ಬಾಲಕ ವೈಭವ್ ಸೂರ್ಯವಂಶಿಗಾಗಿ ಬಿಸಿಸಿಐ ಮಹತ್ವದ ನಿರ್ಧಾರ
Vaibhav Sooryavanshi: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಕ್ರಮಣಕಾರಿ ಆಟ ಆಡಿದ ಬಾಲಕ ವೈಭವ್ ಸೂರ್ಯವಂಶಿ ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದರು. ಇದೀಗ ಇವರ ಪ್ರತಿಭೆಯನ್ನು ಗುರುತಿಸಿ ಟೀಮ್ ಇಂಡಿಯಾ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿದೆ. ಇದರ ಬೆನ್ನಲ್ಲೇ ಬಿಸಿಸಿಐ ಮಹತ್ವದ ಘೋಷಣೆ ಮಾಡಿದೆ. ಈ ಕುರಿತ ಸಂಪೂರ್ನ ಮಾಹಿತಿ ಇಲ್ಲಿದೆ ನೋಡಿ.
ಭಾರತೀಯ ಕ್ರಿಕೆಟ್ನ 15 ವರ್ಷದ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಲಾಗಿದೆ. ಈ ಸರಣಿಯ ವೇಳೆ ಸೂರ್ಯವಂಶಿ ಅವರೊಂದಿಗೆ ಪೋಷಕರೂ ಪ್ರಯಾಣಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶೇಷ ಅನುಮತಿ ನೀಡಿದೆ ಎಂದು ಸ್ಪೋರ್ಟ್ಸ್ಸ್ಟಾರ್ ವರದಿ ಮಾಡಿದೆ.

776 ರನ್ ಗಳಿಸಿ ಗಮನ ಸೆಳೆದ ವೈಭವ್
ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಅವರು ಒಟ್ಟು 776 ರನ್ ಗಳಿಸಿ ಟೂರ್ನಿಯಲ್ಲೇ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರನಾಗಿ ಹೊರಹೊಮ್ಮಿದ್ದರು. ಈ ಅದ್ಭುತ ಪ್ರದರ್ಶನದ ಬೆನ್ನಲ್ಲೇ ಅವರಿಗೆ ಮೊದಲ ಬಾರಿಗೆ ಭಾರತ ರಾಷ್ಟ್ರೀಯ ಟಿ20 ತಂಡದಿಂದ ಬುಲಾವ್ ಬಂದಿದೆ.
ವೈಭವ್ ಕುಟುಂಬದವರಿಗೂ ಪ್ರವಾಸಕ್ಕೆ ಅವಕಾಶ
ಅತಿ ಚಿಕ್ಕ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುತ್ತಿರುವುದರಿಂದ ನಿರಂತರ ಪ್ರವಾಸ ಹಾಗೂ ಆಟದ ಒತ್ತಡವನ್ನು ನಿಭಾಯಿಸಲು ಕುಟುಂಬದ ಜೊತೆ ಇರುವುದು ಅವರಿಗೆ ಸಹಾಯವಾಗಲಿದೆ ಎಂದು ಬಿಸಿಸಿಐ ಭಾವಿಸಿದೆ. ಈ ಕುರಿತು ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, 'ವೈಭವ್ ಇನ್ನು ಚಿಕ್ಕ ವಯಸ್ಸಿನವನಾಗಿರುವುದರಿಂದ ಹೊಸ ವಾತಾವರಣಕ್ಕೆ ಅವರು ಬೇಗ ಹೊಂದಿಕೊಳ್ಳಲು ಪೋಷಕರು ಜೊತೆಗಿರಲಿ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಅವರ ತಂದೆ-ತಾಯಿಯ ಸಂಪೂರ್ಣ ಪ್ರವಾಸದ ವೆಚ್ಚವನ್ನು ಕ್ರಿಕೆಟ್ ಮಂಡಳಿಯೇ ನೋಡಿಕೊಳ್ಳಲಿದೆ,' ಎಂದು ಸ್ಪಷ್ಟಪಡಿಸಿದ್ದಾರೆ.
ಅಜಿತ್ ಅಗರ್ಕರ್ ಹೇಳಿದ್ದೇನು?
ಸದ್ಯ ವೈಭವ್ ಸೂರ್ಯವಂಶಿ ಭಾರತ 'ಎ' ತಂಡದೊಂದಿಗೆ ತ್ರಿಕೋನ ಸರಣಿಗಾಗಿ ಶ್ರೀಲಂಕಾದಲ್ಲಿದ್ದಾರೆ. ಶನಿವಾರ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಈ ಯುವ ಬ್ಯಾಟರ್ನ ಸಾಮರ್ಥ್ಯದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬರುವ ಐರ್ಲೆಂಡ್, ಇಂಗ್ಲೆಂಡ್ ಪ್ರವಾಸ ಹಾಗೂ ಏಷ್ಯನ್ ಗೇಮ್ಸ್ಗೆ ಸೂರ್ಯವಂಶಿಯನ್ನು ಆಯ್ಕೆ ಮಾಡಿರುವುದನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
'ಐಪಿಎಲ್ 2026 ಪ್ಲೇಆಫ್ ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ವೈಭವ್ ಏಕಾಂಗಿಯಾಗಿ ಮುನ್ನಡೆಸಿದ್ದನ್ನು ನಾವೆಲ್ಲ ನೋಡಿದ್ದೇವೆ. ಅಷ್ಟು ಸಣ್ಣ ವಯಸ್ಸಿನಲ್ಲಿ, ಅತಿ ಹೆಚ್ಚು ಒತ್ತಡವಿರುವ ಐಪಿಎಲ್ನಂತಹ ವೇದಿಕೆಯಲ್ಲಿ ಅಷ್ಟರ ಮಟ್ಟಿಗೆ ಆಕ್ರಮಣಕಾರಿ ಆಟ ಆಡುವುದು ಸಾಮಾನ್ಯ ವಿಷಯವಲ್ಲ. ಕಳೆದ ಸೀಸನ್ನಲ್ಲೂ ಅವರು ಉತ್ತಮ ಆರಂಭ ಪಡೆದಿದ್ದರು. ಆದರೆ ಈ ಬಾರಿ ತಮ್ಮ ಅದ್ಭುತ ಆಟದ ಮೂಲಕ ತಾವಾಗಿಯೇ ತಂಡಕ್ಕೆ ಆಯ್ಕೆಯಾಗುವಂತೆ ಮಾಡಿದ್ದಾರೆ. ಭಾರತೀಯ ಟಿ20 ಕ್ರಿಕೆಟ್ ವೀಕ್ಷಿಸುವ ಪ್ರತಿಯೊಬ್ಬರಂತೆ ನಮಗೂ ಅವರ ಮೇಲೆ ದೊಡ್ಡ ನಿರೀಕ್ಷೆಗಳಿವೆ,' ಎಂದು ಅಗರ್ಕರ್ ತಿಳಿಸಿದ್ದಾರೆ.
ಐಪಿಎಲ್ 2026ರಲ್ಲಿ ವೈಭವ್ ಸೂರ್ಯವಂಶಿ ಅವರು ರಾಜಸ್ಥಾನ್ ರಾಯಲ್ಸ್ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ವೇಳೆ ಅವರು ಒಂದು ಶತಕ ಹಾಗೂ ಐದು ಅರ್ಧಶತಕಗಳು ಸೇರಿದಂತೆ 776 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿ ಆರೆಂಜ್ ಕ್ಯಾಪ್ ತಮ್ಮಾದಾಗಿಸಿಕೊಂಡಿದ್ದಾರೆ. ಅಲ್ಲದೆ ಟೂರ್ನಿಯ 'ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್' ಮತ್ತು 'ಎಮರ್ಜಿಂಗ್ ಪ್ಲೇಯರ್' ಪ್ರಶಸ್ತಿಗಳನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ.












Click it and Unblock the Notifications