ಕೋಟಿ ಕುಬೇರ ಸಿಎಂ ಡಿಕೆಶಿ ಸಂಪುಟದಲ್ಲಿ 13 ಸಚಿವರ ಮೇಲೂ ಇದೆ ಕ್ರಿಮಿನಲ್ ಕೇಸ್: ಸ್ಫೋಟಕ ವರದಿ
ಬೆಂಗಳೂರು, ಜೂನ್ 7: ಇತ್ತೀಚೆಗಷ್ಟೇ ರಾಜ್ಯದಲ್ಲಿ ನೂತನ ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಪುನರ್ರಚನೆಯಾಗಿದೆ. ಈ ಹಿನ್ನೆಲೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮಹತ್ವದ ವರದಿಯೊಂದನ್ನು ಬಿಡುಗಡೆ ಮಾಡಿವೆ. ಈ ಸಂಪುಟದ ಒಟ್ಟು 14 ಸಚಿವರ ಪೈಕಿ 13 ಮಂದಿಯ ಚುನಾವಣಾ ಪ್ರಮಾಣಪತ್ರಗಳನ್ನು ಅಧ್ಯಯನ ನಡೆಸಿ ಕುತೂಹಲಕಾರಿ ಅಂಕಿ-ಅಂಶಗಳನ್ನು ಪ್ರಕಟಿಸಲಾಗಿದೆ.
ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ನಲ್ಲಿ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಹಿರಿಯ ಸಚಿವರಾದ ಕೆ.ಜೆ. ಜಾರ್ಜ್ ಅವರ ಪ್ರಮಾಣಪತ್ರವು ಸ್ಪಷ್ಟವಾಗಿ ಮತ್ತು ಪೂರ್ಣ ಪ್ರಮಾಣದಲ್ಲಿ ಲಭ್ಯವಿರಲಿಲ್ಲ. ಈ ತಾಂತ್ರಿಕ ಕಾರಣದಿಂದಾಗಿ ಅವರೊಬ್ಬರನ್ನು ಹೊರತುಪಡಿಸಿ, ಉಳಿದ 13 ಸಚಿವರ ಸ್ವಯಂ ಘೋಷಿತ ಅಫಿಡವಿಟ್ಗಳನ್ನು ಈ ವಿಶ್ಲೇಷಣೆಗೆ ಒಳಪಡಿಸಲಾಗಿದೆ.

ಎಲ್ಲರ ಮೇಲೂ ಇವೆ ಕ್ರಿಮಿನಲ್ ಮೊಕದ್ದಮೆಗಳು
ಈ ವರದಿಯ ಪ್ರಕಾರ, ವಿಶ್ಲೇಷಣೆಗೆ ಒಳಪಟ್ಟ ಎಲ್ಲಾ 13 ಸಚಿವರು (ಶೇಕಡ 100 ರಷ್ಟು) ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಬಾಕಿ ಇರುವುದಾಗಿ ಕಾನೂನುಬದ್ಧವಾಗಿ ಘೋಷಿಸಿಕೊಂಡಿದ್ದಾರೆ. ಕಾನೂನಿನ ದೃಷ್ಟಿಯಲ್ಲಿ ಯಾವುದೇ ಸಚಿವರೂ ಕ್ಲೀನ್ ಚಿಟ್ ಹೊಂದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲದೆ ಇವರಲ್ಲಿ ಮೂವರು ಸಚಿವರು ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಆಸ್ತಿಯಲ್ಲಿ ಡಿಕೆಶಿ ಟಾಪ್, ಸಾಲದಲ್ಲೂ ಇವರೇ ನಂ.1
ರಾಜ್ಯ ಸಚಿವ ಸಂಪುಟದಲ್ಲಿರುವ ಬಹುತೇಕ ಎಲ್ಲರೂ ಕೋಟ್ಯಾಧಿಪತಿಗಳಾಗಿದ್ದು, ಅವರ ಸರಾಸರಿ ಆಸ್ತಿಯ ಮೌಲ್ಯ ಬರೋಬ್ಬರಿ ₹206.15 ಕೋಟಿ ರೂಪಾಯಿಗಳಾಗಿದೆ. ಈ ಪಟ್ಟಿಯಲ್ಲಿ ಕನಕಪುರ ಕ್ಷೇತ್ರದ ಸಚಿವರೂ ಆಗಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅತಿ ಹೆಚ್ಚು ಆಸ್ತಿ ಹೊಂದಿದ ಸಚಿವರಾಗಿ ಹೊರಹೊಮ್ಮಿದ್ದಾರೆ. ಅವರ ಒಟ್ಟು ಆಸ್ತಿಯ ಮೌಲ್ಯ ₹1,413.80 ಕೋಟಿ ರೂಪಾಯಿಗಳಾಗಿದೆ.
ಮತ್ತೊಂದೆಡೆ ಮಂಗಳೂರು ಕ್ಷೇತ್ರದ ಯು.ಟಿ. ಖಾದರ್ ಅವರು ಅತ್ಯಂತ ಕಡಿಮೆ ಆಸ್ತಿ ಘೋಷಿಸಿಕೊಂಡ ಸಚಿವರಾಗಿದ್ದು, ಇವರ ಒಟ್ಟು ಆಸ್ತಿ ₹6.97 ಕೋಟಿ ರೂಪಾಯಿಗಳಾಗಿದೆ. ವಿಶೇಷ ಅಂದ್ರೆ ಸಂಪುಟದ ಎಲ್ಲಾ 13 ಸಚಿವರೂ ತಮ ಮೇಲೆ ಸಾಲ ಇರುವುದಾಗಿ ಒಪ್ಪಿಕೊಂಡಿದ್ದಾರೆ. ಸಾಲದ ಪಟ್ಟಿಯಲ್ಲೂ ಸಿಎಂ ಡಿ.ಕೆ. ಶಿವಕುಮಾರ್ ಅವರೇ ಮೊದಲ ಸ್ಥಾನದಲ್ಲಿದ್ದು, ಅವರು ₹265.06 ಕೋಟಿ ರೂಪಾಯಿಗಳಷ್ಟು ಸಾಲ ಹೊಂದಿರುವುದಾಗಿ ಘೋಷಿಸಿದ್ದಾರೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಾನ
ಸಚಿವರ ವಿದ್ಯಾರ್ಹತೆಯನ್ನು ಗಮನಿಸುವುದಾದರೆ, ಮೂವರು ಸಚಿವರು (ಶೇ. 23) 10ನೇ ತರಗತಿಯಿಂದ 12ನೇ ತರಗತಿಯವರೆಗೆ ಓದಿದ್ದಾರೆ. ಉಳಿದ 10 ಸಚಿವರು (ಶೇ. 77) ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಉನ್ನತ ಶಿಕ್ಷಣವನ್ನು ಪೂರೈಸಿದ್ದಾರೆ. ಇನ್ನೂ ವಯಸ್ಸಿನ ಆಧಾರದ ಮೇಲೆ ವಿಂಗಡಣೆ ಮಾಡಿದಾಗ ಮೂವರು ಸಚಿವರು 40 ರಿಂದ 50 ವರ್ಷದ ವಯೋಮಾನದವರಾಗಿದ್ದ, 10 ಸಚಿವರು 51 ರಿಂದ 75 ವರ್ಷದ ವಯೋಮಾನದವರಾಗಿದ್ದಾರೆ.
ನೂತನ ಸಂಪುಟದಲ್ಲಿ ಮಹಿಳೆಯರಿಗಿಲ್ಲ ಸ್ಥಾನ
ಹೊಸದಾಗಿ ರಚನೆಯಾಗಿರುವ ಈ ಸಚಿವ ಸಂಪುಟದಲ್ಲಿ ಲಿಂಗ ಸಮಾನತೆಗೆ ಹಿನ್ನಡೆಯಾಗಿದ್ದು, 14 ಸಚಿವರ ಈ ಪಟ್ಟಿಯಲ್ಲಿ ಒಬ್ಬರೇ ಒಬ್ಬರು ಮಹಿಳಾ ಸಚಿವರಿಲ್ಲದಿರುವುದು ವರದಿಯಲ್ಲಿ ಎದ್ದುಕಾಣುವ ಮತ್ತೊಂದು ಪ್ರಮುಖ ಅಂಶವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಎಂ.ಬಿ. ಪಾಟೀಲ್, ಕೃಷ್ಣ ಬೈರೇಗೌಡ, ಈಶ್ವರ್ ಖಂಡ್ರೆ, ಯು.ಟಿ. ಖಾದರ್, ಯತೀಂದ್ರ ಸಿದ್ದರಾಮಯ್ಯ, ಶರಣಪ್ರಕಾಶ್ ಪಾಟೀಲ್ ಹಾಗೂ ಬೈರತಿ ಸುರೇಶ್ ಅವರು ಈ ನೂತನ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.












Click it and Unblock the Notifications