ಸಾರ್ವಜನಿಕರಿಗೆ ಜೀರೋ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಮೆಟ್ರೋ ಪ್ರಯಾಣಕ್ಕೆ ಮುಂದಾದ ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: ವಿವಿಐಪಿಗಳ (VVIP) ಸಂಚಾರದ ವೇಳೆ ಸಾರ್ವಜನಿಕ ರಸ್ತೆಗಳಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡುವುದರಿಂದ ಜನಸಾಮಾನ್ಯರು ಎದುರಿಸುವ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾದರಿಯ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಸುದೀರ್ಘ ಪ್ರಯಾಣದಿಂದ ಜನರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಿಎಂ ಅವರು ಇಂದು (ಜೂನ್ 7) ಮೆಟ್ರೋ ಮೊರೆ ಹೋಗಿದ್ದಾರೆ.
ಎಲ್ಲಿಂದ ಎಲ್ಲಿಗೆ ಪ್ರಯಾಣ?
ಇಂದು ಬೆಳಗ್ಗೆ 9:00 ಗಂಟೆಗೆ ವಿಧಾನಸೌಧದ ಎದುರಿಗಿರುವ ಡಾ. ಬಿ.ಆರ್.ಅಂಬೇಡ್ಕರ್ ಸ್ಟೇಷನ್ನಿಂದ ಕನಕಪುರ ರಸ್ತೆಯ ಕೊನೆಯ ಮೆಟ್ರೋ ನಿಲ್ದಾಣದವರೆಗೂ (ರೇಷ್ಮೆ ಸಂಸ್ಥೆ ನಿಲ್ದಾಣ) ಸಿಎಂ ಡಿ.ಕೆ.ಶಿವಕುಮಾರ್ ಅವರು ಸಾಮಾನ್ಯ ಪ್ರಯಾಣಿಕರಂತೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಇಂದು ಹಾರೋಹಳ್ಳಿ ಮತ್ತು ಕನಕಪುರ ತಾಲೂಕಿನ ವಿವಿಧ ಭಾಗಗಳಲ್ಲಿ ಮತದಾರರಿಗೆ ಹಾಗೂ ಸಾರ್ವಜನಿಕರಿಗೆ ಧನ್ಯವಾದ ಅರ್ಪಿಸಲು ಭರ್ಜರಿ 'ಕೃತಜ್ಞತೆ ಸಮರ್ಪಣಾ ಪ್ರವಾಸ' ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಈ ಪ್ರವಾಸ ಕೈಗೊಂಡಿದ್ದಾರೆ.

ಸದಾಶಿವನಗರದಲ್ಲಿರುವ ತಮ್ಮ ನಿವಾಸದಿಂದ ಕನಕಪುರ ರಸ್ತೆಯವರೆಗೂ ಮುಖ್ಯಮಂತ್ರಿಗಳ ಕಾರುಗಳ ಬೆಂಗಾವಲು ವಾಹನಗಳು ಸಾಗಲು 'ಜೀರೋ ಟ್ರಾಫಿಕ್' ವ್ಯವಸ್ಥೆ ಕಲ್ಪಿಸಿದರೆ, ಭಾನುವಾರದ ರಜೆಯ ದಿನದಂದು ಸಂಚರಿಸುವ ಸಾವಿರಾರು ಸಾರ್ವಜನಿಕರ ವಾಹನಗಳಿಗೆ ಭಾರಿ ಅಡ್ಡಿಯುಂಟಾಗುತ್ತದೆ. ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಹೈರಾಣಾಗುವುದನ್ನು ಮನಗಂಡ ಸಿಎಂ, ರಸ್ತೆಯ ಮೂಲಕ ಹೋಗುವ ಬದಲಿಗೆ ನಮ್ಮ ಮೆಟ್ರೋ ಮೂಲಕವೇ ಕನಕಪುರ ರಸ್ತೆಯ ಕೊನೆಯ ನಿಲ್ದಾಣ ತಲುಪಲು ನಿರ್ಧರಿಸಿದ್ದಾರೆ. ಅಲ್ಲಿಂದ ಮುಂದಕ್ಕೆ ಅವರು ತಮ್ಮ ಪ್ರವಾಸದ ವಾಹನವನ್ನು ಏರಲಿದ್ದಾರೆ.
ಸಿಎಂ ಕೃತಜ್ಞತಾ ಪ್ರವಾಸದ ವಿವರ
ಇತ್ತೀಚೆಗಷ್ಟೇ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ತಮಗೆ ಭರ್ಜರಿ ಬೆಂಬಲ ನೀಡಿದ ಕನಕಪುರ ಮತ್ತು ಹಾರೋಹಳ್ಳಿ ಭಾಗದ ಜನತೆಗೆ ಧನ್ಯವಾದ ಸಲ್ಲಿಸುವುದು ಈ ಪ್ರವಾಸದ ಮುಖ್ಯ ಉದ್ದೇಶವಾಗಿದೆ. ಇಡೀ ದಿನ ಕ್ಷೇತ್ರದ ನಾನಾ ಹಳ್ಳಿ ಹಾಗೂ ಪಟ್ಟಣಗಳಿಗೆ ಭೇಟಿ ನೀಡಲಿರುವ ಸಿಎಂ, ಸಾರ್ವಜನಿಕ ಸಭೆಗಳನ್ನು ನಡೆಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಈ ಸಾರ್ವಜನಿಕ ಸ್ನೇಹಿ ಹಾಗೂ ಸರಳ ನಿರ್ಧಾರಕ್ಕೆ ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಂದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮತ್ತು ಸಚಿವರ ಸಂಚಾರಕ್ಕಾಗಿ 'ಜೀರೋ ಟ್ರಾಫಿಕ್' ಕಲ್ಪಿಸಿದಾಗ ಸಾರ್ವಜನಿಕ ರಸ್ತೆಗಳನ್ನು ಕನಿಷ್ಠ 15ರಿಂದ 30 ನಿಮಿಷಗಳ ಕಾಲ ಬಂದ್ ಮಾಡಲಾಗುತ್ತದೆ. ಸದಾಶಿವನಗರದಿಂದ ಕನಕಪುರ ರಸ್ತೆಯ ಕೊನೆಯವರೆಗಿನ ರಸ್ತೆ ಮಾರ್ಗವು ಮೆಜೆಸ್ಟಿಕ್, ಜಯನಗರ, ಬನಶಂಕರಿಯಂತಹ ಅತ್ಯಂತ ಜನನಿಬಿಡ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಭಾನುವಾರ ರಜಾದಿನ ಆಗಿರುವುದರಿಂದ ಜನರು ಮುಂಜಾನೆಯೇ ಪ್ರವಾಸ ಅಥವಾ ವೈಯಕ್ತಿಕ ಕೆಲಸಗಳಿಗೆ ಹೊರಡುತ್ತಾರೆ. ರಸ್ತೆ ಮಾರ್ಗದ ಮೂಲಕ ಹೋಗಿದ್ದರೆ ಸುಮಾರು 25 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ.
ಹೀಗಾಗಿ ವಿಧಾನಸೌಧದ ಎದುರಿನ 'ಡಾ. ಬಿ.ಆರ್.ಅಂಬೇಡ್ಕರ್ ಸ್ಟೇಷನ್'ನಿಂದ ಹೊರಟು, ಮೆಜೆಸ್ಟಿಕ್ (ನಾಡಪ್ರಭು ಕೆಂಪೇಗೌಡ ನಿಲ್ದಾಣ) ಮೂಲಕ ನೇರವಾಗಿ ಕನಕಪುರ ರಸ್ತೆಯ ಕೊನೆಯ ನಿಲ್ದಾಣವಾದ 'ರೇಷ್ಮೆ ಸಂಸ್ಥೆ' ತಲುಪಲಿದ್ದಾರೆ ಡಿ.ಕೆ.ಶಿವಕುಮಾರ್. ರಸ್ತೆ ಮಾರ್ಗದಲ್ಲಿ ಕನಿಷ್ಠ 1ರಿಂದ 1.5 ಗಂಟೆ ಬೇಕಾಗುವ ಈ ದೂರವನ್ನು, ಮೆಟ್ರೋ ಕೇವಲ ಕೆಲವೇ ನಿಮಿಷಗಳಲ್ಲಿ ಕ್ರಮಿಸುತ್ತದೆ. ಇದರಿಂದ ಸಿಎಂ ಅವರ ಸಮಯವೂ ಉಳಿಯಲಿದ್ದು, ಸಾರ್ವಜನಿಕರಿಗೂ ಯಾವುದೇ ತೊಂದರೆಯಾಗುವುದಿಲ್ಲ. ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಗಳು ಮತ್ತು ಮೆಟ್ರೋ ಸೆಕ್ಯುರಿಟಿ ಸಿಬ್ಬಂದಿ ಸಿಎಂ ಪ್ರಯಾಣದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.













Click it and Unblock the Notifications