ಬಾದಾಮಿ ಕ್ಷೇತ್ರದ ಟಿಕೆಟ್ ಘೋಷಣೆ : ದೇವರಾಜ್ ಹೇಳಿದ್ದೇನು?
ಬಾಗಲಕೋಟೆ, ಏಪ್ರಿಲ್ 16 : '10 ವರ್ಷ ಪಕ್ಷಕ್ಕಾಗಿ ಪಟ್ಟ ಶ್ರಮಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಭೀತಿ ಇಲ್ಲ' ಎಂದು ದೇವರಾಜ್ ಪಾಟೀಲ್ ಹೇಳಿದ್ದಾರೆ.
2018ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರಕ್ಕೆ ದೇವರಾಜ್ ಪಾಟೀಲ್ ಅಭ್ಯರ್ಥಿಯಾಗಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಬಾದಾಮಿ ಕ್ಷೇತ್ರ ಹಲವು ಕಾರಣಗಳಿಂದಾಗಿ ಕುತೂಹಲಕ್ಕೆ ಕಾರಣವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಹಾಲಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅವರು ಸಹ ಸಿದ್ದರಾಮಯ್ಯ ಸ್ಪರ್ಧೆಗೆ ಒಪ್ಪಿಗೆ ನೀಡಿದ್ದರು.

ಆದರೆ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಬೇಕು ಎಂದು ಸೂಚನೆ ನೀಡಿದೆ. ಆದ್ದರಿಂದ ಬಾದಾಮಿ ಕ್ಷೇತ್ರಕ್ಕೆ ದೇವರಾಜ್ ಪಾಟೀಲ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ.
ದೇವರಾಜ್ ಪಾಟೀಲ್ ಹೇಳುವುದೇನು? : ಟಿಕೆಟ್ ಸಿಕ್ಕ ಬಳಿಕ ಮಾತನಾಡಿರುವ ದೇವರಾಜ್ ಪಾಟೀಲ್, 'ಟಿಕೆಟ್ ಸಿಕ್ಕಿರುವುದಕ್ಕೆ ಸಂತಸವಾಗಿದೆ. ನಾನು ಸಿದ್ದರಾಮಯ್ಯ ಅವರ ಆದರ್ಶಗಳನ್ನು ಪಾಲನೆ ಮಾಡುವವನು. ಅವರು ಸ್ಪರ್ಧೆ ಮಾಡಿದ್ದರೆ ಇನ್ನಷ್ಟು ಸಂತಸವಾಗುತ್ತಿತ್ತು' ಎಂದು ಹೇಳಿದರು.
'ಪಕ್ಷಕ್ಕಾಗಿ 10 ವರ್ಷ ಕೆಲಸ ಮಾಡಿದ್ದೇನೆ. ಶ್ರಮಕ್ಕೆ ಈಗ ಬೆಲೆ ಸಿಕ್ಕಿದೆ. ಕಳೆದ ಬಾರಿ ಟಿಕೆಟ್ ಸಿಕ್ಕಿತ್ತು. ರಾಜ್ಯ ನಾಯಕರು ನನ್ನ ಮನವೊಲಿಸಿ ಬಿ.ಬಿ.ಚಿಮ್ಮನಕಟ್ಟಿ ಅವರಿಗೆ ಅವಕಾಶ ನೀಡುವಂತೆ ಹೇಳಿದ್ದರು' ಎಂದರು.
'ಬಿ.ಬಿ.ಚಿಮ್ಮನಕಟ್ಟಿ ಅವರು ಹಿರಿಯರು. 40 ವರ್ಷಗಳಿಂದ ರಾಜಕಾರಣ ಮಾಡಿದ್ದಾರೆ. ಅವರು ಸಹಜವಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೈ ತಪ್ಪಿದಾಗ ಬೇಸರವಾಗುವುದು ಸಹಜ' ಎಂದು ದೇವರಾಜ್ ಹೇಳಿದರು.
People of north Karnataka had requested me to contest from Badami. I am grateful for their love & affection, but I have decided to contest only from Chamundeshwari
— Siddaramaiah (@siddaramaiah) April 16, 2018
Congratulations to candidates nominated to contest the Elections on a Congress ticket.
Let us bring Congress back!
ಸಿದ್ದರಾಮಯ್ಯ ಟ್ವಿಟ್ : ಬಾದಾಮಿಯಿಂದ ಸ್ಪರ್ಧೆ ಮಾಡುವುದಿಲ್ಲ. ಚಾಮುಂಡೇಶ್ವರಿಯಿಂದ ಮಾತ್ರ ಸ್ಪರ್ಧೆ ಮಾಡುತ್ತೇನೆ. ಉತ್ತರ ಕರ್ನಾಟಕ ಭಾಗದ ಜನರು ತೋರಿಸಿರುವ ಪ್ರೀತಿಗೆ ಧನ್ಯವಾದಗಳು ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.












Click it and Unblock the Notifications