರು ಸೂಚಿಸಲಾಗಿದೆ ಎಂಬ ಗಾಳಿಮಾತು ಹರಿದಾಡುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ
ಒಟ್ಟಿನಲ್ಲಿ, ಸಿದ್ದರಾಮಯ್ಯ ಅವರು ಹೆಸರು ಪ್ರಸ್ತಾಪವಾಗಿದ್ದರಿಂದ ಬನಶಂಕರಿ ಪುಣ್ಯಕ್ಷೇತ್ರ ಇರುವ ಬಾದಾಮಿ ಇಡೀ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಅಲ್ಲಿಯ ಜಾತಿಯ ಲೆಕ್ಕಾಚಾರದಿಂದ ಕೂಡ ಸಿದ್ದರಾಮಯ್ಯ ಅವರ ಗೆಲುವು ಕೂಡ ಶತಸಿದ್ಧ ಎಂದು ಹೇಳಲಾಗಿತ್ತು. ಜೆಡಿಎಸ್ ಪಕ್ಷ ಹಣಮಂತ ಮಾವಿನಮರದ್ ಅವರನ್ನು ಕಣಕ್ಕೆ ಇಳಿಸಿದ್ದರೆ, ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ.