Karnataka Weather: ಒಳನಾಡಿಗೆ ಕೈ ಕೊಟ್ಟ ಮುಂಗಾರು, ಕರಾವಳಿಗೆ ಮೇಲೆ ಭಾರೀ ಕರುಣೆ, ಆರೆಂಜ್ ಅಲರ್ಟ್
ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಕಣ್ಮರೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಮಳೆರಾಯನ ಅಬ್ಬರ ಜೋರಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಆಗಾಗ ಒಂದು ದಿನ ಭಾರೀ ಮಳೆ ಮುನ್ಸೂಚನೆ ನೀಡಲಾಗುತ್ತಿತ್ತು. ಆದರೆ ಒಂದೇ ದಿನದಲ್ಲಿ ಬದಲಾಗುವ ಹವಾಮಾನ ಪರಿಸ್ಥಿತಿಯಿಂದಾಗಿ ಮತ್ತೆ ಒಣಹವೆ ಮುಂದುವರಿಯುತ್ತಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಮಳೆಗಾಲದಲ್ಲೂ ಬೇಸಿಗೆಯ ಅನುಭವವಾಗುತ್ತಿದೆ. ಮೈಸುಡುವ ಬಿಸಿಲು ನಿತ್ಯವು ದಾಖಲಾಗುತ್ತಿದ್ದು, ಹೊಲದಲ್ಲಿ ಗೇಣುದ್ದದ ಬೆಳೆ ನೀರಿಲ್ಲದೇ ಬಿಸಿಲಿಗೆ ಕಮರಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.
ಇಂದು ಜೂನ್ 23ರಂದು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಭಾರೀ ಮಳೆ ಬರಲಿದೆ ಎಂದು ಹೇಳಲಾಗಿತ್ತು. ಈ ಕುರಿತು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಸಹ ನೀಡಿತ್ತು. ಹಾವೇರಿ, ಧಾರವಾಡ, ವಿಜಯಪುರ, ದಾವಣಗೆರೆ, ಬಾಗಲಕೋಟೆ, ಗದಗ ಸೇರಿದಂತೆ ವಿವಿಧೆಡೆ ತಂಪು ವಾತಾವರಣ ಕಂಡು ಬಂತು. ಇನ್ನೇನು ಮಳೆ ಆಗಲಿದೆ ಎಂದುಕೊಂಡಿದ್ದ ರೈತರಿಗೆ ಹವಾಮಾನ ಮತ್ತೆ ನಿರಾಶೆ ಮೂಡಿಸಿದೆ.

ಒಳನಾಡು ಜಿಲ್ಲೆಗಳ ಹವಾಮಾನ ಮುನ್ಸೂಚನೆ
ಇಂದು ಮಂಗಳವಾರ ಹವಾಮಾನ ಮುನ್ಸೂಚನೆ ಪ್ರಕಾರ, ಜೂನ್ 27ರವರೆಗೆ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ, ಹಾವೇರಿ, ಬಾಗಲಕೋಟೆ, ಧಾರವಾಡ, ವಿಜಯಪುರ, ಗದಗ, ರಾಯಚೂರು, ಕಲಬುರಗಿ, ಬೀದರ್, ಕೊಪ್ಪಳ, ಶಿವಮೊಗ್ಗ, ಕೊಡಗು, ಚಾಮರಾಜನಗರ ಸೇರಿದಂತೆ ಕರಾವಳಿ ಬಿಟ್ಟು ಉಳಿದೆಲ್ಲ ಕಡೆಗಳಲ್ಲಿ ಮಳೆ ಕಣ್ಮರೆಯಾಗಿದೆ. ಕೆಲವೆಡೆ ಮಾತ್ರ ಆಗಾಗ ಹಗುರ ಮಳೆ ಆಗುವ ಸಾಧ್ಯತೆ ಇದೆ.
12 ಜಿಲ್ಲೆಗಳಿಗೆ ಮಳೆ ನಿರೀಕ್ಷೆ, ಮುಂಗಾರು ಕೊರತೆ
ಜೂನ್ 27 ರಂದು ಅಥವಾ ಜೂನ್ 28 ಸೇರಿ ಎರಡು ದಿನ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ 12 ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಮುಂದಿನ ಒಂದು ದಿನ ಹವಾಮಾನ ಬದಲಾವಣೆ ಆದಲ್ಲಿ ಮತ್ತೆ ಈ ಮೇಲಿನ 12 ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಕಂಡು ಬರುವ ಲಕ್ಷಣಗಳು ಇವೆ. ನಿರೀಕ್ಷೆಯಂತೆ ಒಳನಾಡು ಭಾಗದಲ್ಲಿ ಮಳೆ ಆಗದ ಹಿನ್ನೆಲೆ ಈ ಭಾಗದಲ್ಲಿ ಸಂಪೂರ್ಣ ಬರಗಾಲ ಬಿದ್ದಂತಾಗಿದೆ. ವ್ಯಾಪಕ ಮುಂಗಾರು ಮಳೆ ಕೊರತೆ ಉಂಟಾಗಿದೆ.
ಕರಾವಳಿ ಜಿಲ್ಲೆಗಳಿಗೆ ಮುಂಗಾರು ಕೃಪೆ
ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕರಾವಳಿಗೆ ಇಂದಿನಿಂದ ಜೂನ್ 26ರವರೆಗೆ ಗರಿಷ್ಠ 115 ಮಿಲಿ ಮೀಟರ್ ಮಳೆ ಆಗಲಿದ್ದು, ಮೂರು ದಿನ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ನಂತರ ಎರಡು ದಿನ (ಜೂನ್ 27,28) ಇದೇ ಕರಾವಳಿ ಭಾಗದಲ್ಲಿ ಗರಿಷ್ಠ 200 ಮಿಲಿ ಮೀಟರ್ವರೆಗೆ ಬಿರುಗಾಳಿ ಮಳೆ ನಿರೀಕ್ಷೆ ಇದೆ. ಈ ಕಾರಣಕ್ಕೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.













Click it and Unblock the Notifications